ಕುಖ್ಯಾತ ರೌಡಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

Prasthutha|

ಶಿವಮೊಗ್ಗ: ನಗರದಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಮೊಳಗಿದ್ದು ಕುಖ್ಯಾತ ರೌಡಿ ಪ್ರವೀಣ್ ಅಲಿಯಾಸ್ ಮೋಟು ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

- Advertisement -


ಕಾಲಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ರೌಡಿ ಪ್ರವೀಣ್ ಅಲಿಯಾಸ್ ಮೋಟು ಗಂಭೀರವಾಗಿ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ಪ್ರಕರಣವೊಂದರಲ್ಲಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಪ್ರವೀಣ್ , ಗ್ರಾಮಾಂತರ ಠಾಣೆ ಪೊಲೀಸ್ ಕ್ರೈಂ ಸಿಬ್ಬಂದಿ ಶಿವರಾಜ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಎನ್ನಲಾಗಿದೆ.

- Advertisement -


ಗ್ರಾಮಾಂತರ ಠಾಣೆ ಪಿಎಸ್’ಐ ರಮೇಶ್ ಎಚ್ಚರಿಕೆ ನೀಡಿದರೂ ಪ್ರವೀಣ್ ನಿರ್ಲಕ್ಷ್ಯ ಮಾಡಿದ್ದು, ತನ್ನ ಸಿಬ್ಬಂದಿ ರಕ್ಷಣೆಗಾಗಿ ಪಿಎಸ್’ಐ ರಮೇಶ್ ಅವರು ಮೋಟು ಪ್ರವೀಣ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಗುಲಿ ಕುಸಿದು ಬಿದ್ದ ಪ್ರವೀಣ್’ನನ್ನು ತಕ್ಷಣ ವಶಕ್ಕೆ ಪಡೆಯಲಾಯಿತು. ಗಾಯಗೊಂಡ ಪ್ರವೀಣ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಗೆ ದಾಖಲಿಸಲಾಗಿದೆ.


ರೌಡಿ ಪ್ರವೀಣ್ ಮೂರು ತಿಂಗಳ ಹಿಂದೆ ಸಾರ್ವಜನಿಕವಾಗಿ ಮಹಿಳೆಯನ್ನು ಥಳಿಸಿದ್ದ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ದೂರು ಕೊಟ್ಟಿದ್ದ ಮಹಿಳೆಯ ಮನೆಯ ಮುಂದೆ ನಿಂತಿದ್ದ ಹೊಸ ಕಾರನ್ನು ಸುಟ್ಟು ಆಕೆಯ ವಿರುದ್ಧ ಪ್ರವೀಣ್ ಸೇಡು ತೀರಿಸಿಕೊಂಡಿದ್ದ. ಕೇಸ್ ವಾಪಸ್ ಪಡೆಯಲು ತಾಯಿ- ಮಗನಿಗೆ ಜೀವ ಬೆದರಿಕೆ ಹಾಕಿದ್ದ, ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು.


ಈ ಪ್ರಕರಣದಡಿ ಬಂಧಿಸಲು ತೆರಳಿದ್ದ ವೇಳೆ ಪೊಲೀಸರೊಂದಿಗೆ ಮೋಟು ಕಿರಿಕ್ ಮಾಡಿ ಗುಂಡಿನ ಏಟು ತಿಂದಿದ್ದಾನೆ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

Join Whatsapp