ಶಿವಮೊಗ್ಗದಲ್ಲಿ ‘ಶಾಂತಿ -ಸೌಹಾರ್ದತೆಗಾಗಿ ನಮ್ಮ ನಡಿಗೆ’ ಗೆ ಚಾಲನೆ

Prasthutha|

ಶಿವಮೊಗ್ಗ: ಸ್ವಾತಂತ್ರ್ಯ ದಿನದಂದು ಸಾವರ್ಕರ್ ಫ್ಲಕ್ಸ್ ವಿವಾದದಿಂದ ಪ್ರಕ್ಷುಬ್ದಗೊಂಡಿದ್ದ ಶಿವಮೊಗ್ಗ ನಗರದಲ್ಲಿ ಇಂದು ಸರ್ವಧರ್ಮಗಳ ಗುರುಗಳು, ಪ್ರಜ್ಞಾವಂತ ನಾಗರೀಕ ಸಂಘಟನೆಗಳು‌ ” ನಮ್ಮ ನಡಿಗೆ ಶಾಂತಿಯ ಕಡೆಗೆ” ಘೋಷವಾಕ್ಯದೊಂದಿಗೆ  ಬೃಹತ್ ಜಾಥಾ ನಡೆಸಿದವು.

- Advertisement -

ಇಂದು ಬೆಳಗ್ಗೆ ಸಾಗರ ರಸ್ತೆಯ ಸರ್ಕಾರಿ ಮೆಡಿಕಲ್ ಕಾಲೇಜ್ ಆವರಣದಿಂದ ಆರಂಭವಾದ ಜಾಥಕ್ಕೆ ತರಳಬಾಳು ಡಾ‌. ಶಿವಮೂರ್ತಿ ಶಿವಾಚಾರ್ಯ  ಜಗದ್ಗುರು, ಜಿಲ್ಲಾ ನ್ಯಾಯಾಧೀಶ ಡಾ. ಮುಸ್ತಾಪ ಹುಸೇನ್ ಚಾಲನೆ ನೀಡಿದ್ದು. ಸುಮಾರು ಒಂದೂವರೆ ಕಿ.ಮೀ‌ ಸಾಗಿದ ಜಾಥದಲ್ಲಿ‌ ಹೆಜ್ಜೆ ಹಾಕಿದರು.

ಸೈನ್ಸ್ ಮೈದಾನದ ಬಳಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಚಿತ್ರದುರ್ಗ ತರಳವಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ‌ ಜಗದ್ಗುರು, ಕೊಳಕು ದೃಷ್ಟಿ ಹೋಗಬೇಕು ಒಳ್ಳೆಯ ದೃಷ್ಟಿ ನೆಲಸಬೇಕು. ಯಾರ ವಿರುದ್ಧವೂ ದ್ವೇಷ ಸಾರುವುದು ಬೇಡ. ವೇದದ ಕಾಲದಿಂದಲೂ ಶಾಂತಿಯ ಕುರಿತು ಉಲ್ಲೇಖವಿದೆ. ನೀವು ದುಡಿದಿದ್ದನ್ನು ನೀವೆ ತಿನ್ನಬೇಕು ಹಾಗೂ ಹಂಚಿಕೊಂಡು ತಿನ್ನಬೇಕು. ಕೈಕಾಲು ಕಳೆದು ಕೊಂಡು ಪರಾಧೀನರಾಗಿ ಊಟ ಸೇವಿಸದಂತೆ ಆಗಬಾರದು ಎಂದರು.

- Advertisement -

 ಮೌಲಾನಾ ಶಾಹುಲ್ ಹಮೀದ್ ಮಾತನಾಡಿ, ಕಾಲ್ನಡಿಗೆ ಜಾಥಾದಲ್ಲಿ ಸ್ವಾಮಿಜಿಗಳು, ಫಾದರ್ ಮತ್ತು ಮುಸ್ಲಿಂ ಧರ್ಮಗುರುಗಳು ಸೇರಿ ಕಾಲ್ನಡಿಗೆ ನಡೆಸಿದೆವು. ನಮ್ಮಲ್ಲಿ ಇಲ್ಲದ ಕೋಮು ಸಂಘರ್ಷ ನಿಮ್ಮಲ್ಲಿ ಯಾಕೆ ಎಂದರು.

ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಮಾತನಾಡಿ, ಯುವಕರಿಗೆ ಮನೆಯ ಮಕ್ಕಳಿಗೆ ಸರಿದಾರಿಗೆ ತರುವ ಜವಾಬ್ದಾರಿ ಪೋಷಕರ ಮೇಲಿದೆ. ಸಂಪತ್ತನ್ನು ಗಳಿಸಿ ಹೊತ್ತುಕೊಂಡು ಹೋಗ್ತೀರಾ, ಹಾಗಾಗಿ ಮನುಷ್ಯನಲ್ಲಿ ಮಾನವೀಯತೆ ಇಟ್ಟುಕೊಂಡು ಬದುಕಬೇಕು. ದಯೆ ಇಲ್ಲದ ಧರ್ಮ ಜಗತ್ತಿನಲ್ಲಿ ಇಲ್ಲ. ಹಾಗಾಗಿ ಸೌಹರ್ದಯುತವಾಗಿ ಬದುಕಬೇಕು ಎಂದರು.

ಯಾವುದೇ ಧರ್ಮ ಇನ್ನೊಬ್ಬರಿಗೆ ಹಿಂಸೆ ಕೊಡು ಎಂದು ಹೇಳುವುದಿಲ್ಲ. ಆದರೂ ಧರ್ಮದ ಹೆಸರಿನಲ್ಲಿ ಗಲಾಟೆ ನಡೆಸಲಾಗುತ್ತಿದೆ. ಇನ್ನು ಮುಂದೆಯಾದರೂ ನಾವೆಲ್ಲ ಎಚ್ಚೆತ್ತುಕೊಂಡು ಬದುಕಬೇಕು ಎಂದರು.

ಜಗತ್ತಿನ ಎಲ್ಲಾ ಧರ್ಮಗಳು ಸಾರುವುದು ಪ್ರೀತಿ, ಶಾಂತಿ, ಸೌಹಾರ್ದತೆಯನ್ನು. ನಾವಾಗಲಿ, ಫಾದರ್ ಆಗಲಿ ಮೌಲ್ವಿಗಳಾಗಲಿ ಆರಾಧಿಸುವುದು ಒಬ್ಬನನ್ನೇ‌. ದೇವರು ಮಂದಿರದಲ್ಲಿ ಇಲ್ಲ ಮಸೀದಿಯಲ್ಲಿ ಇಲ್ಲ ಖಾಬಾದಲ್ಲಿ ಇಲ್ಲ ಕೈಲಾಸದಲ್ಲೂ ಇಲ್ಲ ಎಂಬ ಉಲ್ಲೇಖ ಎಲ್ಲಾ ಧಾರ್ಮಿಕ ಗ್ರಂಥದಲ್ಲಿವೆ. ನಿಮ್ಮಲ್ಲೇ ಭಗವಂತನನ್ನು ಕಾಣಬೇಕು. ಆಗ ಮಾತ್ರ ಸ್ವಾರ್ಥ ದೂರವಾಗಿ ಸಾಮಾಜಿಕವಾಗಿ ಬದುಕು ಸಾಧ್ಯವಾಗುತ್ತದೆ ಎಂದರು. ಶಿವಮೊಗ್ಗದಲ್ಲಿ ನಡೆದ ಕಾಲ್ನಡಿಗೆ ಇಷ್ಟಕ್ಕೆ ಮುಗಿಯಬಾರದು.

ನಾಳೆ ಯಾವ ಅನಾಹುತಗಳು ನಡೆಯಬಾರದು, ಆ ಜವಾಬ್ದಾರಿಯನ್ನು ನಾವೆಲ್ಲಾ ಹೊತ್ತುಕೊಳ್ಳೋಣವೆಂದರು. ಅಲ್ಲಮ ಪ್ರಭು, ಅಕ್ಕಮಹಾದೇವಿ, ಕುವೆಂಪು ಹುಟ್ಟಿದ ನಾಡಿನಲ್ಲಿ ಅಶಾಂತಿ ಒಳ್ಳೆಯದಲ್ಲ. ಎಲ್ಲಾ ಧರ್ಮದಲ್ಲಿಯೂ ಶಾಂತಿ ಬಯಸುವವರಿದ್ದಾರೆ. ಮುಂದೆ ಬರುವ ಎಲ್ಲಾ ಹಬ್ಬ ಹರಿದಿನಗಳಲ್ಲಿ ಎಲ್ಲಾ ಧರ್ಮಗಳು ಸೇರಿ ಆಚರಿಸುವಂತಾಗಬೇಕು. ಹಬ್ಬ ಹರಿದಿನಗಳು ಬಂದರೆ ಕುಣಿದು ಕುಪ್ಪಳಿಸುವಂತಾಗಬೇಕು. ತಲೆ ಕತ್ತರಿಸುವಂತಾಗಬಾರದು ಎಂದು ಕರೆ ನೀಡಿದರು.

ಜಾಥಾದಲ್ಲಿ ಸುಮಾರು 60 ಕ್ಕೂ ಹೆಚ್ಚಿನ ಸಂಘಟನೆಗಳು, ವಿವಿಧ ಧರ್ಮದ ಧರ್ಮಗುರುಗಳು ಭಾಗವಹಿಸಿ ಶಾಂತಿ ಸೌಹಾರ್ದತೆಗೆ ಸಂಕಲ್ಪ ಮಾಡಿದರು.

ಪ್ರಗತಿಪರ ಹೋರಾಟಗಾರ ಕೆ.ಪಿ ಶ್ರೀಪಾಲ್, ರೈತ ಸಂಘದ ರಾಜಾಧ್ಯಕ್ಷ ಎಚ್ ಆರ್ ಬಸವರಾಜಪ್ಪ, ಡಾ. ಧನಂಜಯ ಸರ್ಜಿ, ಡಿ.ಎಸ್ ಎಸ್ ನ ಗುರುಮೂರ್ತಿ, ಹಾಲೇಶಪ್ಪ, ಪರ್ವೀಜ್ ಅಹಮ್ಮದ್,   ಕ್ರೈಸ್ತ ಧರ್ಮಗುರುಗಳಾದ ಡಾ .ಕ್ಲಿಪರ್ಡ್ ಪಿಂಟೋ ಮತ್ತಿತರರಿದ್ದರು.

Join Whatsapp