ಫೆ.21ರಂದು ಬೆಳಗಾವಿಯಲ್ಲಿ 1 ಲಕ್ಷ ಕನ್ನಡಿಗರಿಂದ ಬೃಹತ್ ಪ್ರತಿಭಟನೆ : ವಾಟಾಳ್ ನಾಗರಾಜ್

Prasthutha|

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ, ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸುವಂತೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿವೆ.

- Advertisement -

ಪ್ರತಿಭಟನೆಯ ಹಿನ್ನೆಲೆಯಲ್ಲಿ, ಇಂದು ರಾಜ್ಯಾದ್ಯಂತ ‘ರೈಲು ಬಂದ್’ ಹೋರಾಟಕ್ಕೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಉದ್ಧವ್ ಠಾಕ್ರೆ ವಿರುದ್ಧ ಹೋರಾಟ ನಡೆಯಲಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದಾಗಬೇಕು. ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಇಂದು ರೈಲು ತಡೆಗೆ ಕರೆ ಕೊಟ್ಟಿದ್ದೆವು. ಎಲ್ಲಾ ರೈಲು ನಿಲ್ದಾಣಗಳಲ್ಲಿ ಪೊಲೀಸ್ ಹಾಕಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಹೇಳಿದ್ದಾರೆ.  

- Advertisement -

ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸುವಂತೆ ಒತ್ತಾಯಿಸಿ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ, ಫೆ.21ರಂದು ಒಂದು ಲಕ್ಷ ಜನರೊಂದಿಗೆ ಬೆಳಗಾವಿಗೆ ಮುತ್ತಿಗೆ ಹಾಕಿ, ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಕನ್ನಡ ಒಕ್ಕೂಟ ಫೆ.21ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಉಗ್ರ ಹೋರಾಟ ಕೈಗೊಳ್ಳಲಿದೆ. ವಾಟಾಳ್ ನಾಗರಾಜ್ ಅವರಿಗೆ ನಮ್ಮ ಬೆಂಬಲ ಸಂಪೂರ್ಣವಿದೆ ಎಂದು ಕರವೇ ಶಿವರಾಮೇಗೌಡ ತಿಳಿಸಿದ್ದಾರೆ.

ರಾಜ್ಯ ಸರಕಾರ ಕನ್ನಡಪರ ಹೋರಾಟಗಾರರ ಮೇಲೆ ದ್ವೇಷ ಕಾರುತ್ತಿದೆ. ಉದ್ಧವ್ ಠಾಕ್ರೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಯಡಿಯೂರಪ್ಪನವರೇ ಆಗಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡದಿರುತ್ತಿದ್ದರೆ, ಈ ಬೆಳವಣಿಗೆ ಆಗ್ತಿರಲಿಲ್ಲ ಎಂದು ಕನ್ನಡ ಹೋರಾಟಗಾರ ಸಾ.ರಾ. ಗೋವಿಂದ್ ಆಪಾದಿಸಿದ್ದಾರೆ.

ಫೆ.21ರಂದು ಎಲ್ಲಾ ಕನ್ನಡಿಗರು ಬೆಳಗಾವಿಗೆ ಬರಬೇಕು. ಮರಾಠಿ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯೇ ಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಹಲವು ಕನ್ನಡ ಪರ ಹೋರಾಟಗಾರರು, ಪ್ರಮುಖರು ಉಪಸ್ಥಿತರಿದ್ದರು.

Join Whatsapp