ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ತೆರೆ: 10 ವಿಧೇಯಕಗಳ ಅಂಗೀಕಾರ

Prasthutha|

52 ಗಂಟೆ ಕಾಲ ಕಾರ್ಯ ಕಲಾಪ

- Advertisement -

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 13 ರಿಂದ ಆರಂಭವಾಗಿದ್ದ ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.


ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಮಧ್ಯಾಹ್ನ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
10 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಸಲಾಗಿದೆ. ಒಟ್ಟಾರೆ 52 ಗಂಟೆ ಕಾಲ ಕಾರ್ಯ ಕಲಾಪ ನಡೆಸಲಾಗಿದೆ. ಒಟ್ಟು 10 ವಿಧೇಯಕಗಳನ್ನು ಅಂಗೀಕಾರ ಮಾಡಲಾಗಿದೆ. ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಬಗ್ಗೆ ಖಂಡನಾ ನಿರ್ಣಯ ಮಂಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ 5 ಗಂಟೆ ಚರ್ಚೆ ನಡೆದಿದೆ ಎಂದು 15ನೇ ವಿಧಾನಸಭೆಯ 11ನೇ ಕಾರ್ಯಕಲಾಪದ ಬಗ್ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಣೆ ನೀಡಿದರು.

- Advertisement -

ಶಾಸಕರ 1,921 ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗಿದೆ. ವಿಧಾನಸಭೆಯಲ್ಲಿ 149 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಶೂನ್ಯ ವೇಳೆಯಲ್ಲಿ 24 ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಪ್ರಶ್ನೋತ್ತರ ಕಲಾಪ ಶೇಕಡಾ 99ರಷ್ಟು ಯಶಸ್ವಿಯಾಗಿದೆ. ಕೊರೊನಾ ಕಾಲದಲ್ಲಿ ಎಲ್ಲರೂ ಸುರಕ್ಷಿತವಾಗಿರುವಂತೆ ಸಲಹೆ ನೀಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.


ಮುಂದಿನ ಅಧಿವೇಶನದಲ್ಲಿ ಹೆಚ್ಚು ದಿನ ಕಲಾಪ ನಡೆಸುತ್ತೇವೆ. ಬೆಳಗಾವಿ ಅಧಿವೇಶನಕ್ಕೆ 8 ಶಾಸಕರು ಸಂಪೂರ್ಣ ಗೈರಾಗಿದ್ದರು. ಪೂರ್ವಾನುಮತಿ ಪಡೆದು ಶಾಸಕರು ಗೈರಾಗಿದ್ದರು. ಒಟ್ಟಾರೆ ಶೇಕಡಾ 75ರಷ್ಟು ಶಾಸಕರು ಸದನಕ್ಕೆ ಹಾಜರಾಗಿದ್ದರು. 5 ಸಾವಿರಕ್ಕಿಂತ ಹೆಚ್ಚು ಜನರು ಕಲಾಪ ವೀಕ್ಷಣೆ ಮಾಡಿದ್ದಾರೆ. ಸಂತಸ, ಅಭಿಮಾನ, ಹೆಮ್ಮೆಯಿಂದ ಅಧಿವೇಶನ ಯಶಸ್ವಿ ಆಗಿದೆ. ಸಿಎಂ, ವಿಪಕ್ಷ ನಾಯಕರ ನೇತೃತ್ವದಲ್ಲಿ ಅಧಿವೇಶನ ಯಶಸ್ವಿ ಆಗಿದೆ ಎಂದು ತಿಳಿಸಿದ್ದಾರೆ.


ಈ ವರ್ಷ ಒಟ್ಟಾರೆ 40 ದಿನ ಅಧಿವೇಶನ ನಡೆಸಿದಂತಾಗಿದೆ. 149 ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ. ನಿಯಮಾವಳಿ, ಕಾಲ ಮಿತಿಯಿಂದ ಹೆಚ್ಚಿನವರಿಗೆ ಅವಕಾಶ ಸಿಕ್ಕಿಲ್ಲ. ಮುಂದೆ ಹೆಚ್ಚು ದಿನ ಸದನ ನಡೆಸಲು ಸರ್ಕಾರಕ್ಕೆ ತಿಳಿಸುತ್ತೇನೆ ಎಂದು ಸುವರ್ಣಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ನೀಡಿದ್ದಾರೆ. ಸದನದಲ್ಲಿ ಶಿಸ್ತು ಕಾಪಾಡಲು ಬಿ.ಎಸ್. ಯಡಿಯೂರಪ್ಪ ಸಲಹೆ ಸ್ವಾಗತಿಸುತ್ತೇನೆ. ಯಡಿಯೂರಪ್ಪನವರು ಹೇಳಿದ್ದನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ. ನಾನು ವಿಧಾನಸಭೆ ಸ್ಪೀಕರ್ ಆಗಿ ಎರಡೂವರೆ ವರ್ಷವಾಗಿದೆ. ಯಡಿಯೂರಪ್ಪ ನೀಡಿರುವ ಸಲಹೆ ಜಾರಿಗೊಳಿಸಲು ಪ್ರಯತ್ನಿಸಿದ್ದೇನೆ. ಶಿಸ್ತು ಮೂಡಿಸುವ ವಾತಾವರಣವನ್ನು ನಾವೆಲ್ಲರೂ ಸೇರಿ ನಿರ್ಮಿಸಬೇಕಾಗುತ್ತದೆ. ಅದು ಎಲ್ಲರ ಸಾಮೂಹಿಕ ಜವಾಬ್ದಾರಿ ಎಂದು ತಿಳಿಸಿದ್ದಾರೆ.

Join Whatsapp