ಕಳೆದ 5 ವರ್ಷಗಳಿಂದ ದೇಶದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ನಿಂದ ಯಾರೂ ಮೃತಪಟ್ಟಿಲ್ಲವಂತೆ !

Prasthutha|

ರಾಜ್ಯಸಭೆಗೆ ಸುಳ್ಳು ಮಾಹಿತಿ ನೀಡಿದ ಸರ್ಕಾರ

- Advertisement -

ಹಕ್ಕುಚ್ಯುತಿ ಮಂಡನೆಗೆ ಮುಂದಾದ ಡಾ.ಎಲ್.ಹನುಮಂತಯ್ಯ

ನವದೆಹಲಿ, ಜು.29: ಕಳೆದ ಐದು ವರ್ಷಗಳಲ್ಲಿ ದೇಶದ ಯಾವುದೇ ಭಾಗದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ನಿಂದ ಯಾರೂ ಮೃತಪಟ್ಟಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

- Advertisement -

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಎಲ್.ಹನುಮಂತಯ್ಯ ಅವರು ಕೇಳಿದ ಪ್ರಶ್ನೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ರಾಮ್ ದಾಸ್ ಅಠವಳೆ ಲಿಖಿತ ಉತ್ತರ ನೀಡಿ, ಮ್ಯಾನುವೆಲ್ ಸ್ಕ್ಯಾವೆಂಜಿಂಗನ್ನು ನಿಷೇಧಿಸಿ 2013ರಲ್ಲಿ ಕಾನೂನು ಜಾರಿಗೆ ತರಲಾಗಿದೆ. ಈ ಸಂಬಂಧ 2013 ಮತ್ತು 2018ರಲ್ಲಿ ಎರಡು ಸರ್ವೆ ನಡೆಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ನಲ್ಲಿ ಯಾರು ಕೂಡ ಮೃತಪಟ್ಟಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಹನುಮಂತಯ್ಯ ಅವರು “ಪ್ರಸ್ತುತ” ದೊಂದಿಗೆ ಪ್ರತಿಕ್ರಿಯಿಸಿ, ಸರ್ಕಾರ ರಾಜ್ಯಸಭೆಗೆ ಶುದ್ಧ ಸುಳ್ಳು ಮಾಹಿತಿ ನೀಡಿದೆ.

ದೇಶದ ಹಲವು ಭಾಗಗಳಲ್ಲಿ ಆಗಾಗ ಇಂತಹ ಸಾವುಗಳು ಸಂಭವಿಸುತ್ತಿವೆ. ಆದರೆ ಸರ್ಕಾರ ಮಾತ್ರ ಸದಸ್ಯರನ್ನು ಮತ್ತು ದೇಶದ ಜನರನ್ನು ದಾರಿ ತಪ್ಪಿಸುವ ಮಾಹಿತಿ ನೀಡಿದೆ. ಕರ್ನಾಟಕ ಮತ್ತು ದೆಹಲಿಯಲ್ಲಿ ಇತ್ತೀಚೆಗಷ್ಟೇ ಮ್ಯಾನುವೆಲ್ ಸ್ಕ್ಯಾವೆಂಜರ್ ನಿಂದ ಕಾರ್ಮಿಕರು ಮೃತಪಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಸರ್ಕಾರದ ಬಳಿ ಮಾತ್ರ ಇದರ ಮಾಹಿತಿ ಇಲ್ಲದಿರುವುದು ದುರದೃಷ್ಟಕರ ಎಂದು ಹೇಳಿದರು. ಸದನದಲ್ಲಿ ಸುಳ್ಳು ಸುದ್ದಿ ನೀಡಿದ ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನಿರ್ಧರಿಸಿರುವುದಾಗಿ ಡಾ. ಎಲ್ . ಹನುಮಂತಯ್ಯ ತಿಳಿಸಿದರು.

ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್ ಅವರು ಟ್ವೀಟ್ ಮಾಡಿ, ಬಿಜೆಪಿ ಸರ್ಕಾರದಲ್ಲಿ ತನ್ನ ಅಸಮರ್ಥತೆಯ ಯಾವುದೇ ಡಾಟಾ ಇರುವುದಿಲ್ಲ. ಈ ವರ್ಷ ಕರ್ನಾಟಕದಲ್ಲೇ ಹಲವು ಸಾವುಗಳು ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ನಿಂದ ಸಂಭವಿಸಿದೆ. ಫ್ಯಾಶಿಸ್ಟ್ ಸರ್ಕಾರ ಜನರ ಸಾವಿನಲ್ಲೂ ಅವರ ಗುರುತನ್ನೂ ಅಳಿಸಿ ಹಾಕುತ್ತಿರುವುದು ದುರಂತ ಎಂದು ಟೀಕಿಸಿದ್ದಾರೆ.

Join Whatsapp