ಯುವಜನರಿಂದ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಸಾಕಾರಗೊಳ್ಳಲು ಸಾಧ್ಯ: ಡಾ.ಕುಮಾರ್

Prasthutha|

ಮಂಗಳೂರು: ಯುವ ಜನತೆ ಎಂದರೆ ಅದು ಬೆಲೆ ಕಟ್ಟಲಾಗದ ಸಂಪತ್ತು,  ನೈಸರ್ಗಿಕ ಸಂಪತ್ತಿನಷ್ಟೇ ಮಹತ್ವವಿರುವ ಆ ಸಂಪತ್ತಿನಿಂದ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಯಶಸ್ವಿಯಾಗಿ ಸಾಕಾರಗೊಳಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್  ಅಭಿಪ್ರಾಯಪಟ್ಟರು.

- Advertisement -

      ಅವರು ಗುರುವಾರ ಜಿಲ್ಲಾ ಪಂಚಾಯತ್, ಕಾಲೇಜು ಶಿಕ್ಷಣ ಇಲಾಖೆ ಹಾಗೂ ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಗರದ ಬಲ್ಮಠ ಮಹಿಳಾ ಕಾಲೇಜಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾರರ ಸಾಕ್ಷರತಾ ಸಂಘ ಇ.ಎಲ್.ಸಿ.ಯ ವಿಶೇಷ ಸಭೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

       ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕಿರುವ ಯುವ ಮತದಾರರು ತಮ್ಮ ಹೆಸರುಗಳನ್ನು ನೋಂದಾಯಿಸಬೇಕು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಮತದಾನದ ಮಹತ್ವದ ಅರಿವಿಗಾಗಿ ಪ್ರತಿ ಕಾಲೇಜಿನಲ್ಲೂ ಮತದಾರರ ಸಾಕ್ಷರತಾ ಸಂಘ ಸ್ಥಾಪಿಸಲಾಗಿದೆ ಎಂದರು.

- Advertisement -

 ಮತದಾನ ಮಾಡುವುದು ನಾಗರಿಕ ಜವಾಬ್ದಾರಿ. ಮೂಲಭೂತ ಹಕ್ಕು ಕೂಡ. ಯುವ ಮತದಾರರನ್ನು ದೇಶದ ಸರ್ವೋಚ್ಚ ಶಕ್ತಿ ಎಂದು ಕರೆಯಲಾಗುತ್ತದೆ. ಅರ್ಹರೆಲ್ಲರೂ ಮತದಾನ ಮಾಡಬೇಕು, ಅದಕ್ಕಾಗಿ ಅವರ ಹೆಸರನ್ನು ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳಬೇಕು, ಪ್ರಸಕ್ತ ಜಿಲ್ಲೆಯಲ್ಲಿ 18-19ವರ್ಷದೊಳಗಿನ ಯುವ ಮತದಾರರ ಸಂಖ್ಯೆ ಕಡಿಮೆಯಿದೆ, ಕಾಲೇಜುಗಳಲ್ಲಿ ರಚಿಸಿರುವ ಎಲೆಕ್ಟ್ರೋ ಕ್ಲಬ್‍’ನ ಮುಖ್ಯಸ್ಥರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು, 2004ನೇ ಏಪ್ರಿಲ್ 1ರಿಂದ ಜನನವಾದವರು ಹಾಗೂ 2023ರ ಜನವರಿ 1ಕ್ಕೆ 18 ವರ್ಷ ತುಂಬಿದವರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ನೋಂದಾಯಿಸಲು ಅರ್ಹಗಿರುತ್ತಾರೆ ಎಂದರು.

      ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆಗೆ ಬಾಕಿ ಇರುವ ಯುವಕ – ಯುವತಿಯರು ತಮ್ಮ ಹೆಸರುಗಳನ್ನು ಸೇರಿಸಿಕೊಳ್ಳುವುದರೊಂದಿಗೆ ತಮ್ಮ ಪರಿಸರದ ಸುತ್ತಮುತ್ತಲಿನ ಯುವಕರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

       ಇದೇ ಸಂದರ್ಭದಲ್ಲಿ ಅವರು ಮತದಾನ ಜಾಗೃತಿ ಕುರಿತ ಕರಪತ್ರ ಬಿಡುಗಡೆ ಮಾಡಿದರು.

       ಕಾಲೇಜು ಪ್ರಾಂಶುಪಾಲರಾದ ಡಾ. ಜಗದೀಶ ಬಾಳ ಅವರು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಇತರೆಡೆ ಹೋಗದೆ ತಮ್ಮ ಮೊಬೈಲ್ ಮೂಲಕ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ವೋಟರ್ಸ್ ಹೆಲ್ಪ್‍ಲೈನ್ ಆ್ಯಪ್ ಮೂಲಕ ನೀಡಲಾಗಿರುವ ಅರ್ಜಿ ತುಂಬುವುದರಿಂದ ಮತದಾರರ ಪಟ್ಟಿಗೆ ಕೇವಲ 5 ನಿಮಿಷದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

     ಜಿಲ್ಲಾ ಪಂಚಾಯತ್‍ನ ಸಹಾಯಕ ಕಾರ್ಯದರ್ಶಿ ಜೇಮ್ಸ್ ಕುಟ್ಹೀನಾ, ಇ.ಎಲ್.ಸಿ. ಕ್ಲಬ್ ನ ಕಾಲೇಜು ಉಸ್ತುವಾರಿ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕಿ ಹರಿಣಾಕ್ಷಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು.

Join Whatsapp