‘ಸಿಧುರನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ, ಕೆಲಸ ಮಾಡದಿದ್ದರೆ ತೆಗೆದು ಹಾಕಿ’ ಪಾಕಿಸ್ತಾನ ಪ್ರಧಾನಿಯಿಂದ ಮನವಿ ಬಂದಿತ್ತು ಎಂದ ಅಮರೀಂದರ್ ಸಿಂಗ್ !

Prasthutha|

ಚಂಡೀಗಢ; ಚುನಾವಣಾ ಹೊಸ್ತಿಲಲ್ಲಿರುವ ಪಂಜಾಬ್ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದ್ದು , ಮೈತ್ರಿ ಮಾತುಕತೆ ಹಾಗೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷಗಳು ತೀವ್ರ ಕಸರತ್ತು ನಡೆಸುತ್ತಿವೆ.
ಈ ನಡುವೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಗುಡ್’ಬೈ ಹೇಳಿ ಹೊಸ ಪಕ್ಷ ಸ್ಥಾಪಿಸಿರುವ ಅಮರೀಂದರ್ ಸಿಂಗ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
“ನಾನು ಮುಖ್ಯಮಂತ್ರಿಯಾಗಿದ್ದಾಗ ನವಜೋತ್ ಸಿಂಗ್ ಸಿಧು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಸಂದೇಶ ಪಾಕಿಸ್ತಾನದಿಂದ ನನಗೆ ಬಂದಿತ್ತು ಏಕೆಂದರೆ ನವಜೋತ್ ಸಿಂಗ್ ಸಿಧು ಅವರ ಪ್ರಧಾನಿಯ ಹಳೆಯ ಸ್ನೇಹಿತ ಎಂಬ ಕಾರಣಕ್ಕೆ ಇಂತಹದ್ದೊಂದು ಮನವಿ ಬಂದಿತ್ತು” ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
“ಸಿಧು ಅವರನ್ನು ನೀವು ಸಂಪುಟದಲ್ಲಿಟ್ಟುಕೊಂಡರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಿಮಗೆ ಕೃತಜ್ಞರಾಗಿರುವರು” ಎಂಬ ಸಂದೇಶ ಪಾಕಿಸ್ತಾನದಿಂದ ಬಂದಿತ್ತು ಎಂದು ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ನಾನು ಸಿಧು ಅವರನ್ನು ಸಂಪುಟದಿಂದ ತೆಗೆದ ಬಳಿಕ ಪಾಕಿಸ್ತಾನದಿಂದ ಇಂಥದ್ದೊಂದು ಸಂದೇಶ ಬಂದಿತ್ತು. ಒಂದು ವೇಳೆ ಅವರು ಕೆಲಸ ಮಾಡದೇ ಇದ್ದಲ್ಲಿ ನೀವು ಅವರನ್ನು ಸಂಪುಟದಿಂದ ತೆಗೆಯಬಹುದು ಎಂದು ಪಾಕಿಸ್ತಾನ ಹೇಳಿತ್ತು ಎಂಬುದನ್ನು ಸಿಂಗ್ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸ್ಥಾನ ಹಂಚಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

Join Whatsapp