ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಡೌಟ್: ಯುವರಾಜ್ ಸಿಂಗ್

Prasthutha|

ಹೊಸದಿಲ್ಲಿ: ಏಕದಿನ ವಿಶ್ವಕಪ್​ಗಾಗಿ ಕೌಂಟ್​ ಡೌನ್ ಶುರುವಾಗಿದೆ. ಭಾರತೀಯ ಅಭಿಮಾನಿಗಳು ಟೀಮ್ ಇಂಡಿಯಾ ಚಾಂಪಿಯನ್​ ಪಟ್ಟ ಅಲಂಕರಿಸುವ ನಿರೀಕ್ಷೆಯಲ್ಲಿದ್ದರೂ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಮಾತ್ರ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಡೌಟ್ ಎಂದಿದ್ದಾರೆ.  

- Advertisement -

ತವರಿನಲ್ಲಿ ಪಂದ್ಯಾವಳಿ ನಡೆದರೂ ಭಾರತ ತಂಡ ಕಪ್ ಗೆಲ್ಲುವುದು ಅನುಮಾನ ಎಂದ ಯುವರಾಜ್ ಸಿಂಗ್, ಇದಕ್ಕೆ ಮುಖ್ಯ ಕಾರಣಗಳನ್ನೂ ಕೂಡ ಮುಂದಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್, ಪ್ರಮಾಣಿಕವಾಗಿ ಹೇಳಬೇಕೆಂದರೆ, ಈ ಸಲ ಭಾರತ ಟ್ರೋಫಿ ಗೆಲ್ಲುವ ಬಗ್ಗೆ ನನಗೆ ಯಾವುದೇ ಖಚಿತತೆ ಇಲ್ಲ. ಇದಕ್ಕೆ ಮುಖ್ಯ ಕಾರಣ ತಂಡದ ಸಂಯೋಜನೆಯಲ್ಲಿ ಕಂಡು ಬರುತ್ತಿರುವ ಸಮಸ್ಯೆ ಎಂದು ತಿಳಿಸಿದ್ದಾರೆ.

- Advertisement -

ಒಬ್ಬ ದೇಶಪ್ರೇಮಿಯಾಗಿ ನನಗೂ ಭಾರತ ಗೆಲ್ಲಬೇಕೆಂಬ ಆಸೆಯಿದೆ. ಆದರೆ ಪ್ರಸ್ತುತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ನಲ್ಲಿ ಸಮಸ್ಯೆಗಳಿವೆ. ಟೀಮ್ ಇಂಡಿಯಾದ ಟಾಪ್ ಆರ್ಡರ್ ಉತ್ತಮವಾಗಿದೆ. ಆದರೆ 4ನೇ ಮತ್ತು 5ನೇ ಕ್ರಮಾಂಕದ ಬ್ಯಾಟರ್​ಗಳ ಪ್ರದರ್ಶನ ಬಹಳ ಮುಖ್ಯವಾಗುತ್ತದೆ.

ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಬ್ಯಾಟರ್​ ಸ್ಕೋರ್​ಗಳಿಸಿದರಷ್ಟೇ ಸಾಲುವುದಿಲ್ಲ. ಇಲ್ಲಿ ಒತ್ತಡವನ್ನು ನಿಭಾಯಿಸುವ ಆಟಗಾರನ ಅಗತ್ಯವಿದೆ. ಹೀಗಾಗಿ ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕವನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಯುವರಾಜ್ ಸಿಂಗ್ ಮುಂದಿಟ್ಟಿದ್ದಾರೆ.

ಅಕ್ಟೋಬರ್ 5 ರಿಂದ ಶುರುವಾಗಲಿರುವ ಏಕದಿನ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಅಕ್ಟೋಬರ್ 8 ರಂದು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

ಇದೇ ವೇಳೆ ವಿಶ್ವಕಪ್​ಗಾಗಿ ಆಯ್ಕೆ ಮಾಡಲು 20 ಆಟಗಾರರ ಬಳಗವನ್ನು ರೂಪಿಸಬೇಕೆಂದು ಅಭಿಪ್ರಾಯಪಟ್ಟ ಯುವರಾಜ್ ಸಿಂಗ್, ಆ ಬಳಿಕ ಕೆಲ ಪೂರ್ವ ಸಿದ್ಧತಾ ಪಂದ್ಯಗಳನ್ನು ಆಯೋಜಿಸಲು ಸಲಹೆ ನೀಡಿದರು. ಈ ಮೂಲಕ 15 ಸದಸ್ಯರ ಬಲಿಷ್ಠ ತಂಡವನ್ನು ರೂಪಿಸಬೇಕೆಂದು ಯುವರಾಜ್ ಸಿಂಗ್ ತಿಳಿಸಿದರು.

ಅಂದಹಾಗೆ ಟೀಮ್ ಇಂಡಿಯಾ ಪರ 2011 ರ ಏಕದಿನ ವಿಶ್ವಕಪ್​ನಲ್ಲಿ ಯುವರಾಜ್ ಸಿಂಗ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಟೂರ್ನಿಯಲ್ಲಿ ಒಟ್ಟು 362 ರನ್ ಕಲೆಹಾಕುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಇದೇ ಕಾರಣದಿಂದಾಗಿ 4ನೇ ಮತ್ತು 5ನೇ ಕ್ರಮಾಂಕದಲ್ಲಿ ಆಡುವ ಆಟಗಾರ ಪಾತ್ರವು ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Join Whatsapp