ಬೆಂಗಳೂರು: ಸ್ಯಾಂಡಲ್ ವುಡ್ ಯುವ ನಟ ಸಂಚಾರಿ ವಿಜಯ್ ಇನ್ನಿಲ್ಲ

Prasthutha|

ಬೆಂಗಳೂರು: ಸ್ಯಾಂಡಲ್ ವುಡ್ ಯುವ ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರ ಹೋರಾಟದ ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

- Advertisement -

ಕಳೆದ ಶನಿವಾರ ತಡರಾತ್ರಿ ತನ್ನ ಸ್ನೇಹಿತ ನವೀನ್ ಜೊತೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ್ದ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಿಂದ ನವೀನ್ ಬೆನ್ನು ಮೂಳೆಗೆ ತೀವ್ರ ತರಹದ ಗಾಯವಾಗಿದ್ದರೆ, ಸಂಚಾರಿ ವಿಜಯ್ ಅವರ ತಲೆ ಹಾಗೂ ತೊಡೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದರು.

ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂಚಾರಿ ವಿಜಯ್ ಅವರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. ಯುವ ನಟನ ನಿಧನಕ್ಕೆ ಸ್ಯಾಂಡಲ್ ವುಡ್ ನ ಹಲವು ನಟರು ಕಂಬನಿ ಮಿಡಿದಿದ್ದಾರೆ.

- Advertisement -

2015 ರಲ್ಲಿ ತೆರೆ ಕಂಡಿದ್ದ ಬಿಎಸ್ ಲಿಂಗದೇವ್ರು ನಿರ್ದೇಶನದ ‘ನಾನು ಅವನಲ್ಲ.. ಅವಳು’ ಸಿನೆಮಾದ ನಟನೆಗಾಗಿ ವಿಜಯ್ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು. ‘ಸಂಚಾರಿ’ ಕಲಾ ತಂಡದ ಮೂಲಕ ಸಿನೆಮಾ ಕ್ಷೇತ್ರ ಪ್ರವೇಶಿಸಿದ್ದ ವಿಜಯ್ ‘ಸಂಚಾರಿ’ ಹೆಸರಿನ ಮೂಲಕವೇ ಮನೆ ಮಾತಾಗಿದ್ದರು.

ಮೃತ ಸಂಚಾರಿ ವಿಜಯ್ ಅವರ ಅಂಗಾಂಗ ದಾನಕ್ಕೆ ಕುಟುಂಬಿಕರು ನಿರ್ಧರಿಸಿದ್ದಾರೆ.

ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿ ಶಾಸಕ ಸಿಟಿ ರವಿ, ಚಿತ್ರನಟ ಕಿಚ್ಚ ಸುದೀಪ್ ಸಹಿತ ಹಲವು ಗಣ್ಯರು ಟ್ವೀಟ್ ಮಾಡಿದ್ದಾರೆ.

Join Whatsapp