ಇ-ಪೋರ್ಟಲ್ ಹ್ಯಾಕ್ ಮಾಡಿ ಸಾರ್ವಜನಿಕ ಹಣ ಲೂಟಿ ಮಾಡಿದವರ ರಕ್ಷಣೆ ಇಲ್ಲ: ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಸರಕಾರದ ಇಲಾಖೆಯ ಇ- ಪೋರ್ಟಲ್ ಹ್ಯಾಕ್ ಮಾಡಿ ಸಾರ್ವಜನಿಕ ಹಣ ಲೂಟಿ ಮಾಡಿದವರು ಎಷ್ಟೇ ಬಲಾಢ್ಯರಾರಿದ್ದರೂ ಅವರನ್ನು ಬಂಧಿಸಿ ಹಣ ವಸೂಲಾತಿಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ನಲ್ಲಿ ಇಂದು, ಕಾಂಗ್ರೆಸ್ ಸದಸ್ಯ ಯು. ಬಿ. ವೆಂಕಟೇಶ್, ನಿಯಮ 330ರ ಅಡಿಯಲ್ಲಿ ಎತ್ತಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ ಸಚಿವರು, ಈ ಸಂಬಂಧ ಇದುವರೆಗೆ ಸುಮಾರು 17 ಮಂದಿಯನ್ನು ಬಂಧಿಸಿ, ಎರಡು ಕೋಟಿಯಷ್ಟು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

- Advertisement -

ಹ್ಯಾಕರ್ ಶ್ರೀಕಿ ಹಾಗೂ ಇತರರು ಒಳಗೊಂಡಿದ್ದಾರೆ ಎನ್ನಲಾದ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ತನಿಖೆ ತೀವ್ರ ಪ್ರಗತಿಯಲ್ಲಿದೆ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಆಶ್ವಾಸ್ವನೆ ನೀಡಿದರು. ಇದಕ್ಕೆ ಮುನ್ನ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಯು. ಬಿ. ವೆಂಕಟೇಶ್, ಬಿಟ್ ಕಾಯಿನ್ ವಿಷಯದಲ್ಲಿ, ಯಾವುದೇ ಕ್ರಮ ಆಗಿಲ್ಲ, ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಹಲವು ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮಗಳು ಆಗಿಲ್ಲ, ಸರಕಾರ ಈ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು, ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯರ ಆರೋಪವನ್ನು ತಳ್ಳಿಹಾಕಿದ ಗೃಹ ಸಚಿವರು, ಸರಕಾರ ಹ್ಯಾಕಿಂಗ್ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಯಾರ ಬಳಿಯಾದರೂ ಹೆಚ್ಚಿನ ದಾಖಲೆ ಇದ್ದರೆ ಒದಗಿಸಬೇಕು ಎಂದು ಮನವಿ ಮಾಡಿದರು. ರೂಪಾಯಿ 11.5 ಕೋಟಿಯಷ್ಟು ಹಣವನ್ನು ಹ್ಯಾಕಿಂಗ್ ಮಾಡಲಾಗಿದ್ದು, ಸುಮಾರು 36 ವಿವಿಧ ಬ್ಯಾಂಕ್ ಖಾತೆಗಳಿಗೆ, ವರ್ಗಾವಣೆ ಮಾಡಲಾಗಿದ್ದು, ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ, ಎಂದೂ ಸಚಿವರು, ಸದನಕ್ಕೆ ಮಾಹಿತಿ ನೀಡಿದರು. ಪರಿಷತ್ ನಲ್ಲಿ ವಿರೋಧ ಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಜೆಡಿಎಸ್ ಸದಸ್ಯ ಮರಿ ತಿಬ್ಬೆಗೌಡ, ಬಿಜೆಪಿ ಸದಸ್ಯರಾದ ಆಯನೂರು ಮಂಜುನಾಥ್, ತೇಜಸ್ವಿನಿ ಗೌಡ ಸಹ ಚರ್ಚೆಯಲ್ಲಿ ಪಾಲ್ಗೊಂಡರು.



Join Whatsapp