ಉಗ್ರರ ಪರ ಗೋಡೆ ಬರಹ ಪ್ರಕರಣ | ಯಾರನ್ನೂ ಬಂಧಿಸಿಲ್ಲ : ಪೊಲೀಸ್ ಆಯುಕ್ತರ ಸ್ಪಷ್ಟನೆ

Prasthutha|

ಮಂಗಳೂರು : ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಪ್ರಕರಣಗಳಿಗೆ ಸಂಬಂಧಿಸಿ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕೆಯೊಂದರ ಜೊತೆ ಮಾತನಾಡಿರುವ ಅವರು, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.

- Advertisement -

“ಮಂಗಳೂರಿನಲ್ಲಿ ಕಳೆದ ವಾರ ಬೆಳಕಿಗೆ ಬಂದಿದ್ದ ಎರಡೂ ಗೋಡೆ ಬರಹ ಪ್ರಕರಣಗಳ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಪ್ರಕರಣದಲ್ಲಿ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಈ ತನಿಖೆಯ ಭಾಗವಾಗಿ ಹಲವು ಮಂದಿ ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆದರೆ, ಇಲ್ಲಿ ವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಂಶ ಬಹಿರಂಗ ಪಡಿಸಲು ಸಾಧ್ಯವಾಗುತ್ತದೆ’’ ಎಂದು ಅವರು ಹೇಳಿದ್ದಾರೆ.

ವಿಶೇಷ ತನಿಖಾ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಪ್ರಸ್ತುತ ಪ್ರಕರಣ ತನಿಖೆಯ ಹಂತದಲ್ಲಿದ್ದು, ಹೆಚ್ಚಿನ ವಿವರ ನೀಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

- Advertisement -

ನ.27ರಂದು ಬಿಜೈ ಸಮೀಪ ಕದ್ರಿ ಕಂಬಳ ಜಂಕ್ಷನ್ ಕಟ್ಟಡದ ಆವರಣ ಗೋಡೆಯಲ್ಲಿ ಹಾಗೂ ನ.29ರಂದು ಮಂಗಳೂರು ನ್ಯಾಯಾಲಯ ಆವರಣದ ಕಟ್ಟಡವೊಂದರ ಹಳೆಯ ಗೋಡೆಯಲ್ಲಿ ಉಗ್ರರ ಪರ ಬರಹ ಪತ್ತೆಯಾಗಿತ್ತು.

ಸಿಸಿ ಕ್ಯಾಮೆರಾ ದಾಖಲೆಗಳು ಮತ್ತು ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಮೂವರನ್ನು ವಶಕ್ಕೆ ಪಡೆದು ಅವರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Join Whatsapp