ಜನಸಂಖ್ಯಾ ಸ್ಪೋಟಕ್ಕೆ ಅಮೀರ್ ಖಾನ್ ಅವರಂತಹ ಜನರು ಪ್ರಮುಖ ಪಾತ್ರ ವಹಿಸಿದ್ದಾರೆ: ಬಿಜೆಪಿ ಸಂಸದ ವಿವಾದಾತ್ಮಕ ಹೇಳಿಕೆ
Prasthutha: July 12, 2021

ಹೊಸದಿಲ್ಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರಂತಹ ಜನರು ದೇಶದ ಜನಸಂಖ್ಯಾ ಸ್ಪೋಟದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು BJP ನಾಯಕ, ಮಧ್ಯಪ್ರದೇಶದ ಮಂದ್ ಸೌರ್ ಲೋಕಸಭಾ ಕ್ಷೇತ್ರದ ಸಂಸದ ಸುಧೀರ್ ಗುಪ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಶ್ವಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಗುಪ್ತಾ, ಅಮೀರ್ ಖಾನ್ ಇತ್ತೀಚೆಗೆ ವಿವಾಹ ವಿಚ್ಛೇದನಗೊಂಡಿದ್ದ ವಿಷಯ ಪ್ರಸ್ತಾಪಿಸಿ, ಅವರು ತಮ್ಮ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅಷ್ಟೇ ಅಲ್ಲ ಮೂರನೇ ಪತ್ನಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಟೀಕಿಸಿದ್ದಾರೆ.
ದೇಶದಲ್ಲಿನ ಜನಸಂಖ್ಯೆಯ ಹೆಚ್ಚಳಕ್ಕೆ ಅಮೀರ್ ಖಾನ್ ಅವರಂತಹ ಜನರು ಪಾತ್ರವಹಿಸುತ್ತಿರುವುದು ವಿಪರ್ಯಾಸ. ಭಾರತದಲ್ಲಿ ಜನಸಂಖ್ಯೆ 140 ಕೋಟಿ ಸಮೀಪಿಸುತ್ತಿದ್ದು, ದೇಶದಲ್ಲಿ ಒಂದು ಇಂಚು ಭೂಮಿಯೂ ವಿಸ್ತಾರವಾಗಿಲ್ಲ, ಇದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ ಎಂದು ಗುಪ್ತಾ ತಿಳಿಸಿದ್ದಾರೆ.
ತನ್ನ ಮತ್ತು ಕಿರಣ್ ರಾವ್ ನಡುವಿನ ದಾಂಪತ್ಯ ಜೀವನ ಕೊನೆಗೊಳಿಸುವುದಾಗಿ ಜುಲೈ 3ರಂದು ನಟ ಅಮೀರ್ ಖಾನ್ ಘೋಷಿಸಿದ್ದರು.
