100 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿದ್ದೂ ತಪ್ಪಾಯಿತು | ಮುಸ್ಲಿಮ್ ಯುವಕನ ಬೆನ್ನು ಮೂಳೆ ಮುರಿದ ಪೊಲೀಸರು

Prasthutha|

ಹೊಸದಿಲ್ಲಿ : ಮನೆ ಸಮೀಪ ನಡೆಯುತ್ತಿದ್ದ ಜಗಳದ ಬಗ್ಗೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ ಕಾರಣಕ್ಕೆ ಪೊಲೀಸರು ಕರೆ ಮಾಡಿದ ಮುಸ್ಲಿಂ ಯುವಕನನ್ನೇ ಠಾಣೆಗೆ ಕೊರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿ, ಬೆನ್ನು ಮೂಳೆ ಮುರಿದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ವಾಸಿಮ್ ಖಾನ್ ಹಲ್ಲೆಗೊಳಗಾದ ಮುಸ್ಲಿಂ ಯುವಕ. ಪೊಲೀಸರ ಹಲ್ಲೆಯ ತೀವ್ರತೆಗೆ ಅವರ ಬೆನ್ನು ಮೂಳೆ ಮುರಿದಿದ್ದು, ಯುವಕ ಹಾಸಿಗೆ ಹಿಡಿದಿದ್ದಾನೆ.

- Advertisement -

ದೆಹಲಿಯ ಹಾಜಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 17ರಂದು ರಾತ್ರಿ ಇಬ್ಬರು ವ್ಯಕ್ತಿಗಳ ನಡುವೆ ಉಂಟಾದ ಜಗಳ ವಿಕೋಪಕ್ಕೆ ಹೋಗಿ ಅದು ಎರಡು ಗುಂಪುಗಳ ಜಗಳವಾಗಿ ಮಾರ್ಪಟ್ಟಿತ್ತು. ಜಗಳ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಕೆಲವರು ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸುತ್ತಾರೆ. ಆದರೆ ಪೊಲೀಸರು ಸ್ಥಳಕ್ಕೆ ಆಗಮಿಸಿಲ್ಲ. ರಾತ್ರಿ 10 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಪೊಲೀಸರು , ಸಹಾಯವಾಣಿಗೆ ಕರೆ ಮಾಡಿದವರು ಯಾರು ಎಂದು ಪ್ರಶ್ನಿಸಿದರು. ಆಗ ಸಮೀಪದಲ್ಲೇ ಇದ್ದ ವಾಸಿಮ್ ಖಾನ್ ನಾನೇ ಕರೆ ಮಾಡಿದ್ದು ಎಂದು ಹೇಳುತ್ತಾರೆ. ತಕ್ಷಣ ಏಕಾಏಕಿ ವಾಸಿಮ್ ಅವರನ್ನು ಪೊಲೀಸರು ತಮ್ಮ ವಾಹನದಲ್ಲಿ ಕೂರಿಸಿಕೊಂಡು ಫತೇಹಪುರ ಬೇರಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಾರೆ. ಅಲ್ಲಿ ಇನ್ಸ್ ಪೆಕ್ಟರ್ ಸತ್ಯೇಂದ್ರ, ಸಿಬ್ಬಂದಿ ಗೋಲಿಯಾ ಮತ್ತು ಜಿತೇಂದ್ರ ಅವರು ವಾಸಿಮ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಮೇ 18ರಂದು ಬೆಳಗ್ಗಿನ ಜಾವ 2.30ರ ವೇಳೆಗೆ ಬಿಟ್ಟು ಕಳುಹಿಸುತ್ತಾರೆ.

ತೀವ್ರ ಹಲ್ಲೆಯಿಂದ ಬಸವಳಿದಿದ್ದ ವಾಸಿಮ್ ಖಾನ್ ಹೇಗೋ ಮನೆಗೆ ಬಂದು ಅಲ್ಲಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಬೆನ್ನು ಮೂಳೆ ಮುರಿದಿರುವುದು ದೃಢಪಡುತ್ತದೆ. ಬಳಿಕ ಮೂವರು ಪೊಲೀಸ್ ಸಿಬ್ಬಂದಿ ವಿರುದ್ಧ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆರೋಪಿ ಪೊಲೀಸರ ವಿರುದ್ಧ ಐಪಿಸಿ 308,326,331,342,348 ಕಲಂಗಳಡಿ ಪ್ರಕರಣ ದಾಖಲಾಗಿದೆ.

Join Whatsapp