ಮಂಡ್ಯ ಮುಸ್ಕಾನ್ ಮಕ್ಕಾ ಪ್ರವಾಸ: ಗೃಹ ಸಚಿವರಿಗೆ ದೂರು ನೀಡಿದ ಬಲಪಂಥೀಯ ಗುಂಪು

Prasthutha|

ಬೆಂಗಳೂರು: ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ ಖಾನ್ ಕಳೆದ ವಾರ ಮಕ್ಕಾ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ ಇದನ್ನೇ ವಿವಾದ ಮಾಡಿದ್ದ ಕನ್ನಡದ ಮಾಧ್ಯಮಗಳು, ಪೊಲೀಸರಿಗೆ ಯಾಮಾರಿಸಿ ವಿದೇಶಕ್ಕೆ ಹಾರಿದ ಮುಸ್ಕಾನ್ ಎಂದು ತಲೆಬರಹ ನೀಡಿ ಸುಳ್ಳು ಸುದ್ದಿ ಪ್ರಕಟಿಸಿದ್ದವು. ಇದೀಗ ಮುಂದುವರಿದ ಭಾಗವಾಗಿ ಮುಸ್ಕಾನ್ ವಿದೇಶ ಪ್ರವಾಸ ಮಾಡಿದ ಹಿನ್ನೆಲೆಯಲ್ಲಿ ಬಲಪಂಥೀಯ ಗುಂಪುಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ದೂರನ್ನು ನೀಡಿದೆ.

- Advertisement -

ಗೃಹ ಸಚಿವ ಆರಗ ಜ್ಞಾನೇಂದ್ರರವರನ್ನು ಭೇಟಿ ಮಾಡಿರುವ ಬಲಪಂಥೀಯರ ಗುಂಪು, ಸೌದಿ ಅರೇಬಿಯಾಗೆ ಭೇಟಿ ನೀಡಿರುವ ಮುಸ್ಕಾನ್ ಮತ್ತವರ ಕುಟುಂಬಿಕರು ಯಾವುದೋ ನಿಷೇಧಿತ ಗುಂಪುಗಳನ್ನು ಭೇಟಿ ಮಾಡಿದ್ದಾರೆ. ಆದ್ದರಿಂದ ಮುಸ್ಕಾನ್’ರ ವಿದೇಶ ಪ್ರವಾಸದ ಕುರಿತು ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದೆ.

ಧಾರ್ಮಿಕ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ಮುಸ್ಕಾನ್ ಮತ್ತು ಅವರ ಕುಟುಂಬ ಪ್ರಯಾಣ ಬೆಳೆಸಿತ್ತು. ಆದರೆ ಇದನ್ನೇ ನೆಪವಾಗಿಸಿರುವ ಮಾಧ್ಯಮಗಳು ಮತ್ತು ಬಲಪಂಥೀಯರ ಗುಂಪು ವಿನಾಕಾರಣ ವಿವಾದ ಹುಟ್ಟು ಹಾಕುತ್ತಿದೆ. ಮಾಧ್ಯಮಗಳ ಸುದ್ದಿಗೆ ಕಳೆದ ದಿನ ಪೊಲೀಸ್ ವರಿಷ್ಠಾಧಿಕಾರಿ, ಮುಸ್ಕಾನ್ ವಿದೇಶ ಪ್ರಯಾಣಕ್ಕೆ ಅನಮತಿಯ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದರು.

Join Whatsapp