ದೆಹಲಿ ಗಲಭೆ | ಪೊಲೀಸ್ ತನಿಖೆ ಅಮಾಯಕರ ವಿರುದ್ಧದ ಕ್ರಿಮಿನಲ್ ಸಂಚು : ಪ್ರಶಾಂತ್ ಭೂಷಣ್

Prasthutha|

ನವದೆಹಲಿ : ದೆಹಲಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್ ತನಿಖೆ ಸಂಚುಕೋರರನ್ನು ರಕ್ಷಿಸುವ ಮತ್ತು ಅಮಾಯಕರನ್ನು ಸಿಲುಕಿಸುವ ಒಂದು ‘ಕ್ರಿಮಿನಲ್ ಸಂಚು’ ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ದೆಹಲಿ ಗಲಭೆಗೆ ಸಂಬಂಧಿಸಿ ಭಯೋತ್ಪಾದನಾ ತಡೆ ಕಾನೂನುಗಳನ್ನು ಎದುರಿಸುತ್ತಿರುವವರ ಬೆಂಬಲಾರ್ಥವಾಗಿ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾತುಗಳನ್ನಾಡಿದರು.

- Advertisement -

“ಅಸಂವಿಧಾನಾತ್ಮಕ ಕಾನೂನಿನ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರು ಮತ್ತು ಅವರನ್ನು ಬೆಂಬಲಿಸಿದ್ದ ಅಮಾಯಕ ಜನರನ್ನು ಸಿಲುಕಿಸುತ್ತಿರುವುದು ದೆಹಲಿ ಪೊಲೀಸರ ಕ್ರಿಮಿನಲ್ ಸಂಚು ಆಗಿದೆ. ಇದೇ ವೇಳೆ ಗಲಭೆ ಸಂಚಿನಲ್ಲಿ ಭಾಗಿಯಾದ ನೇರ ಸಾಕ್ಷ್ಯವಿದ್ದಾಗ್ಯೂ, ಕಾನೂನಿನ ಪರವಿದ್ದವರನ್ನು ಕಾಪಾಡುವ ಸಂಚೂ ಇದಾಗಿದೆ’’ ಎಂದು ಅವರು ಹೇಳಿದ್ದಾರೆ.

ಬಂಧಿತ ಪೌರತ್ವ ಹೋರಾಟಗಾರರ ವಿರುದ್ಧ 17,000 ಪುಟಗಳ ದೋಷಾರೋಪ ಪಟ್ಟಿ ದಾಖಲಿಸುವುದಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶಾಂತ್ ಭೂಷಣ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಭಾನುವಾರವಷ್ಟೇ ಬಂಧನವಾಗಿದ್ದ ಜೆಎನ್ ಯು ಮಾಜಿ ವಿದ್ಯಾರ್ಧಿ ನಾಯಕ ಉಮರ್ ಖಾಲಿದ್ ವಿರುದ್ಧವೂ ದೋಷಾರೋಪ ಪಟ್ಟಿ ದಾಖಲಾಗಿದೆ. ಖಾಲಿದ್ ಅವರ ಹೆತ್ತವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಆದರೆ, ಅವರು ಯಾವುದೇ ವಿಷಯಗಳನ್ನು ಮಾತನಾಡಲಿಲ್ಲ. ಖಾಲಿದ್ ಅವರ ತಾಯಿ ಸಬೀಹಾ ಖಾನುಮ್ “ನಾವೆಲ್ಲಾ ಉಮರ್ ಖಾಲಿದರು’’ ಎಂಬ ಹಿಂದಿ ಮುದ್ರಣವುಳ್ಳ ಫೇಸ್ ಮಾಸ್ಕ್ ಅನ್ನು ಧರಿಸಿದ್ದರು.

- Advertisement -

Join Whatsapp