ರಾಹುಲ್ ಗಾಂಧಿ ನಡಿಗೆ ಜನಸಾಮಾನ್ಯರ ಕಡೆಗೆ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ‘ರಾಹುಲ್ ಗಾಂಧಿ ಅವರ ನಡಿಗೆ ಜನಸಾಮಾನ್ಯರ ಕಡೆಗೆ ಆಗಿತ್ತು. ದೇಶಾದ್ಯಂತ ಜನಸಾಮಾನ್ಯರ ಬಳಿಗೆ ಹೋಗಿ ಅವರ ನೋವನ್ನು ಖುದ್ದಾಗಿ ಆಲಿಸಿರುವ ಏಕೈಕ ನಾಯಕ ರಾಹುಲ್ ಗಾಂಧಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಣ್ಣಿಸಿದ್ದಾರೆ.

- Advertisement -

ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿ ನಂತರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನತೆಯ ಸಹಕಾರದಿಂದ ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ನಿಮ್ಮ ಕ್ಯಾಮೆರಾ ಕಣ್ಣುಗಳೇ ಸಾಕ್ಷಿ ಎಂದರು.

ರಾಷ್ಟ್ರ ರಾಜಕಾರಣವನ್ನು ಬೇರೆ ದಿಕ್ಕಿನೆಡೆ ತೆಗೆದುಕೊಂಡು ಹೋಗುವ ಆಂದೋಲನವಾಗಿ ಈ ಯಾತ್ರೆ ಸಾಗಿದೆ. ಇದು ಕೇವಲ ಯಾತ್ರೆಯಾಗಿ ಉಳಿದಿಲ್ಲ. ಇದರಲ್ಲಿ ನೀವು ನಾವು ಕಂಡಿದ್ದು, ಯುವಕರು, ಮಹಿಳೆಯರು, ಪುಟಾಣಿ ಮಕ್ಕಳ ಪ್ರೀತಿ ವಿಶ್ವಾಸ. ಇಂದಿರಾ ಗಾಂಧಿ ಅವರನ್ನು ನೋಡಲು ಜನ ಹೇಗೆ ನೂಕುನುಗ್ಗಲು ಮಾಡಿಕೊಂಡು ಬರುತ್ತಿದ್ದರೋ ಅದೇರೀತಿ ರಾಹುಲ್ ಗಾಂಧಿ ಅವರನ್ನು ನೋಡಲು ನೂರಾರು ಕಿ.ಮೀ ದೂರದಿಂದ ಮಕ್ಕಳು ತಮ್ಮ ತಂದೆ ತಾಯಂದಿರ ಜತೆ ಆಗಮಿಸುತ್ತಿದ್ದರು. ರಾಹುಲ್ ಗಾಂಧಿ ಅವರು ಸಾವಿರಾರು ಜನರ ಜತೆ ಮಾತನಾಡಿ, ನೀವು ಏನು ಮಾಡುತ್ತಿದ್ದೀರಿ, ಏನು ಓದುತ್ತಿದ್ದೀರಿ, ಮುಂದೆ ಏನು ಮಾಡುತ್ತೀರಿ ಎಂದು ಕೇಳಿ ಅವರ ಅಭಿಪ್ರಾಯ ಪಡೆದರು. ಬೆಳಗ್ಗೆ 5.30ಕ್ಕೆ ಎದ್ದು, 6.25ರ ವೇಳೆಗೆ ಪಾದಯಾತ್ರೆ ಆರಂಭಿಸುತ್ತಿದ್ದರು. ನಿಗದಿತ ನಡಿಗೆ ವೇಳಾಪಟ್ಟಿಯಲ್ಲಿ ಸ್ವಲ್ಪವೂ ಬದಲಾವಣೆ ಮಾಡಲಿಲ್ಲ. ನಾನು ತಡವಾಗಿ ಯಾತ್ರೆ ಆರಂಭಿಸೋಣ ಎಂದು ಮನವಿ ಮಾಡಿದಾಗ ಅದಕ್ಕೆ ಒಪ್ಪಲಿಲ್ಲ. ಇದು ನಮ್ಮಿಬ್ಬರ ನಡಿಗೆ ಮಾತ್ರವಲ್ಲ. 3500 ಕಿ.ಮೀ ದೂರ ಸಾಗಬೇಕು. ಹೀಗಾಗಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದರು. ಸಂಜೆ 4 ರಿಂದ ಮತ್ತೆ ಹೆಜ್ಜೆ ಹಾಕಿ ಎಲ್ಲಾ ಜನರ ಜತೆ ಮಾತನಾಡುತ್ತಿದ್ದರು ಎಂದು ಡಿಕೆಶಿ ಹೇಳಿದರು.

- Advertisement -

ಚಾಮರಾಜನಗರದಲ್ಲಿ ಆದಿವಾಸಿಗಳು, ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬದವರು, ರಾಯಚೂರಿನಲ್ಲಿ ದೇವದಾಸಿಗಳು ಸೇರಿದಂತೆ ನರೇಗಾ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಐಟಿ ಉದ್ಯೋಗಿಗಳು, ನಿರುದ್ಯೋಗಿ ಯುವಕರು, ರೈತರು, ನಿವೃತ್ತ ಸೈನಿಕರು, ವ್ಯಾಪಾರಸ್ಥರು, ಎಲ್ಲ ವರ್ಗದವರ ಜತೆ ಸಂವಾದ ನಡೆಸಿದರು.

ವಿಕಲಚೇತನ ಅತಿಥಿ ಶಿಕ್ಷಕಿ, ಮೆಕಾನಿಕ್ ಅವರ ಜತೆಗೆ ಚರ್ಚೆ ಸಂದರ್ಭದಲ್ಲಿ ಅವರು ಬಹಳ ಸ್ಪೂರ್ತಿದಾಯಕ ಅನುಭವ ಪಡೆದರು.

ರಾಹುಲ್ ಗಾಂಧಿ ಅವರ ದೈಹಿಕ ಕ್ಷಮತೆ ಒಂದೆಡೆಯಾದರೆ ಅವರ ಮಾನಸಿಕ ಕ್ಷಮತೆ ಬಹಳ ಬಲಿಷ್ಟವಾಗಿದೆ. ಅವರು ದೇಶ ಹಾಗೂ ಪಕ್ಷಕ್ಕಾಗಿ ಪ್ರಧಾನಮಂತ್ರಿ ಹುದ್ದೆ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದವರು.

ರಾಹುಲ್ ಗಾಂಧಿ ಅವರು ಕೇವಲ ರಾಷ್ಟ್ರೀಯ ಸಮಸ್ಯೆ ಮಾತ್ರವಲ್ಲ, ರಾಜ್ಯದಲ್ಲಿನ ಸಮಸ್ಯೆ ಬಗ್ಗೆಯೂ ಹೆಚ್ಚು ಗಮನ ಹರಿಸಿದರು. ರಾಜ್ಯದಲ್ಲಿ ದಕ್ಷ ಆಡಳಿತ ನೀಡಬೇಕು, ಭ್ರಷ್ಟ ಸರ್ಕಾ ಕಿತ್ತೊಗೆಯಬೇಕು, ಯುವಕರಿಗೆ ಆಗುತ್ತಿರುವ ಮೋಸ ತಡೆಯಬೇಕು ಎಂದು ಚಿಂತನೆ ನಡೆಸಿದ್ದಾರೆ. ಸ್ಥಳೀಯ ಭಾಷೆ, ಕೇಂದ್ರದ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ, ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆ ಆಗಬಾರದು ಎಂಬ ಸ್ಪಷ್ಟ ಸಂದೇಶ ನೀಡಿದರು. ನಿರುದ್ಯೋಗಿ ಯುವಕರ ಸಮಸ್ಯೆಯನ್ನು ಪ್ರತ್ಯೇಕವಾಗಿ ಆಲಿಸಿದ್ದಾರೆ.

ರಾಹುಲ್ ಗಾಂಧಿ ಅವರು ರಾಯಚೂರಿನಲ್ಲಿ ಸಭೆ ಮಾಡಿ ಯಾತ್ರೆ ಕುರಿತು ನಮ್ಮ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಯಾತ್ರೆಯನ್ನು ಮುಂದಿನ ದಿನಗಳಲ್ಲಿ ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಕಾರ್ಯಯೋಜನೆ ರೂಪಿಸುತ್ತೇವೆ. ಈ ಯಾತ್ರೆಯಲ್ಲಿ ಜನ ಹೇಳಿಕೊಂಡಿರುವ ಸಮಸ್ಯೆ ಬಗ್ಗೆ ನಾವು ಚರ್ಚಿಸಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುತ್ತೆವೆ.

ಈ ಯಾತ್ರೆ ಯಶಸ್ಸು ಕೇವಲ ಡಿ.ಕೆ. ಶಿವಕುಮಾರ್ ಅವರದಲ್ಲ. ನನ್ನ ಅಧಿಕಾರ ಸ್ವೀಕಾರ ಕಾರ್ಯಕ್ರಮ, ಕೋವಿಡ್ ಸಮಯದಲ್ಲಿ ಪಕ್ಷದ ನೆರವಿನ ಕಾರ್ಯಕ್ರಮಗಳು , ಮೇಕೆದಾಟು ಪಾದಯಾತ್ರೆ ಸೇರಿ ಒಂದೊಂದು ಹೋರಾಟವೂ ಒಂದೊಂದು ಮೈಲಿಗಲ್ಲು ಸಾಧಿಸಿದೆ. ಮೇಕೆದಾಟು ಪಾದಯಾತ್ರೆ ಒಂದು ಟ್ರೆಂಡ್ ಸೆಟ್ಟರ್ ಆಗಿದೆ. ಸ್ವಾತಂತ್ರ್ಯ ನಡಿಗೆ ಕೂಡ ಯಶಸ್ವಿಯಾಗಿತ್ತು. ಈ ಎಲ್ಲಾ ಅನುಭವಗಳಿಂದ ಈ ಯಾತ್ರೆ ಮಾಡಲು ಅನುಕೂಲವಾಯಿತು. ನಮ್ಮ ರಾಜ್ಯದಲ್ಲಿನ ಯಾತ್ರೆ ಬೇರೆ ರಾಜ್ಯಗಳಿಗೆ ಮಾದರಿ ಆಗಿದೆ. ಬೇರೆ ರಾಜ್ಯದವರು ಈ ಯಾತ್ರೆ ಆಯೋಜನೆ ಬಗ್ಗೆ ಪ್ರಶಂಸೆ ಮಾಡಿದ್ದಾರೆ.

ನಾನು ಈ ಸಂದರ್ಭದಲ್ಲಿ ಯಾತ್ರೆಗೆ ಬಂದ ಎಲ್ಲಾ ಕಾರ್ಯಕರ್ತರು, ನಾಯಕರು, ಪಕ್ಷಾತೀತವಾಗಿ ಬಂದ ನಾಗರೀಕ ಸಮಾಜದವರು, ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಎಲ್ಲಾ ವರ್ಗದವರಿಗೆ ಕೋಟಿ ನಮನ ಸಲ್ಲಿಸುತ್ತೇನೆ.

ಈ ಯಾತ್ರೆ ಒಂದು ಆಂದೋಲನವಾಗಿತ್ತು. ಇದು ಜನ ಸಂಪರ್ಕ ಯಾತ್ರೆ ಮಾತ್ರವಲ್ಲ, ದೇಶಕ್ಕೆ ಒಂದು ಹೋರಾಟ ಆಗಿತ್ತು. ಇಡೀ ದೇಶ ಕೋಮು ಸಾಮರಸ್ಯ ಬೆಸೆಯುವತ್ತ ಗಮನಹರಿಸುವಂತೆ ಮಾಡಿದೆ.
ಬೆಲೆ ಏರಿಕೆ, ರೈತರ ಸಮಸ್ಯೆ, ಭ್ರಷ್ಟಾಚಾರ, ನಿರುದ್ಯೋಗ, ಕೋಮು ದ್ವೇಷದ ವಿರುದ್ದದ ಈ ನಡಿಗೆ ಹಳ್ಳಿ, ಹಳ್ಳಿಯಲ್ಲೂ ಜನರ ಮನ ಮುಟ್ಟಿದೆ. ಈ ಬಗ್ಗೆ ರಾಹುಲ್ ಗಾಂಧಿ ಅವರು ಯಾತ್ರೆಯಲ್ಲಿ ಪ್ರಸ್ತಾಪ ಮಾಡಿದರೆ ಜನ ಜೋರಾಗಿ ಧ್ವನಿ ಎತ್ತುತ್ತಿದ್ದರು.

ವಿಶೇಷವಾಗಿ ಮಕ್ಕಳು ಯಾತ್ರೆಗೆ ಬಂದು ಭಾಗವಹಿಸಿದ್ದು ಅವಿಸ್ಮರಣೀಯ ಕ್ಷಣವಾಗಿತ್ತು.

ಇನ್ನೂ ಈ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ತಲೆಮಾರುಗಳ ನಡುವಣ ಅಂತರವನ್ನು ಭರ್ತಿ ಮಾಡಿದ್ದಾರೆ. ಮಕ್ಕಳಿಂದ ವೃದ್ಧರವರೆಗೆ, ರೈತರಿಂದ ಕಾರ್ಮಿಕರವರೆಗೆ, ವಿದ್ಯಾರ್ಥಿಗಳಿಂದ ಯುವಕರವರೆಗೆ ಎಲ್ಲರನ್ನೂ ಮುಟ್ಟಿದ್ದು ರಾಹುಲ್ ಗಾಂಧಿ. ಅವರ ಹೊರತಾಗಿ ಬೇರೆಯವರಿಂದ ಇದು ಅಸಾಧ್ಯ. ಇದೊಂದು ಕ್ರಾಂತಿಕಾರಿ ಯಾತ್ರೆ. ಈ ಯಾತ್ರೆಯಲ್ಲಿ ಜನರಿಂದ ಸಿಕ್ಕ ಪ್ರೀತಿ ಅನುಭವ ವರ್ಣಿಸಲು ಅಸಾಧ್ಯ. ಈ ಯಾತ್ರೆಯಲ್ಲಿ ನೋವು ತಂದ ವಿಚಾರ ಎಂದರೆ ನಮ್ಮ ಕಾರ್ಯಕರ್ತರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಪೊಲೀಸ್ ಹೆಣ್ಣು ಮಗಳು ನಿಧನರಾಗಿದ್ದು. ನಾನು ಇದೇ 28ರಂದು ಶಿವಮೊಗ್ಗಕ್ಕೆ ಭೇಟಿ ಕೊಟ್ಟು ಕಾರ್ಯಕರ್ತನ ಕುಟುಂಬಕ್ಕೆ ಘೋಷಣೆ ಮಾಡಿರುವಂತೆ 10 ಲಕ್ಷ ರು.ಪರಿಹಾರ ನೀಡಲಾಗುವುದು.

ಯಾತ್ರೆ ಅಂತಿಮ ದಿನ ರಾಯಚೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ನನ್ನ ಕಾಲದಲ್ಲಿ ಇಂತಹ ಐತಿಹಾಸಿಕ ಘಟ್ಟ ದಾಖಲಿಸುವ ಅವಕಾಶ ಸಿಕ್ಕಿತಲ್ಲ ಎಂಬ ತೃಪ್ತಿ, ಸಂತೋಷ ನನಗಿದೆ.
ದೇಶದುದ್ದಗಲ ಜನಸಾಮಾನ್ಯರ ನೋವನ್ನು ತಾನೇ ಖುದ್ದಾಗಿ ಬಂದು ಆಲಿಸಿದ ಏಕೈಕ ನಾಯಕ ಎಂದರೆ ರಾಹುಲ್ ಗಾಂಧಿ ಮಾತ್ರ. ಅವರು ದೇಶ, ರಾಜ್ಯ ಹಾಗೂ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ.
ಇದು ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಡೆಯ ಯಾತ್ರೆ ಆಗಿತ್ತು. ಅದೇ ರೀತಿ ಪಕ್ಷದ ಆಂತರಿಕ ಚುನಾವಣೆಯಲ್ಲಿ ನಮ್ಮ ರಾಜ್ಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿ ಆಯ್ಕೆ ಆದರು. ಇದು ದೇಶಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಹೆಚ್ಚಿನ ಶಕ್ತಿ ಬಂದಿದೆ.

ಭಾರತ್ ಜೋಡೋ ಯಾತ್ರೆಗೆ ನಿಮ್ಮ ನಾಯಕರು ಸರಿಯಾದ ಸಹಕಾರ ನೀಡಿಲ್ಲ ಎಂಬ ವರದಿಗಳು ಇವೆಯಲ್ಲ ಎಂಬ ಪ್ರಶ್ನೆಗೆ, ‘ಎಲ್ಲರೂ ಸಹಕಾರ ಕೊಟ್ಟ ಕಾರಣದಿಂದ ಈ ಯಾತ್ರೆ ಆಗಿದೆ. ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಿದ್ದಾರೆ. ಒಬ್ಬರು 10 ಗಾಡಿ ಜನ ತಂದರೆ, ಮತ್ತೊಬ್ಬರು 300 ಗಾಡಿ ಜನ ಕರೆತಂದಿದ್ದರು. ಕೆಲವರು 10 ಕಿ.ಮೀ ನಡೆದರೆ ಮತ್ತೊಬ್ಬರು 500 ಕಿ.ಮೀ ನಡೆದಿದ್ದಾರೆ. ಎಲ್ಲರ ಕೆಲಸದ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಯಾರು ಯಾವ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಪ್ರತಿ ಶಾಸಕ, ಮಾಜಿ ಶಾಸಕ ಹಾಗೂ ಪರಿಷತ್ ಸದಸ್ಯರು ಜನರನ್ನು ಕರೆತರುವಂತೆ ಮಾಡಿದ್ದೇವೆ. ನಾನು ಅಧ್ಯಕ್ಷನಾಗಿದ್ದ ಕಾರಣ ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇತ್ತು’ ಎಂದರು.

ಯಾತ್ರೆ ಕುರಿತು ಛಾಯಾಚಿತ್ರ ಪ್ರದರ್ಶನ ಯಾವಾಗ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ‘ ಇದಕ್ಕಾಗಿ ಒಂದು ಸಮಿತಿ ರಚಿಸಿ, ಯಾವ ಯಾವ ಘಟನೆಗಳು ಮುಖ್ಯ ಎಂದು ಆಯ್ಕೆ ಮಾಡಿ, ನಂತರ ಎಲ್ಲಾ ಜಿಲ್ಲೆಗಳಲ್ಲಿ ಛಾಯಾಚಿತ್ರ ಪ್ರದರ್ಶನ ಮಾಡಲಾಗುವುದು’ ಎಂದು ತಿಳಿಸಿದರು.

ಖರ್ಗೆ ಅವರು ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಐಸಿಸಿ ಮಹಾಧಿವೇಶನ ಮಾಡುತ್ತೀರಾ ಎಂದು ಕೇಳಿದಾಗ, ‘ ಖರ್ಗೆ ಅವರು ನಾಳೆ ಅಧಿಕಾರ ಸ್ವೀಕಾರ ಮಾಡಲಿ. ನಂತರ ನಾವು ಚರ್ಚೆ ಮಾಡಿ ನಿಮಗೆ ಮಾಹಿತಿ ನೀಡುತ್ತೇವೆ ‘ ಎಂದರು.

Join Whatsapp