ಬಿಜೆಪಿ ಸಂಸದನಿಂದ ನಿಂದನೆ: ಬಿಎಸ್​​ಪಿ ಸಂಸದ ಡ್ಯಾನಿಶ್ ಅಲಿ ಭೇಟಿ ಮಾಡಿದ ರಾಹುಲ್ ಗಾಂಧಿ

Prasthutha|

►“ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಖಾನ್” ಎಂದ ರಾಗಾ

- Advertisement -

ಹೊಸದಿಲ್ಲಿ: ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಗುರಿಯಾಗಿಸಿಕೊಂಡು ಬಿಜೆಪಿ ಸಂಸದ ರಮೇಶ್ ಬಿಧುರಿ ಮಾಡಿದ ನಿಂದನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಅವರನ್ನು ಭೇಟಿ ಮಾಡಿದರು.

 “ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಖಾನ್” ಎಂದು ಬಿಎಸ್​​ಪಿ ಸಂಸದರನ್ನು ಭೇಟಿ ಮಾಡಿದ ನಂತರ ರಾಹುಲ್ ಗಾಂಧಿ ಹೇಳಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಮುಸ್ಲಿಂ ಸಂಸದರ ಮೇಲೆ ನಿಂದಿಸಿದ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಏತನ್ಮಧ್ಯೆ, ಡ್ಯಾನಿಶ್ ಅಲಿ ಅವರು ಬಿಧುರಿ ವಿರುದ್ಧ ವಿಶೇಷ ಹಕ್ಕು ಮಂಡಿಸಿದ್ದಾರೆ.

- Advertisement -

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬಿಧುರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಂಸತ್ ತೊರೆಯುವ ಬಗ್ಗೆ ಯೋಚಿಸುತ್ತೇನೆ ಎಂದು ಅಲಿ ಹೇಳಿದ್ದಾರೆ. ಅಂದಹಾಗೆ ಬಿಎಸ್​​ಪಿ ವಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಭಾಗ ಅಲ್ಲ. ನನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಬೆಂಬಲವನ್ನು ನೀಡಲು ಅವರು ಇಲ್ಲಿಗೆ ಬಂದಿದ್ದಾರೆ. ನಾನು ಒಬ್ಬಂಟಿಯಲ್ಲ ಮತ್ತು ಪ್ರಜಾಪ್ರಭುತ್ವದೊಂದಿಗೆ ನಿಂತಿರುವ ಎಲ್ಲರೂ ನನ್ನೊಂದಿಗೆ ನಿಂತಿದ್ದಾರೆ ಎಂದು ಡ್ಯಾನಿಶ್ ಅಲಿ ಹೇಳಿದರು.

ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ನನಗಿದೆ. ಆದರೆ ಅವರು ಕ್ರಮ ಕೈಗೊಳ್ಳದಿದ್ದರೆ ನಾನು ಭಾರವಾದ ಹೃದಯದಿಂದ ಸಂಸತ್ತನ್ನು ತೊರೆಯುತ್ತೇನೆ, ಏಕೆಂದರೆ ಜನರು ನನ್ನನ್ನು ದ್ವೇಷದ ಭಾಷಣಗಳನ್ನು ಕೇಳಲು ಸಂಸತ್ತಿಗೆ ಕಳುಹಿಸಲಿಲ್ಲ. ಆರ್‌ಎಸ್‌ಎಸ್ ಶಾಖೆಗಳಲ್ಲಿ ಅಂತಹ ಭಾಷೆಯನ್ನು ಕಲಿಸಲಾಗುತ್ತಿದೆಯೇ? ಎಂದು ಡ್ಯಾನಿಶ್ ಅಲಿ ಕೇಳಿದ್ದಾರೆ.

Join Whatsapp