ಬೆಳಗಾವಿ ಪ್ರವೇಶಿಸಲು ಯತ್ನಿಸಿದ 300ಕ್ಕೂ ಅಧಿಕ ಶಿವಸೇನೆ, ಎನ್’ಸಿಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ

Prasthutha|

ಬೆಳಗಾವಿ: ಕರ್ನಾಟಕದ ಗಡಿಯಲ್ಲಿ ಬೆಳಗಾವಿ ಜಿಲ್ಲೆಗೆ ನುಗ್ಗಲು ಯತ್ನಿಸಿದ ಶಿವಸೇನೆ, ಕಾಂಗ್ರೆಸ್, ಎನ್’ಸಿಪಿಯ 300ಕ್ಕೂ ಅಧಿಕ ಕಾರ್ಯಕರ್ತರನ್ನು ಮಹಾರಾಷ್ಟ್ರದ ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದ್ದಲ್ಲದೆ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

ಸೋಮವಾರ ಬೆಳಗಾವಿ ವಿಧಾನ ಸಭೆ ಅಧಿವೇಶನ ಆರಂಭವಾಗುವುದಕ್ಕೆ ಮೊದಲು ಉದ್ವಿಗ್ನ ಸ್ಥಿತಿ ಇದ್ದುದರಿಂದ ಪೊಲೀಸರು ಹಲವಾರು ಶಿವಸೇನೆ ಕಾರ್ಯಕರ್ತರನ್ನು ಬಂಧಿಸಿದರು.

ಎನ್’ಸಿಪಿಯ ಹಸನ್ ಮುಶ್ರಿಫ್ ಮತ್ತು ಶಿವ ಸೇನೆಯ ಕೊಲ್ಹಾಪುರ ಜಿಲ್ಲಾ ಅಧ್ಯಕ್ಷ ವಿಜಯ್ ದೇವಣೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಂದಿನ ವರ್ಷ ಚುನಾವಣೆ ಇರುವುದರಿಂದ ಸರಕಾರಕ್ಕೆ ಇದು ಈ ಅವಧಿಯ ಕೊನೆಯ ಚಳಿಗಾಲದ ವಿಧಾನ ಸಭಾ ಅಧಿವೇಶನವಾಗಿದೆ. ಈ ಅವಧಿಯಲ್ಲಿ ಹಲವು ದಶಕಗಳ ಹಳೆಯ ಗಡಿ ತಕರಾರು ಮತ್ತೆ ಮುನ್ನೆಲೆಗೆ ಬಂದಿದೆ.

- Advertisement -

ಗಡಿಯಲ್ಲಿ ಇತ್ತ ಬರುತ್ತಿದ್ದ ಶಿವಸೇನೆ, ಕಾಂಗ್ರೆಸ್, ಎನ್’ಸಿಪಿ ಪಕ್ಷಕ್ಕೆ ಸೇರಿದ 300 ಜನರನ್ನು ಪೊಲೀಸರು ಗಡಿಯಲ್ಲೇ ತಡೆದು ಹಿಂದಕ್ಕೆ ಕಳುಹಿಸಿದರು.

ಐದು ದಶಕಗಳಿಂದ ಗಡಿ ವಿವಾದವನ್ನು ಕೆದಕುತ್ತಿರುವ ಎಂಎಂಇಎಸ್- ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ಇಂದಿನ ಸದನ ಕಲಾಪ ಕಾಲದಲ್ಲಿ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲು ಯೋಜಿಸಿತ್ತು.

ಪ್ರಧಾನಿ ಮೋದಿಯವರನ್ನು ಟೀಕಿಸಿದ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಳೆ, ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿಯವರು ಗಡಿ ಸಮಸ್ಯೆ ಉಲ್ಭಣಿಸಲು ಪ್ರಮಖ ಕಾರಣರಾಗಿದ್ದಾರೆ.ಪ್ರಧಾನಿ ಮೋದಿಯವರು ಮಹಾರಾಷ್ಟ್ರವನ್ನು ಇಬ್ಭಾಗ ಮಾಡಲು ನೋಡುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರನ್ನು ನೋಡಿ ಮಾತನಾಡಿದ ಮೇಲೂ ಅಲ್ಲಿಗೆ ಹೋಗಲು ಯಾಕೆ ಬಿಡುತ್ತಿಲ್ಲ? ಇದರಿಂದಲೇ ತಿಳಿಯುತ್ತದೆ, ಈ ಬಿಕ್ಕಟ್ಟಿನ ಹಿಂದೆ ಕೇಂದ್ರ ಸರಕಾರ ಇದೆ” ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡುವವರೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಮಾತನಾಡಬಾರದು ಎಂದು ಕಳೆದ ವಾರ ಗೃಹ ಸಚಿವರು ಹೇಳಿದ್ದರು. ಆದರೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಇಂದು ಈ ಸಮಸ್ಯೆ ಮಹಾರಾಷ್ಟ್ರದ ಹೆಮ್ಮೆ ಎಂದು ಹೇಳಿದರು. ಇದರಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ಯಾವ ಗ್ರಾಮದವರು ಕರ್ನಾಟಕ ಸೇರಲು ಬಯಸಿದ್ದಾರೆ, ಅದರ ಹಿಂದೆ ಯಾರಿದ್ದಾರೆ ಎಂದು ತಿಳಿದಿದೆ ಎಂದೂ ಅವರು ಹೇಳಿದರು.

ಕರ್ನಾಟಕವು ಹಿಂದಿನ ಮಹಾಜನ ಆಯೋಗದ ವರದಿಯೇ ಅಂತಿಮ ಎಂದು ಹೇಳಿದೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಮೊದಲ ಬಾರಿಯ ಸಂಸದ ಧೈರ್ಯಶೀಲ್ ಸಂಭಾಜಿರಾವ್ ಮಾನೆಯವರನ್ನು ನೇಮಿಸಲಾಗಿದೆ. ಅವರು ಇಂದು ಬೆಳಗಾವಿಗೆ ಬರಬೇಕಿತ್ತು, ಆದರೆ ಜಿಲ್ಲಾಡಳಿತವು ಅವರ ಆಗಮನಕ್ಕೆ ತಡೆ ನೀಡಿದೆ.

ಕಾನೂನು ಸುವ್ಯವಸ್ಥೆ ಹೆಚ್ಚುವರಿ ಡಿಜಿಪಿ ಅಲೋಕ್ ಕುಮಾರ್ ಅವರು ಈಗ ಅವರು ಇಲ್ಲಿಗೆ ಬರುವುದು ಸಮಸ್ಯೆ ತರಬಹುದು; ಹಾಗೆ ಬಂದಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದರು.

ಧೈರ್ಯಶೀಲ್ ಸಂಭಾಜಿರಾವ್ ಮಾನೆಯವರು ಎಂಎಂಇಎಸ್ ಸಭೆಯಲ್ಲಿ ಮಾತನಾಡಬೇಕಿತ್ತು. ಆದರೆ ಆ ಸಭೆ ನಡೆಸಲೂ ಪೊಲೀಸರು ಅನುಮತಿ ನೀಡಿಲ್ಲ.

ಸುಮಾರು 61 ಸಂಘಟನೆಗಳು ಹಲವು  ಕಾರಣಗಳಿಗೆ ವಿಧಾನ ಸಭಾ ಅಧಿವೇಶನದ ಕಾಲದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿವೆ.

6 ಮಂದಿ ಪೊಲೀಸ್ ವರಿಷ್ಠಾಧಿಕಾರಿಗಳು, 11 ಜನ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್, 43 ಉಪ ಪೊಲೀಸ್ ಸೂಪರಿಂಟೆಂಡೆಂಟ್, 95 ಪೊಲೀಸ್ ಇನ್ಸ್’ಪೆಕ್ಟರ್ ಗಳು, 241 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು 4,000 ಪೊಲೀಸ್ ಪೇದೆಗಳೊಂದಿಗೆ ಬೆಳಗಾವಿಯಲ್ಲಿ ನಿಯೋಜಿಸಲಾಗಿದೆ.


Join Whatsapp