‘ನಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿವೆ’: ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಹೆಚ್.ಡಿ.ಕೆ

Prasthutha|

ಬೆಂಗಳೂರು: ಚಂದ್ರಯಾನ-3ರ ನೌಕೆಯನ್ನು ಉಡಾವಣೆ ಮಾಡಿ ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆ ಮಾಡಿದ ಇಸ್ರೋ ಸಂಸ್ಥೆಯನ್ನು ಹಾಗೂ ಬಾಹ್ಯಾಕಾಶ ವಿಜ್ಞಾನಿಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಭಿನಂದಿಸಿದ್ದಾರೆ.

- Advertisement -

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ನಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿವೆ. ಇಡೀ ದೇಶವೇ ಹೆಮ್ಮೆಪಡುತ್ತದೆ. 45 ದಿನಗಳ ಐತಿಹಾಸಿಕ ಚಂದ್ರಯಾನ-3 ಯಶಸ್ವಿಯಾಗಿ ಆರಂಭವಾಗಿದೆ. ಅಪರಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದಿರನ ಅಂಗಳಕ್ಕೆ ನೌಕೆಯನ್ನು ಉಡ್ದಯನ ಮಾಡಿದ ಇಸ್ರೋ, ಈ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸ ನನ್ನದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇಸ್ರೋದ ಪ್ರತಿ ಯೋಜನೆಗೂ ಕರ್ನಾಟಕದ ಕೊಡುಗೆ ಇರುತ್ತದೆ. ಅದೇ ರೀತಿ, ಚಂದ್ರಯಾನ-3ಕ್ಕೂ ಕರುನಾಡಿನ ಕಾಣಿಕೆ ಅಪಾರ. ಜಗತ್ತು ಭಾರತವನ್ನು ಕರ್ನಾಟಕದ ಮೂಲಕ ನೋಡುವ ಈ ಅವಿಸ್ಮರಣೀಯ ಕ್ಷಣವನ್ನು ದೃಶ್ಯ ಮಾಧ್ಯಮದ ಮೂಲಕ ನಾನೂ ಕಣ್ತುಂಬಿಕೊಂಡೆ ಎಂದು ಅವರು ಹೇಳಿದ್ದಾರೆ.

- Advertisement -

ಉಡಾವಣೆಯಾದ ಕೆಲ ಕ್ಷಣಗಳಲ್ಲೇ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದ್ದು, ಈ ಮೂಲಕ ಉಪಗ್ರಹವನ್ನು ಚಂದ್ರನ ಮೇಲೆ ಇಳಿಸುವ 6 ವಾರಗಳ ರೋಮಾಂಚನಕಾರಿ ಮಿಷನ್’ಗೆ ಚಾಲನೆ ದೊರೆತಿದೆ. ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ಸೇರಿ ಅವರ ತಂಡದ ಎಲ್ಲಾ ವಿಜ್ಞಾನಿಗಳು, ತಾಂತ್ರಿಕ ನಿಪುಣರು, ಇತರೆ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದ್ದಾರೆ.

Join Whatsapp