ಕಾಡಾನೆ ದಾಳಿಗೆ ವಿದ್ಯಾರ್ಥಿ ಬಲಿ ಪ್ರಕರಣ: ಅರಣ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು

Prasthutha|

ಸಿದ್ದಾಪುರ: ಕಾಡಾನೆ ದಾಳಿಗೆ ವಿದ್ಯಾರ್ಥಿ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

- Advertisement -

ಶುಕ್ರವಾರ ಸಂಜೆ ಸಿದ್ದಾಪುರ ಸಮೀಪದ ಅರೆಕಾಡು ರಸ್ತೆಯಲ್ಲಿ ಸ್ಕೇಟರ್‌ನಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ವತೇಕ್ರೆಯ ವಿದ್ಯಾರ್ಥಿ ಮೊಹಮ್ಮದ್ ಆಶಿಕ್ ಮೃತಪಟ್ಟಿದ್ದರು.

ಕಾಡಾನೆ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಂತ್ಯಸಂಸ್ಕಾರದ ಸಂದರ್ಭ ಸ್ಥಳಕ್ಕೆ ಆಗಮಿಸಿದ ಆರ್.ಎಫ್.ಓ ಅನನ್ಯಕುಮಾರ್ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

- Advertisement -

ಕಾರ್ಮಿಕ ಹೋರಾಟಗಾರ ಪಿ.ಆರ್ ಭರತ್ ಮಾತನಾಡಿ, ಕಾಡಾನೆ ಹಾವಳಿ ಮಿತಿ ಮೀರಿದೆ. ಆನೆ ಮಾನವ ಸಂಘರ್ಷದಿಂದ ಹಲವು ಅಮಾಯಕ ಜೀವಗಳು ಬಲಿಯಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ಮುಖ್ಯ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವ ಬಲಿಯಾದಾಗ ಮಾತ್ರ ಅರಣ್ಯ ಇಲಾಖೆಯವರು ಬಂದು ಮುಖ ತೋರಿಸುತ್ತಾರೆ ಎಂದರು.

ಎಸ್.ಡಿ.ಪಿ.ಐ ಮುಖಂಡ ಮುಸ್ತಫ ಮಾತನಾಡಿ, ಕಾಡಾನೆ ಹಾವಳಿಯಿಂದ ಕಾರ್ಮಿಕರ, ಬೆಳೆಗಾರರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಯದಿಂದ ಬದುಕುವ ಸನ್ನಿವೇಶ ಸೃಷ್ಟಿಯಾಗಿದೆ. ಬೆಳೆಗಾರರ ಫಸಲು ನಾಶವಾಗುತ್ತಿದೆ. ಆಟೋ ಚಾಲಕರು ಗ್ರಾಮೀಣ ಭಾಗಗಳಿಗೆ ಬಾಡಿಗೆಗೆ ತೆರಳಲು ಭಯಪಡುತ್ತಿದ್ದಾರೆ. ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ನೀಡುವ ಮೂಲಕ ಅರಣ್ಯ ಇಲಾಖೆ ಕೈತೊಳೆದುಕೊಳ್ಳುತ್ತಿದ್ದಾರೆ ಎಂದ ಅವರು, ವೈಜ್ಞಾನಿಕವಾಗಿ ಹಾಗೂ ಶಾಶ್ವತವಾಗಿ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಮತ್ತು ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. 19 ವರ್ಷದ ಮೃತ ವಿದ್ಯಾರ್ಥಿ ಕುಟುಂಬಕ್ಕೆ ರೂ 25 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಆರ್.ಎಫ್.ಓ ಅನನ್ಯ ಕುಮಾರ್ ಮಾತನಾಡಿ, ಒಂದು ವಾರದೊಳಗೆ ಮೃತರ ಕುಟುಂಬದವರ ಖಾತೆಗೆ ರೂ 7.50 ಲಕ್ಷ ಪರಿಹಾರ ಹಣವನ್ನು ಜಮಾ ಮಾಡಲಾಗುವುದು. ಮೃತರ ಪೋಷಕರಿಗೆ ತಿಂಗಳಿಗೆ ರೂ 2.5 ಸಾವಿರ ಮಾಸಾಶನ ನೀಡಲಾಗುವುದು. ಮೃತರ ಮನೆಯಲ್ಲಿ ವಿದ್ಯಾರ್ಥಿಗಳಿದ್ದಲ್ಲಿ ಅವರ ಶಾಲಾ ಶುಲ್ಕವನ್ನು ಭರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷ ಸಾಬು ವರ್ಗೀಸ್, ಸದಸ್ಯರಾದ ಸಂಶೀರ್, ಹಕೀಂ, ಸಫಿಯಾ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಮತ್ತಿತರರು ಇದ್ದರು.

Join Whatsapp