NCB ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಮಾಲೀಕತ್ವದ ಸದ್ಗುರು ಬಾರ್ ಲೈಸೆನ್ಸ್ ರದ್ದು !

Prasthutha|

ಮುಂಬೈ: ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದರ ವೇಳೆ ದಾಳಿ ಮಾಡಿ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್’ನನ್ನು ಬಂಧಿಸುವ ಮೂಲಕ ಭಾರಿ ಸುದ್ದಿಯಾಗಿದ್ದ ಮಾಜಿ NCB ಅಧಿಕಾರಿ ಸಮೀರ್ ವಾಂಖೆಡೆಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ.

- Advertisement -

ಶಾರುಖ್ ಪುತ್ರನ ಬಂಧನದ ಬಳಿಕ ಸಾಕಷ್ಟು ವಿವಾದಕ್ಕೆ ಸಿಲುಕಿದ್ದ ಸಮೀರ್ ವಾಂಖೆಡೆಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ- NCBಯ ಮುಂಬೈಯ ಝೋನಲ್ ಅಧಿಕಾರಿ ಸ್ಥಾನದಿಂದ ವರ್ಗಾವಣೆ ಮಾಡಲಾಗಿತ್ತು. ಇದೀಗ ನವೀ ಮುಂಬಯಿಯಲ್ಲಿರುವ ಸಮೀರ್ ವಾಂಖೆಡೆ ಮಾಲೀಕತ್ವದ ಸದ್ಗುರು ಹೋಟೆಲ್ & ಬಾರ್’ಗೆ ನೀಡಲಾಗಿದ್ದ ಪರವಾನಿಗೆಯನ್ನು ಥಾಣೆ ಜಿಲ್ಲಾಧಿಕಾರಿ ರಾಜೇಶ್ ನರ್ವೇಕರ್ ರದ್ದು ಮಾಡಿದ್ದಾರೆ.

1997ರಲ್ಲಿ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸುವ ವೇಳೆ ಸಮೀರ್ ವಾಂಖೆಡೆ ತಮ್ಮ ವಯಸ್ಸನ್ನು ತಪ್ಪಾಗಿ ನಮೂದಿಸಿದ್ದಾರೆ.ಈ ಕಾರಣದಿಂದಾಗಿ ಅವರ ಬಾರ್ ಲೈಸೆನ್ಸ್ ಅನ್ನು ಜಿಲ್ಲಾಧಿಕಾರಿ ರದ್ದು ಮಾಡಿದ್ದಾರೆ.

- Advertisement -

ಸಮೀರ್ ವಾಂಖೆಡೆ ಹೆಸರಿನಲ್ಲಿ ಇರುವ ಹೊಟೇಲ್ & ಬಾರ್’ನ ಲೈಸೆನ್ಸ್ ರದ್ದು ಮಾಡುವಂತೆ ಆಗ್ರಹಿಸಿ NCP ಮುಖಂಡ, ಸಚಿವ ನವಾಬ್ ಮಲಿಕ್ ಈ ಹಿಂದೆಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ‘ಅಖಿಲ ಭಾರತೀಯ ಸೇವೆ’ಯಲ್ಲಿರುವ ಅಧಿಕಾರಿಯೊಬ್ಬರು ಬಾರ್ ಲೈಸೆನ್ಸ್ ಪಡೆಯಲು ಹೇಗೆ ಸಾಧ್ಯವಾಯಿತು? ಅವರು ಸುಳ್ಳು ದಾಖಲೆಗಳನ್ನು ನೀಡಿ ಅನುಮತಿ ಪಡೆದಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು, ಥಾಣೆ ಅಬಕಾರಿ ಅಧಿಕಾರಿಗಳ ವಿವರಣೆ ಹಾಗೂ ವಾಂಖೆಡೆ ಪರ ವಕೀಲರ ವಾದವನ್ನು ಆಲಿಸಿದ ಬಳಿಕ ಸದ್ಗುರು ಹೊಟೇಲ್ & ಬಾರ್’ಗೆ ನೀಡಲಾಗಿರುವ ಅನುಮತಿಯನ್ನು ರದ್ದುಮಾಡಿರುವುದಾಗಿ ಘೋಷಿಸಿದ್ದಾರೆ.

Join Whatsapp