ಸರ್ಕಾರಿ ಶಾಲಾ ಮಕ್ಕಳ ಪೋಷಕರಿಂದ 100 ರೂ. ದೇಣಿಗೆ: ರಾಜ್ಯ ಸರ್ಕಾರಕ್ಕೆ ದರಿದ್ರ ಬಡಿದಿದೆಯೆ? ಎಂದ ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಂದ ಮಾಸಿಕ 100 ರೂ.ದೇಣಿಗೆ ಪಡೆಯಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ಅಸಹ್ಯಕರ ಮತ್ತು ನಾಚಿಕೆಗೇಡು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರು ಬಹುತೇಕ ಬಡವರ ಮಕ್ಕಳು. ಸರ್ಕಾರ ಅವರಿಂದಲೂ ಪ್ರತಿ ತಿಂಗಳು ದುಡ್ಡು ಪೀಕಲು ಹೊರಟಿರುವುದು ಅಸಹ್ಯವಲ್ಲದೆ ಮತ್ತೇನು? ಬಡ ಮಕ್ಕಳ ಪೋಷಕರಿಂದ ದುಡ್ಡು ತೆಗೆದುಕೊಳ್ಳುವ ಸ್ಥಿತಿಗೆ ಸರ್ಕಾರ ತಲುಪಿದೆ ಎಂದರೆ ಅರ್ಥವೇನು? ಈ ಸರ್ಕಾರಕ್ಕೆ ದರಿದ್ರ ಬಡಿದಿದೆಯೆ? ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ. ಆದರೆ ಮರ್ಯಾದೆಯಿಲ್ಲದ ಈ ಸರ್ಕಾರ ಪೋಷಕರಿಂದಲೇ ಹಣದ ವಸೂಲಿಗೆ ಇಳಿದಿದೆ. ಶಾಲೆಗಳಿಗೂ ಅನುದಾನ ಕೊಡದಷ್ಟು ಪಾಪರ್ ಆಗಿದೆಯೇ ಈ ಸರ್ಕಾರ? 40% ಕಮೀಷನ್ ತಿಂದು ಕೊಬ್ಬಿದ ಗೂಳಿಗಳಾಗಿರುವ ಈ ಸರ್ಕಾರಕ್ಕೆ ಕಮೀಷನ್ ಹಣ ಸಾಕಾಗಲಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.

ಈಗ ಬಡ ಮಕ್ಕಳ ಪೋಷಕರ ಹಣಕ್ಕೂ ಕನ್ನ ಹಾಕಿ ಜೇಬು ತುಂಬಿಸಿಕೊಳ್ಳಲು ಈ ಆದೇಶವೆ? ಪೋಷಕರಿಂದಲೇ ಹಣ ಪೀಕುವ ಈ ಸರ್ಕಾರ, ಇನ್ನು ಮಕ್ಕಳಿಗೆ ಶೂ,ಸಾಕ್ಸ್, ಸಮವಸ್ತ್ರ, ಹಾಲು, ಬಿಸಿಯೂಟ ಹಾಗೂ ಪುಸ್ತಕ ಕೊಡುತ್ತಾರಾ? ಇದು ಮಾನಗೆಟ್ಟ ಸರ್ಕಾರವಲ್ಲವೆ?  ಬಡ ಮಕ್ಕಳ ಪೋಷಕರಿಂದ ಪ್ರತಿ ತಿಂಗಳು 100ಗೆ ಕೈ ಚಾಚುವ ದೈನೇಸಿ ಸ್ಥಿತಿಗೆ ಈ ಸರ್ಕಾರ ಬಂದಿದೆ. ಈ ಸರ್ಕಾರ ದಿವಾಳಿಯೆದ್ದು ಹೋಗಿರುವ ಸ್ಪಷ್ಟ ಲಕ್ಷಣವಿದು. ಬೊಮ್ಮಾಯಿಯವರೆ ಧಮ್-ತಾಕತ್ತು ಎಂದು ಭಾಷಣ ಬಿಗಿದರೆ ಸಾಲದು. ನಿಮ್ಮ ಧಮ್-ತಾಕತ್ತು ತೋರಿಸಬೇಕಿರುವುದು ಇಂತಹ ವಿಷಯದಲ್ಲಿ. ನಿಮಗೆ ನಿಜಕ್ಕೂ ತಾಕತ್ತಿದ್ದರೆ ಈ ಆದೇಶ ಹಿಂಪಡೆಯಿರಿ ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

Join Whatsapp