ಜಾನುವಾರುಗಳಿಗೆ ಸಿಗದ ಚಿಕಿತ್ಸೆ: ನಿಂತಲ್ಲಿಯೇ ಹಾಳಾಗುತ್ತಿರುವ ತುರ್ತು ಪಶು ಚಿಕಿತ್ಸಾ ವಾಹನಗಳು

Prasthutha|

ಕಲಬುರಗಿ: ಪಶು ಸಂಗೋಪನಾ ಇಲಾಖೆಯ ಯೋಜನೆಯೊಂದು ಸರ್ಕಾರದ ನಿರ್ಲಕ್ಷ್ಯದಿಂದ ಹಳ್ಳ ಹಿಡಿದಿದೆ.

- Advertisement -

ಜಾನುವಾರುಗಳಿಗೆ ಖಾಯಿಲೆ ಬಂದರೆ, ಅವು ಇದ್ದಲ್ಲಿಯೇ ಹೋಗಿ ಚಿಕಿತ್ಸೆ ನೀಡಬೇಕು. ಆ ಮೂಲಕ ಜಾನುವಾರುಗಳಿಗೆ ಮತ್ತು ಅವುಗಳನ್ನು ಸಾಕಿರುವ ರೈತರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಪ್ರತಿ ತಾಲೂಕಿಗೆ ಒಂದರಂತೆ ತುರ್ತು ಪಶು ಚಿಕಿತ್ಸಾ ವಾಹನಗಳನ್ನು ನೀಡಿತ್ತು. ಆದರೆ ಗುತ್ತಿಗೆ ಪಡೆದ ಏಜೆನ್ಸಿ ಇನ್ನು ತನ್ನ ಕಾರ್ಯನಿರ್ವಹಣೆ ಆರಂಭಿಸದೇ ಇದ್ದಿದ್ದರಿಂದ, ನಿಂತಲ್ಲಿಯೇ ನೂರಾರು ಪಶು ಚಿಕಿತ್ಸಾ ಆ್ಯಂಬುಲೆನ್ಸ್​​ಗಳು ಹಾಳಾಗಿ ಹೋಗುತ್ತಿವೆ.

ಹಾಳಾಗುತ್ತಿರುವ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು

- Advertisement -

ರಾಜ್ಯ ಪಶು ಸಂಗೋಪನಾ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 2023 ರ ಮಾರ್ಚ್​ನಲ್ಲಿ ತುರ್ತು ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸಲಾಗಿತ್ತು. ರಾಜ್ಯದಲ್ಲಿ 108 ಮಾದರಿಯಲ್ಲಿ, ಜಾನುವಾರುಗಳಿಗೆ ಗಂಭೀರ ಖಾಯಿಲೆ ಬಂದರೆ ಅವುಗಳು ಇದ್ದಲ್ಲಿಯೇ ಹೋಗಿ ಚಿಕಿತ್ಸೆ ನೀಡಬೇಕೆಂಬ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು. ಜಾನುವಾರುಗಳನ್ನು ಪಶು ಚಿಕಿತ್ಸಾ ಕೇಂದ್ರಕ್ಕೆ ತರಲು ಕಷ್ಟಪಡುವ ರೈತರಿಗೆ ನೆರವಾಗುವ ಉದ್ದೇಶ ಕೂಡಾ ಸರ್ಕಾರದ ಈ ಯೋಜನೆಯ ಹಿಂದಿತ್ತು. ಅದಕ್ಕಾಗಿ ರಾಜ್ಯದ ಪ್ರತಿಯೊಂದು ತಾಲೂಕಿಗೆ ಒಂದೊಂದರಂತೆ 290 ತುರ್ತು ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸಿ ನೀಡಲಾಗಿತ್ತು.

ಕಳೆದ ಮಾರ್ಚ್​ನಲ್ಲಿ ರಾಜ್ಯಾದ್ಯಂತ ಈ ಪಶು ಚಿಕಿತ್ಸಾ ವಾಹನಗಳಿಗೆ ಸರ್ಕಾರ ಚಾಲನೆ ನೀಡಿತ್ತು. ಆದರೆ ಚಾಲನೆ ನೀಡಿ ನಾಲ್ಕು ತಿಂಗಳಾದರು ಕೂಡಾ ಒಂದೇ ಒಂದು ತುರ್ತು ಪಶು ಚಿಕಿತ್ಸಾ ವಾಹನಗಳು ರಸ್ತೆಗಿಳಿದಿಲ್ಲ. ರಾಜ್ಯದ ಎಲ್ಲಾ ಕಡೆ ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿಯೇ ನಿಂತಲ್ಲಿಯೇ ನಿಂತಿವೆ. ಕೋಟ್ಯಂತರ ರೂಪಾಯಿ ಹಣ ಖರ್ಚಾದರೂ ಅವುಗಳ ಬಳಕೆ ಇಲ್ಲದಂತಾಗಿದ್ದು, ನಿಂತಲ್ಲಿಯೇ ತುಕ್ಕು ಹಿಡಿದು ಹಾಳಾಗುತ್ತಿವೆ.

ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದ್ದ ಸರ್ಕಾರ

ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳ ನಿರ್ವಹಣೆಯನ್ನು ಹಿಂದಿನ ಸರ್ಕಾರ ಮಹಾರಾಷ್ಟ್ರ ಮೂಲದ ಎಜುಸ್ಪಾರ್ಕ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಅನ್ನೋ ಕಂಪನಿಗೆ ಗುತ್ತಿಗೆ ನೀಡಿದೆ. ಗುತ್ತಿಗೆ ಪಡೆದ ಕಂಪನಿಯೇ, ವಾಹನಗಳಿಗೆ ಓರ್ವ ಚಾಲಕನ ನೇಮಕ, ಒರ್ವ ಪಶು ವೈದ್ಯನ ನೇಮಕ ಮಾಡಬೇಕು. ಪಶು ಸಂಗೋಪನಾ ಇಲಾಖೆಯ ತುರ್ತು ಸಹಾಯವಾಣಿಯಾಗಿರುವ 1962 ಗೆ ಕರೆ ಬಂದರೆ ಆ ಕರೆಗಳ ಆಧಾರದ ಮೇಲೆ ಮಾಹಿತಿ ಪಡೆದು, ತುರ್ತು ಚಿಕಿತ್ಸೆ ಅವಶ್ಯವಿರುವ ಜಾನುವಾರುಗಳು ಇದ್ದಲ್ಲಿಯೇ ಹೋಗಿ ಅವುಗಳಿಗೆ ಚಿಕಿತ್ಸೆ ನೀಡಬೇಕು ಅನ್ನೋ ಕಂಡಿಷನ್ ಮೇಲೆ ಗುತ್ತಿಗೆ ನೀಡಲಾಗಿದೆಯಂತೆ.

ಆದರೆ ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿಯವರೆಗೆ ತನ್ನ ಸೇವೆಯನ್ನು ಆರಂಭಿಸಿಲ್ಲ. ಯಾವ ಕಾರಣಕ್ಕಾಗಿ ಏಜೆನ್ಸಿ ಇನ್ನು ಕೆಲಸ ಆರಂಭಿಸಿಲ್ಲ ಎಂಬುದು ಗೊತ್ತಿಲ್ಲ ಎಂದು ಕಲಬುರಗಿ ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಸಿರಾಜ್ ಆವಟಿ ಹೇಳಿದ್ದಾರೆ.

ಸರ್ಕಾರ ಈ ಯೋಜನೆಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದೆ. ರಾಜ್ಯದ ಎಲ್ಲಾ ತಾಲೂಕಿಗೆ ಈಗಾಗಲೇ ತುರ್ತು ಪಶು ಚಿಕಿತ್ಸಾ ವಾಹನಗಳನ್ನು ನೀಡಲಾಗಿದೆ. ಆದರೆ ಗುತ್ತಿಗೆ ಪಡೆದ ಸಂಸ್ಥೆ ಕೆಲಸ ಆರಂಭಿಸದೇ ಇದ್ದಿದ್ದರಿಂದ, ಯೋಜನೆ ಹಳ್ಳ ಹಿಡಿದಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು, ಯೋಜನೆ ಜಾರಿಗೊಳಿಸಬೇಕಿದೆ ಎಂಬ ಮಾತು ಕೇಳಿಬರುತ್ತಿದೆ.

Join Whatsapp