ಹುಬ್ಬಳ್ಳಿ ಘರ್ಷಣೆ: ಆಕ್ಷೇಪಾರ್ಹ ಪೋಸ್ಟ್ ಮಾಡಿದ ಕಿಡಿಗೇಡಿ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

Prasthutha|

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಅಹಿತಕರ  ಘಟನೆಯು ಖಂಡನಾರ್ಹವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹರಡಿದ ಬಜರಂಗ ದಳದ ಕಿಡಿಗೇಡಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಆಗ್ರಹಿಸಿದ್ದಾರೆ.

- Advertisement -

ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳ‌ನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದು ಕೋಮು ಉದ್ವಿಗ್ನತೆ ಸೃಷ್ಟಿಸಿ ಗಲಭೆ ಹರಡುವ ಸಂಘಪರಿವಾರದ ಯೋಜಿತ ಷಡ್ಯಂತ್ರದ ಭಾಗವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಭಾವನೆಗಳಿಗೆ‌ ನೋವುಂಟು ಮಾಡುವ ಪೋಸ್ಟ್ ಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಆದರೂ ಅದನ್ನು ತೆರವುಗೊಳಿಸುವ ಮತ್ತು ಕಿಡಿಗೇಡಿಗಳನ್ನು ಬಂಧಿಸುವ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಈ ಹಿಂದೆ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆಯಲ್ಲಿ ನಡೆದ ಘಟನೆಗೂ ಮುನ್ನ ಬಿಜೆಪಿ ಕಾರ್ಯಕರ್ತನೋರ್ವ ಇದೇ ರೀತಿಯ ವಿಕೃತಿ ಮೆರೆದಿದ್ದನು. ಆದಾಗ್ಯೂ, ಪೊಲೀಸರು ಆತನ ಮೇಲೆ ದುರ್ಬಲ ಸೆಕ್ಷನ್ ಹಾಕಿದ ಪರಿಣಾಮ ಆತ ಶೀಘ್ರದಲ್ಲೇ ಬಿಡುಗಡೆಗೊಂಡಿದ್ದ. ಸಂಘಪರಿವಾರದ ಕಿಡಿಗೇಡಿಗಳ ಪರ ಪೊಲೀಸರ ಇಂತಹ ಮೃದು  ಧೋರಣೆಗಳು ಮುಸ್ಲಿಮ್ ವಿರೋಧಿ ಕೃತ್ಯ ನಡೆಸುವ ಕಿಡಿಗೇಡಿಗಳಲ್ಲಿ ನೈತಿಕ ಸ್ಥೈರ್ಯವನ್ನು ತುಂಬುತ್ತಿದೆ. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಆಕ್ರೋಶಿತ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸುವ ಮೊದಲೇ ಪೊಲೀಸ್ ಇಲಾಖೆ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಬೇಕು. ಈ ರೀತಿಯ ಕ್ರಮಗಳಿಂದ ಸಾಂಭಾವ್ಯ ಅನಾಹುತಗಳನ್ನು ತಡೆಯಬಹುದು ಎಂದು ಪಾಪ್ಯುಲರ್ ಫ್ರಂಟ್ ಭಾವಿಸುತ್ತದೆ ಎಂದು ತಿಳಿಸಿದ್ದಾರೆ.

- Advertisement -

ಅಲ್ಲದೇ, ಇಂತಹ ಸೂಕ್ಷ್ಮ ಸನ್ನಿವೇಶಲ್ಲಿ ಮುಸ್ಲಿಮ್ ಸಮುದಾಯವು ಸಂಯಮದಿಂದ ವರ್ತಿಸಬೇಕು. ತಕ್ಷಣದ ಆಕ್ರೋಶವು ವಿರೋಧಿಗಳಿಗೆ ಮುಸ್ಲಿಮರ ಬೇಟೆಗೆ ಅವಕಾಶವನ್ನಷ್ಟೇ‌ ಮಾಡಿಕೊಡಲಿದೆ. ಹುಬ್ಬಳ್ಳಿಯಲ್ಲಿ ನಡೆದಿರುವ ಅಹಿತಕರ ಘಟನೆಗೆ ಸಂಬಂಧಿಸಿ ಪೊಲೀಸರು ವಿಚಾರಣೆಯ ನೆಪದಲ್ಲಿ ಅಮಾಯಕ ಮುಸ್ಲಿಮ್ ಯುವಕರಿಗೆ ಚಿತ್ರಹಿಂಸೆ ನೀಡಬಾರದು. ಆಕ್ಷೇಪಾರ್ಹ ಪೋಸ್ಟ್ ಹಾಕಿದ ಯುವಕನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಸ್ಲಿಮ್ ಸಮುದಾಯವೂ ಇಂತಹ ಘಟನೆಗಳ ವೇಳೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ವಿಧಾನದಲ್ಲೇ ತಮ್ಮ ಆಕ್ರೋಶ ವ್ಯಕ್ತ ಪಡಿಸಬೇಕೆಂದು ಅಯ್ಯೂಬ್ ಅಗ್ನಾಡಿ ಮನವಿ ಮಾಡಿದ್ದಾರೆ.



Join Whatsapp