ನಾಳೆ ಪ್ರಧಾನಿ ಮೋದಿ ಮಂಗಳೂರಿಗೆ: ಎಲ್ಲೆಡೆ ಪೊಲೀಸ್ ಸರ್ಪಗಾವಲು

Prasthutha|

►ವಾಹನ ಸಂಚಾರದಲ್ಲಿ ಬದಲಾವಣೆ, ಶಾಲಾ-ಕಾಲೇಜುಗಳಿಗೆ ರಜೆ

- Advertisement -

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಂಗಳೂರಿಗೆ ಭೇಟಿ ನೀಡಲಿದ್ದು, ನವ ಮಂಗಳೂರು ಬಂದರು ಪ್ರಾಧಿಕಾರ-ಎನ್ ಎಂಪಿಎದ ಆವರಣ ಮತ್ತು ಗೋಲ್ಡ್ ಫಿಂಚ್ ಸಿಟಿಯಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣಗೊಂಡಿದೆ.


ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಹಾಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಯಾಗಿದ್ದು, ಮಂಗಳೂರು ನಗರಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಎಸ್ ಜಿಪಿ ಅಧಿಕಾರಿಗಳು ವೇದಿಕೆಯ ಭದ್ರತೆ ಪರಿಶೀಲನೆ ನಡೆಸಿದ್ದು, ಕಾರ್ಯಕ್ರಮದ ಸುತ್ತ ತಡೆ ಬೇಲಿ ನಿರ್ಮಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಮಂಗಳೂರಿಗೆ ಭೇಟಿ ನೀಡಿ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ನಡೆಸಿದರು. ಭದ್ರತೆಗೆ ಸುಮಾರು 3000 ಜನ ಪೊಲೀಸರನ್ನು ನಿಯೋಜಿಸಲಾಗಿದೆ.

- Advertisement -


ಪ್ರಧಾನಿ ಮೋದಿ ಅವರು ಶುಕ್ರವಾರ ಮಧ್ಯಾಹ್ನ 12.55 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ಸಮಾವೇಶದಲ್ಲಿ ಮೋದಿ ಮಾತನಾಡಲಿದ್ದಾರೆ.
ಮೋದಿ ಮಂಗಳೂರಿನಲ್ಲಿ ಸುಮಾರು 3800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ನವಮಂಗಳೂರು ಬಂದರು ಪ್ರಾಧಿಕಾರವು ಕೈಗೆತ್ತಿಕೊಂಡಿರುವ ಕಂಟೈನರ್ಗಳು ಮತ್ತು ಇತರ ಸರಕುಗಳನ್ನು ನಿರ್ವಹಿಸಲು ಲಂಗರು ನಂ. 14 ರ ಯಾಂತ್ರೀಕರಣಕ್ಕಾಗಿ 280 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಯನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ.


ಯಾಂತ್ರೀಕೃತ ಟರ್ಮಿನಲ್ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಟರ್ನ್ ಆರೌಂಡ್ (ಸುತ್ತುವ) ಸಮಯ, ಪೂರ್ವ-ಲಂಗರು ವಿಳಂಬ ಮತ್ತು ಬಂದರಿನಲ್ಲಿ ವಾಸಿಸುವ ಸಮಯವನ್ನು ಸುಮಾರು ಶೇಕಡಾ 35 ರಷ್ಟು ಕಡಿಮೆ ಮಾಡುತ್ತದೆ, ಇದರಿಂದಾಗಿ ವ್ಯಾಪಾರ ವಾತಾವರಣಕ್ಕೆ ಉತ್ತೇಜನ ಲಭಿಸುತ್ತದೆ. ಯೋಜನೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ, ಆ ಮೂಲಕ ನಿರ್ವಹಣಾ ಸಾಮರ್ಥ್ಯಕ್ಕೆ 4.2 ಎಂಟಿಪಿಎ ಅನ್ನು ಸೇರಿಸಲಾಗಿದೆ, ಇದು 2025 ರ ವೇಳೆಗೆ 6 ಎಂಟಿಪಿಎಗೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.


ಪ್ರಧಾನಮಂತ್ರಿ, ಬಂದರು ಕೈಗೆತ್ತಿಕೊಂಡಿರುವ ಸುಮಾರು 1000 ಕೋಟಿ ರೂ.ಗಳ ಐದು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಅತ್ಯಾಧುನಿಕ ಕ್ರಯೋಜೆನಿಕ್ ಎಲ್ ಪಿಜಿ ಶೇಖರಣೆ ಟ್ಯಾಂಕ್ ಟರ್ಮಿನಲ್ ಹೊಂದಿರುವ ಇಂಟಿಗ್ರೇಟೆಡ್ ಎಲ್ ಪಿಜಿ ಮತ್ತು ಬಲ್ಕ್ ಲಿಕ್ವಿಡ್ ಪಿಒಎಲ್ ಸೌಲಭ್ಯವು 45,000 ಟನ್ ಗಳ ಪೂರ್ಣ ತುಂಬಿರುವ ವಿಎಲ್ ಜಿಸಿ (ಬಹಳ ದೊಡ್ಡ ಅನಿಲ ವಾಹಕಗಳು) ಅನ್ನು ಅತ್ಯಂತ ದಕ್ಷ ರೀತಿಯಲ್ಲಿ ಇಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಕೈಗೆತ್ತಿಕೊಂಡಿರುವ ಎರಡು ಯೋಜನೆಗಳಾದ ಬಿಎಸ್ ವಿಐ ಉನ್ನತೀಕರಣ ಯೋಜನೆ ಮತ್ತು ಸಮುದ್ರ ನೀರು ಶುದ್ಧೀಕರಣ ಘಟಕವನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ.
ವಾಹನ ಸಂಚಾರದಲ್ಲಿ ಬದಲಾವಣೆ

ಪ್ರಧಾನ ಮಂತ್ರಿಯವರು ಎಸ್ ಪಿ ಜಿ ಭದ್ರತೆಯನ್ನು ಹೊಂದಿದವರಾಗಿದ್ದು, ಅವರು ಭಾಗವಹಿಸುವ ಕಾರ್ಯಕ್ರಮದ ಸ್ಥಳವಾದ ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸುವ ಸಮಯದಲ್ಲಿ ಹಾಗೂ ಅವರು ಸಂಚರಿಸುವ ರಸ್ತೆಯಾದ ಕೂಳೂರು ಜಂಕ್ಷನ್ ನಿಂದ ಕೊಟ್ಟಾರ ಚೌಕಿ ಜಂಕ್ಷನ್ ವರೆಗಿನ ರಸ್ತೆಯಲ್ಲಿ ದಿನಾಂಕ 02-9-2022 ರಂದು ಬೆಳಗ್ಗೆ 6 ಗಂಟೆಯಿಂದ ಸಾಮಾನ್ಯ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ.
ಕೆಪಿಸಿ ಕಡೆಯಿಂದ ಸಾರ್ವಜನಿಕ ಸಮಾವೇಶಕ್ಕೆ ಆಗಮಿಸುವ ಲಘುವಾಹನ ಮತ್ತು ದ್ವಿಚಕ್ರ ವಾಹನದಾರರು ವಾಹನ ಪಾರ್ಕಿಂಗ್ ಗಾಗಿ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದ ಪೂರ್ವಕ್ಕೆ ಇರುವ ಬಯಲು ಪಾರ್ಕಿಂಗ್ ಸ್ಥಳಕ್ಕೆ ಕೊಟ್ಟಾರ ಚೌಕಿಯಿಂದ ಮಾಲೇಮಾರ್ ಮುಖಾಂತರ ಹಾಗೂ ಅಮೆಝಾನ್ ಗೋಡೌನ್ ಪಕ್ಕದಲ್ಲಿನ ಮಾರ್ಗದ ಮುಖಾಂತರ ಹಾಗೂ ಕೂಳೂರು ಹಾಗೂ ಕಾವೂರು ಜಂಕ್ಷನ್ ಕಡೆಯಿಂದ ಆಗಮಿಸುವ ಲಘು ವಾಹನಗಳು ಉರುಂಡಾಡಿ ರಸ್ತೆ ಹಾಗೂ ಕೂಳೂರಿನ ಟಾಟಾ ಶೋ ರೂಮ್ ಮುಂದೆ ಇರುವ ಕೂಳೂರು- ಕಾವೂರು ರಸ್ತೆ ಮುಖಾಂತರ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಅವಕಾಶವಿರುತ್ತದೆ.


ಉಡುಪಿ ಕಡೆಯಿಂದ ಬರುವ ಘನ ವಾಹನಗಳು, ಗೂಡ್ಸ್ ವಾಹನಗಳು ಪಡುಬಿದ್ರಿ ಜಂಕ್ಷನ್ ನಿಂದ ಕಾರ್ಕಳ-ಬೆಳ್ಮಣ್ ಮಾರ್ಗವಾಗಿ ಮೂಡಬಿದ್ರೆ, ಕಿನ್ನಿಗೋಳಿ ಮೂಲಕ ಮಂಗಳೂರು, ಬಂಟ್ವಾಳ, ಮಲ್ಕಾರ್, ಮುಡಿಪು, ತೊಕ್ಕೊಟ್ಟು, ಪುತ್ತೂರು, ಬೆಂಗಳೂರು, ಮೈಸೂರು ಕಡೆಗೆ ಸಂಚರಿಸುವುದು.
ಇನ್ನಿತರ ಲಘು ವಾಹನಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಮುಲ್ಕಿಯಿಂದ ಕಿನ್ನಿಗೋಳಿ-ವಿಜಯ ಸನ್ನಿಧಿ-ಮೂರು ಕಾವೇರಿ- ಕಟೀಲು-ಬಜೈ- ಕೈಕಂಬ- ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡಬಿದ್ರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುವುದು.
ಸುರತ್ಕಲ್ ನಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಕಾನ ರಸ್ತೆ- ಜೋಕಟ್ಟೆ ಪೂರ್ಕೋಡಿ- ಬಜ್ಜೆ – `ಕೈಕಂಬ-ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡಬಿದ್ರೆ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುವುದು.


ತಲಪಾಡಿ, ಉಳ್ಳಾಲ ಕಡೆಯಿಂದ ಬಿ ಸಿ ರೋಡ್, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬೆಂಗಳೂರು, ಮೈಸೂರು ಕಡೆಗೆ ಹೋಗುವ ವಾಹನಗಳು, ಕ.ಸಿ.ರೋಡ್ ಹಾಗೂ ತೊಕ್ಕೊಟ್ಟು-ಮುಡಿಪು ಮಾರ್ಗವಾಗಿ ಬಿ ಸಿ ರೋಡ್ ಕಡೆಗೆ ಸಂಚರಿಸುವುದು ಹಾಗೂ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ನಂತೂರು- ವಾಮಂಜೂರು- ಗುರುಪುರ, ಕೈಕಂಬ ಬಜ್ಜೆ- ಕಟೀಲ್- ಕಿನ್ನಿಗೋಳಿ – ಮುಲ್ಕಿ ಮಾರ್ಗವಾಗಿ ಉಡುಪಿ ಕಡೆಗೆ ಮುಂದುವರಿಯುವುದು.
ಬಂಗ್ರ ಕೂಳೂರು ಸಾರ್ವಜನಿಕ ಸಮಾವೇಶ ಸ್ಥಳದಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಎಸ್ ಪಿ ಜಿ ಭದ್ರತೆ ಹೊಂದಿರುವುದರಿಂದ ಕೆ.ಪಿ.ಟಿ ಜಂಕ್ಷನ್ ನಿಂದ ಎನ್.ಎ.ಪಿ.ಎ. ಜಂಕ್ಷನ್ ವರೆಗಿನ ರಾ.ಹೆ. 66 ರಲ್ಲಿ ವಾಹನ ಸಂಚಾರಕ್ಕೆ ದಿನಾಂಕ : 02-09-2022 ರಂದು ಮುಂಜಾನೆ 6ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದ ತನಕ ಅವಕಾಶವಿರುವುದಿಲ್ಲ.


ಉಡುಪಿ, ಮುಲ್ಕಿ, ಸುರತ್ಕಲ್ ಹಾಗೂ ಬಜೈ ಕಡೆಗಳಿಂದ ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರ ಬಸ್ಸುಗಳಿಗೆ ತಣ್ಣೀರುಬಾವಿ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿರುತ್ತದೆ. ದ್ವಿಚಕ್ರ ವಾಹನ, ಕಾರು ಹಾಗೂ ಇತರ ಲಘು ವಾಹನಗಳಿಗೆ ಎನ್ ಎಂ ಪಿ ಟಿ ಮೈದಾನ ಹಾಗೂ ಎಂ ಎಸ್ ಇಝಡ್ ರಸ್ತೆಯಲ್ಲಿ ಲಘು ವಾಹನ ಪಾರ್ಕಿಂಗ್ ಗೆ ಸ್ಥಳವನ್ನು ಗುರುತಿಸಲಾಗಿರುತ್ತದೆ.


ಮೂಡಬಿದ್ರೆ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಕಡೆಗಳಿಂದ ಬರುವ ಬಸ್ಸುಗಳಿಗೆ ಕೆ.ಪಿ.ಟಿ ಮೈದಾನ, ವ್ಯಾಸನಗರ ಮೈದಾನ, ಪದವು ಮೈದಾನ, ಕರಾವಳಿ ಉತ್ಸವ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವಾ ಮಾರ್ಕೆಟ್ ಮೈದಾನ, ಉರ್ವಾ ಸ್ಕೋರ್ ಮಾರ್ಕೆಟ್, ಕುಂಟಿಕಾನ ಜಂಕ್ಷನ್ ನಿಂದ ಕಾವೂರು ಕಡೆಗೆ ಹೋಗುವ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿರುತ್ತದೆ ಹಾಗೂ ಕಾರು ಹಾಗೂ ಇನ್ನಿತರ ಲಘು ವಾಹನಗಳಿಗೆ ಎ.ಜೆ. ಆಸ್ಪತ್ರೆ, ಲೇಡಿಹಿಲ್ ಚರ್ಚ್ ಗೌಂಡ್, ಕರಾವಳಿ ಗೌಂಡ್ ಗಳಲ್ಲಿ ಪಾರ್ಕಿಂಗ್ ಗೆ ಸ್ಥಳವನ್ನು ಗುರುತಿಸಲಾಗಿರುತ್ತದೆ.


ಉಡುಪಿ, ಮುಲ್ಕಿ, ಸುರತ್ಕಲ್ ಹಾಗೂ ಬಜೆ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಫಲಾನುಭವಿಗಳನ್ನು ಮತ್ತು ಜನರನ್ನು ಕರೆದುಕೊಂಡು ಬರುವ ಬಸ್ಸುಗಳು ಕೂಳೂರು ಜಂಕ್ಷನ್ ನಲ್ಲಿ ಜನರನ್ನು ಇಳಿಸಿ ನಂತರ ತಣ್ಣೀರುಬಾವಿ ರಸ್ತೆ ಕಡೆಗೆ ಚಲಿಸುವುದು ಮತ್ತು ಪಾರ್ಕಿಂಗ್ ಗೆ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು.


ಮಂಗಳೂರು ನಗರ, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಸುಳ್ಯ, ಮಡಿಕೇರಿ, ತೊಕ್ಕೊಟ್ಟು ಉಳ್ಳಾಲ, ತಲಪಾಡಿ, ಕೇರಳ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಜನರನ್ನು ಕರೆದುಕೊಂಡು ಬರುವ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್ ಬಳಿಯಲ್ಲಿ ಫಲಾನುಭವಿಗಳನ್ನು ಮತ್ತು ಜನರನ್ನು ಇಳಿಸಿ ನಂತರ ವಾಪಾಸು ಪಾರ್ಕಿಂಗ್ ಗೆ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು.


ದಿನಾಂಕ: 02-09-2022 ರಂದು ಬೆಳಿಗ್ಗೆ 6 ಗಂಟೆಯಿಂದ ಪ್ರಧಾನ ಮಂತ್ರಿಯವರ ಬಂಗ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿನ ಕಾರ್ಯಕ್ರಮ ಸ್ಥಳದಿಂದ ಮಂಗಳೂರು ಹೆಲಿಪ್ಯಾಡ್ ಗೆ ನಿರ್ಗಮಿಸುವ ವರೆಗೆ ಮೇಲ್ಕಂಡ ಎಲ್ಲಾ ವಾಹನ ಸಂಚಾರ ಬದಲಾವಣೆಯು ಜಾರಿಯಲ್ಲಿರುತ್ತದೆ.
ವಿವಿಐಪಿ ಪಾಸುಗಳನ್ನು ಹೊಂದಿರುವವರ ವಾಹನಗಳಿಗೆ ಬಂಗ್ರಹೂಳೂರು ಡೆಲ್ಟಾ ಗೌಂಡ್ ಬಳಿಯಲ್ಲಿ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶದಲ್ಲಿ ತಿಳಿಸಿದೆ.

ವಿಐಪಿ ಪಾಸುಗಳನ್ನು ಹೊಂದಿರುವ ವಾಹನಗಳಿಗೆ ರೆನಾಲ್ಡ್ ಶೋ ರೂಮ್ ಎದುರುಗಡೆಯ ವಿ ಆರ್ ಎಲ್ ಗೋಡೌನ್ ಬಳಿಯ ಸೋಮಯಾಜಿ ಗೌಂಡ್ ಹಾಗೂ ಎ ಜೆ ಶೆಟ್ಟಿ, ಇಂಜಿನಿಯರಿಂಗ್ ಕಾಲೇಜು, ಬಂಗ್ರಕೂಳೂರು ಇಲ್ಲಿ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿರುತ್ತದೆ.


ವಿ.ಐ.ಪಿ, ಮತ್ತು ವಿವಿಐಪಿ ಪಾಸ್ ಹೊಂದಿದ ವಾಹನಗಳ ಚಾಲಕರು ಸದ್ರಿ ವಿ.ಐ.ಪಿ. ಮತ್ತು ವಿವಿಐಪಿ ವ್ಯಕ್ತಿಗಳನ್ನು ಕಾರ್ಯಕ್ರಮ ನಡೆಯುವ ಬಂಗ್ರಹೂಳೂರು ಗೋಲ್ಡ್ ಪಿಂಚ್ ಮೈದಾನದ ಗೇಟ್ ಬಳಿ ಇಳಿಸಿದ ಬಳಿಕ, ತಮಗೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು ಮತ್ತು ಕಾರ್ಯಕ್ರಮ ಮುಗಿದ ಬಳಿಕ ಪುನಃ ಸ್ಥಳಕ್ಕೆ ಬಂದು ವ್ಯಕ್ತಿಗಳನ್ನು ಕರೆದೊಯ್ಯಬಹುದು.


ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರು ಮತ್ತು ಫಲಾನುಭವಿಗಳು, ಕಾರ್ಯಕ್ರಮ ಮುಗಿದ ಬಳಿಕ ನಿಗದಿತ ಪಾರ್ಕಿಂಗ್ ಸ್ಥಳಕ್ಕೆ ತೆರಳಿ, ಅಲ್ಲಿಂದ ವಾಹನಗಳಲ್ಲಿ ಆಗಮಿಸಿದ ರಸ್ತೆಗಳಲ್ಲಿಯೇ ವಾಪಾಸು ತೆರಳುವುದು.
ಪ್ರಧಾನ ಮಂತ್ರಿಯವರ ವಾಹನ ಮತ್ತು ಬೆಂಗಾವಲು ವಾಹನಗಳು ಸಂಚರಿಸುವ ಸಮಯ ಈ ಮೇಲ್ಕಂಡಂತೆ ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.


ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಯಾವುದೇ ಸಾರ್ವಜನಿಕರು, ಯಾವುದೇ ರೀತಿಯ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು, ಆಯುಧಗಳು, ದಹನ ಶೀಲ ವಸ್ತುಗಳು, ಕಪ್ಪು ಬಾವುಟ, ಬ್ಯಾನರ್ ಗಳು ಮತ್ತು ಆಕ್ಷೇಪಾರ್ಹ ವಸ್ತುಗಳನ್ನು ಕಾರ್ಯಕ್ರಮ ಸ್ಥಳಕ್ಕೆ ತರುವುದನ್ನು ನಿರ್ಬಂಧಿಸಲಾಗಿದೆ.


ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್, ವೈಯಕ್ತಿಕ ಸೊತ್ತುಗಳನ್ನು ಕಾರ್ಯಕ್ರಮ ನಡೆಯುವ ಸ್ಥಳದ ಪ್ರವೇಶ ದ್ವಾರದಲ್ಲಿ ತಪಾಸಣೆ ಸಮಯ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟು ಸಹಕರಿಸಲು ಕೋರಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ತಮಗೆ ನಿಗದಿಪಡಿಸಿದ ಪ್ರವೇಶ ದ್ವಾರಗಳ ಮುಖಾಂತರವೇ ಪ್ರವೇಶಿಸಲು ಕೋರಲಾಗಿದೆ. ಸಾರ್ವಜನಿಕರಿಗೆ ಕೂಳೂರಿನ ರೆನಾಲ್ಟ್ ಶೋ ರೂಮ್ ಕಡೆಯಿಂದ ಮತ್ತು ಕೂಳೂರು ಕಾವೂರು ರಸ್ತೆಯ ಪೃಥ್ವಿ ಲೇ ಔಟ್ ಕಡೆಯಿಂದ ಹಾಗೂ ಕೊಟ್ಟಾರ ಚೌಕಿ ಮಾಲಾಡಿ ಕೋರ್ಟ್ ರಸ್ತೆ ಮಾರ್ಗವಾಗಿ ಕಾರ್ಯಕ್ರಮದ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಅಲ್ಲಿ ಅಳವಡಿಸಲಾದ ಪ್ರವೇಶ ದ್ವಾರಗಳ ಮೂಲಕ ತೆರಳುವಂತೆ ಕೋರಲಾಗಿದೆ.


ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿ.ವಿ.ಐ.ಪಿ./ವಿ.ಐ.ಪಿ. ಮಾಧ್ಯಮದ ವ್ಯಕ್ತಿಗಳು, ಛಾಯಾಗ್ರಾಹಕರು, ಇತರ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು, ಫಲಾನುಭವಿಗಳು, ವಾಹನ ಚಾಲಕರು, ಸ್ಥಳದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಹಾಗೂ ಇನ್ನಿತರ ವ್ಯಕ್ತಿಗಳು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ವಿತರಿಸಲಾದ ಪಾಸ್ ಗಳನ್ನು ಹೊಂದಿರತಕ್ಕದ್ದು ಎಂದು ಜಿಲ್ಲಾಡಳಿತ ಆದೇಶದಲ್ಲಿ ತಿಳಿಸಿದೆ.

Join Whatsapp