ಭಾರತದಲ್ಲಿ ಮುಸ್ಲಿಮರ ಮೇಲಿನ ದಾಳಿ ನಾಚಿಕೆಗೇಡಿನದ್ದು : ಮುಸ್ಲಿಮರ ಹಕ್ಕುಗಳನ್ನು ರಕ್ಷಿಸುವಂತೆ ಇಸ್ಲಾಮಿಕ್ ಸಹಕಾರ ಮಂಡಳಿ ಆಗ್ರಹ

Prasthutha|

ಜಿದ್ದಾ: ಇತ್ತೀಚೆಗೆ ಅಸ್ಸಾಂನಲ್ಲಿ ಮುಸ್ಲಿಮರ ಕಗ್ಗೊಲೆ ಸೇರಿದಂತೆ ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮ್ ಸಮುದಾಯದ ವಿರುದ್ಧ ವ್ಯವಸ್ಥಿತ ದೌರ್ಜನ್ಯ ಮತ್ತು ಹಿಂಸಾಚಾರವನ್ನು ಇಸ್ಲಾಮಿಕ್ ಸಹಕಾರ ಮಂಡಳಿ (ಒ.ಐ.ಸಿ) ಒಕ್ಕೊರಳಿನಿಂದ ಖಂಡಿಸಿದೆ. ಮಾತ್ರವಲ್ಲ ಭಾರತದ ಮುಸ್ಲಿಮರ ರಕ್ಷಣೆ, ಧಾರ್ಮಿಕ ಮತ್ತು ಸಾಮಾಜಿಕ ಮೂಲಭೂತ ಸ್ವಾತಂತ್ರ್ಯವನ್ನು ಗೌರವಿಸುವಂತೆ 58 ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ವ್ಯವಸ್ಥೆಯಾದ ಒ.ಐ.ಸಿ ಭಾರತ ಸರ್ಕಾರವನ್ನು ಒತ್ತಾಯಿಸಿದೆ.

- Advertisement -

13 ವರ್ಷದ ಬಾಲಕ ಸೇರಿದಂತೆ ಮೂವರ ಹತ್ಯೆ ಮತ್ತು ಹಲವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒ.ಐ.ಸಿಯ ಪ್ರಧಾನ ಕಾರ್ಯದರ್ಶಿ ಈ ನಡೆಯನ್ನು ಪ್ರದರ್ಶಿಸಿದೆ. ಇತ್ತೀಚೆಗೆ ಅಸ್ಸಾಂ ನಲ್ಲಿ ಬಿಜೆಪಿ ಸರ್ಕಾರ 800 ಕ್ಕೂ ಮಿಕ್ಕಿದ ಮುಸ್ಲಿಮ್ ಕುಟುಂಬಗಳನ್ನು ಬಲವಂತದಿಂದ ಒಕ್ಕಲೆಬ್ಬಿಸುವ ಭಾಗವಾಗಿ ನಡೆದ ಶಾಂತಿಯುತ ಪ್ರತಿಭಟನೆ ವೇಳೆ ಅಸ್ಸಾಂ ಪೊಲೀಸರು ಗುಂಡಿನ ದಾಳಿ ನಡೆಸಿ ಇಬ್ಬರನ್ನು ಹತ್ಯೆಗೈದು ಹಲವರನ್ನು ಗಾಯಗೊಳಿಸಿದ್ದರು.

ಈ ದುಷ್ಕ್ರತ್ಯವನ್ನು ಖಂಡಿಸಿದ ಒ.ಐ.ಸಿ ಪ್ರಧಾನ ಕಾರ್ಯದರ್ಶಿ, ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಾ ಭಾರತದ ನಡೆ ನಾಚಿಕೆಗೇಡಿನ ನಡೆಯೆಂದು ಬಣ್ಣಿಸಿದ್ದಾರೆ. ಮಾತ್ರವಲ್ಲ ಭಾರತ ಸರ್ಕಾರ ಮತ್ತು ಅಧಿಕಾರಿಗಳು ಜವಬ್ದಾರಿಯುತ ನಿಲುವನ್ನು ಪ್ರದರ್ಶಿಸಲು ಕರೆ ನೀಡಿದ್ದಾರೆ..

Join Whatsapp