ಪರೇಶ್ ಮೆಸ್ತಾ ಸಾವನ್ನು ಮುಂದಿಟ್ಟು ಕೋಮು ಸಂಘರ್ಷ, ಗಲಭೆ: ಕಾಗೇರಿ ಸೇರಿದಂತೆ 122 ಮಂದಿ ಸಂಘಪರಿವಾರದ ಕಾರ್ಯಕರ್ತರ ಕ್ರಿಮಿನಲ್ ಪ್ರಕರಣ ಹಿಂಪಡೆದ ಬಿಜೆಪಿ ಸರ್ಕಾರ

Prasthutha|

ಬೆಂಗಳೂರು: ಹೊನ್ನಾವರದ ಮೀನುಗಾರ ಪರೇಶ್ ಮೆಸ್ತಾ ಸಾವು ಪ್ರಕರಣದ ಬಳಿಕ ಉಂಟಾದ ಕೋಮು ಸಂಘರ್ಷ ಮತ್ತು ಗಲಭೆ ಸಂಬಂಧ ಶಿರಸಿಯಲ್ಲಿ ದಾಖಲಾಗಿದ್ದ 26 ಪ್ರಕರಣಗಳನ್ನು ಹಿಂಪಡೆದಿದ್ದ ರಾಜ್ಯ ಬಿಜೆಪಿ ಸರ್ಕಾರ, ಇದೀಗ ಬಾಕಿ ಉಳಿದಿದ್ದ ಮೂರು ಪ್ರಕರಣಗಳನ್ನೂ ಹಿಂಪಡೆಯುವ ಮೂಲಕ ಎಲ್ಲಾ 122 ಮಂದಿ ಸಂಘಪರಿವಾರದ ಕಾರ್ಯಕರ್ತರಿಗೆ ಕ್ಲೀನ್ ಚಿಟ್ ನೀಡಿದೆ.

- Advertisement -


ಶಿರಸಿ ಗಲಾಟೆಯಲ್ಲಿ ಅಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಬಿಜೆಪಿ, ಬಜರಂಗದಳ ಕಾರ್ಯಕರ್ತರು ಸೇರಿದಂತೆ 122 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ 122 ಜನರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಗಿದೆ.


ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮೀನುಗಾರ ಕುಟುಂಬದ ಯುವಕ ಪರೇಶ್ ಮೆಸ್ತಾ 2017ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಪರೇಶ್ ಮೆಸ್ತಾನದ್ದು ಕೊಲೆ, ಸಹಜ ಸಾವಲ್ಲ ಎಂದು ಬಿಜೆಪಿ ಸಂಘಪರಿವಾರದ ಕಾರ್ಯಕರ್ತರು ಆರೋಪಿಸಿ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಂದಿನ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ಆದರೆ ಪರೇಶ್ ಸಾವು ಆಕಸ್ಮಿಕ ಎಂದು ಇತ್ತೀಚೆಗೆ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ. ಪರೇಶ್ ಮೇಸ್ತಾ ಹತ್ಯೆ ನಡೆದಿಲ್ಲ, ಬದಲಾಗಿ ಆತನದ್ದು ಆಕಸ್ಮಿಕವಾಗಿ ಸಂಭವಿಸಿದ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

- Advertisement -


ಪರೇಶ್ ಮೆಸ್ತಾನದ್ದು ಕೊಲೆ ಎಂದು ಆರೋಪಿಸಿ ಸಂಘಪರಿವಾರ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆಸಿದ್ದವು. ಶಿರಸಿಯಲ್ಲಿ ಅಂದು ನಡೆದ ಗಲಾಟೆಯಲ್ಲಿ ಅಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಕಾರ್ಯಕರ್ತರು, ಬಜರಂಗದಳ ಕಾರ್ಯಕರ್ತರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು.


ಈ ಹಿಂದೆ ರಾಜ್ಯ ಸರ್ಕಾರ 27 ಜನರ ವಿರುದ್ಧದ ಕೇಸ್ ವಾಪಸ್ ಪಡೆದಿತ್ತು. ಇದೀಗ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಕಾರ್ಯಕರ್ತರು ಸೇರಿದಂತೆ 122 ಜನರ ವಿರುದ್ಧ ದಾಖಲಾಗಿದ್ದ ಕೇಸ್ ಹಿಂಪಡೆದು ಆದೇಶ ಹೊರಡಿಸಿದೆ.
ಪ್ರಕರಣ ಹಿಂಪಡೆದುಕೊಂಡ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

Join Whatsapp