ನಾವ್ಯಾರೂ ಜಾತಿ-ಧರ್ಮ ಆರಿಸಿಕೊಂಡು ಹುಟ್ಟಿಲ್ಲ: ಸಿಎಂ ಸಿದ್ದರಾಮಯ್ಯ

Prasthutha|

ಹಾವೇರಿ: ನಾವ್ಯಾರೂ ಇಂತಿಂತಹ ಜಾತಿ-ಧರ್ಮದಲ್ಲಿ ನಮ್ಮನ್ನು ಹುಟ್ಟಿಸಿ ಎಂದು ಹೇಳಿ ಹುಟ್ಟಿಲ್ಲ. ಯಾವುದೇ ಜಾತಿ ಧರ್ಮದಲ್ಲಿ ಹುಟ್ಟಿದ್ದರೂ ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಲ್ಲಿ ಆಯೋಜಿಸಿದ್ದ 536ನೇ ಶ್ರೀ ಕನಕ ಜಯಂತ್ಯುತ್ಸವ ಮತ್ತು ಭಾವೈಕ್ಯ ಸಮ್ಮೇಳನವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದೇ ಇಲ್ಲ. ಈ ಜನ್ಮದಲ್ಲಿ ನಾವು ಮಾಡುವ ಕೆಲಸಗಳೇ ಮುಖ್ಯ. ಈ ಕಾರಣಕ್ಕೆ ಬಸವಾದಿ ಶರಣರು ಮತ್ತು ಕನಕದಾಸರು ಕರ್ಮ ಸಿದ್ಧಾಂತ ಮತ್ತು ಜನ್ಮದ ಮೌಡ್ಯವನ್ನು ಸಾರಾಸಗಟಾಗಿ ತಿರಸ್ಕರಿಸಿದರು.

- Advertisement -

ಕಾಗಿನೆಲೆ ಪೀಠ ಘನತೆಯುಳ್ಳದ್ದಾಗಿದ್ದು, ಯಾವತ್ತೂ ಒಂದು ಜಾತಿಯ ನೆಲೆ ಆಗಬಾರದು. ಇದು ಎಲ್ಲಾ ಶೋಷಿತ ಸಮುದಾಯಗಳ ನೆಲೆ ಆಗಬೇಕು. ಕನಕ ಜಯಂತಿ ಪ್ರಯುಕ್ತ ಭಾವೈಕ್ಯತಾ ಸಮಾವೇಶ ಏರ್ಪಿಡಿಸಿರುವ ಶ್ರೀ ಮಠದ ಗುರುಗಳಿಗೆ ಹೃದಯಪೂರ್ವಕ ವಂದಿಸುತ್ತೇನೆ ಎಂದು ಸಿಎಂ, ಇದು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.

ನಾವ್ಯಾರೂ ಅರ್ಜಿ ಹಾಕೊಂಡು ಜಾತಿ-ಧರ್ಮ ಆರಿಸಿಕೊಂಡು ಹುಟ್ಟಿಲ್ಲ. ಮೊದಲು ಮನುಷ್ಯರು – ಮನುಷ್ಯರನ್ನು ಪ್ರೀತಿಸಬೇಕು. ಜಾತಿ-ಧರ್ಮ ರಹಿತ ಮನುಷ್ಯ ಪ್ರೇಮವನ್ನೇ ಕನಕದಾಸರು ಜಗತ್ತಿಗೆ ನೀಡಿದರು. ಕನಕಗುರು ಪೀಠ ಸ್ಥಾಪಿಸುವಾಗ ಇದನ್ನು ಕುರುಬರ ಮಠ ಆಗಬೇಕು ಎಂದು ಇಚ್ಚಿಸಲೇ ಇಲ್ಲ. ಎಲ್ಲಾ ಶೋಷಿತ ಧರ್ಮಗಳ ಮಠ ಆಗಬೇಕು ಎನ್ನುವುದು ನಮ್ಮಗಳ ಉದ್ದೇಶ ಆಗಿತ್ತು ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.

ಧರ್ಮ ಇರುವುದು ನಮಗಾಗಿ ಹೊರತು ನಾವು ಧರ್ಮಕ್ಕಾಗಿ ಅಲ್ಲ. ಕನಕದಾಸರು ‘ಕುಲ ಕುಲವೆಂದು ಬಡಿದಾಡದಿರಿ’ ಎಂದು ಹೇಳಿದ್ದು ಅದಕ್ಕೇ ಆಗಿದೆ. ಬಸವಣ್ಣನವರು, ‘ಇವ ನಮ್ಮವ ಇವ ನಮ್ಮವ’ ಎಂದಿದ್ದು, ಕುವೆಂಪು ಅವರು ‘ಹುಟ್ಟುವಾಗ ಎಲ್ಲರೂ ವಿಶ್ವ ಮಾನವರು ಎಂದದ್ದು ಎಲ್ಲ ಅದೇ ಆಗಿದೆ. ಅಂಬೇಡ್ಕರ್ ಅವರ ಸಮ ಸಮಾಜದ ಕಲ್ಪನೆ, ಬಸವಾದಿ ಶರಣರು, ಕನಕದಾಸರು, ಅಂಬೇಡ್ಕರ್, ಕುವೆಂಪು, ಸೂಫಿಗಳ ಆಶಯಗಳೆಲ್ಲಾ ಒಂದೇ ಆಗಿತ್ತು. ಆದ್ದರಿಂದ ನಾವುಗಳು ಇವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.



Join Whatsapp