ಬಿದ್ದು ಸಿಕ್ಕಿದ 10 ಸಾವಿರ ರೂ. ಇದ್ದ ಪರ್ಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕ ಮೆರೆದ ಆಟೋ ಚಾಲಕ ಹನೀಫ್| ಪೊಲೀಸ್ ಆಯುಕ್ತರಿಂದ ಸನ್ಮಾನ

Prasthutha|

ಮಂಗಳೂರು: ಬಿದ್ದು ಸಿಕ್ಕಿದ್ದ ಪರ್ಸ್ ಮತ್ತು ದಾಖಲೆ ಪತ್ರಗಳನ್ನು ಪೊಲೀಸ್ ಆಯುಕ್ತರ ಕಚೇರಿಗೆ ತಲುಪಿಸಿ ಪ್ರಾಮಾಣಿಕ ಮೆರೆದ ಆಟೋ ಚಾಲಕ ಮುಹಮ್ಮದ್ ಹನೀಫ್ ಅವರನ್ನು ಶುಕ್ರವಾರ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಶಾಲು ಹೊದಿಸಿ ಸನ್ಮಾನಿಸಿದರು.

- Advertisement -


ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತರು, ಅತ್ತಾವರ ಬಿಗ್ ಬಜಾರ್ ಬಳಿ ದಿಶಾಂತ್ ಎಂಬ ಯುವಕ ತನ್ನ ಪರ್ಸ್ ಮತ್ತು ದಾಖಲೆ ಪತ್ರ ಕಳೆದುಕೊಂಡಿದ್ದ. ಅದು ಆಟೋ ಚಾಲಕ ಮುಹಮ್ಮದ್ ಹನೀಫ್ ಅವರಿಗೆ ಸಿಕ್ಕಿದೆ. ಅದರಲ್ಲಿ 10 ಸಾವಿರ ರೂ. ನಗದು, ಎಟಿಎಂ ಕಾರ್ಡ್ ಗಳಿದ್ದವು. ಅವುಗಳ ಮೇಲೆಯೇ ಪಾಸ್ ವರ್ಡ್ ಕೂಡ ಬರೆಯಲಾಗಿತ್ತು. ಆದರೆ ಪ್ರಾಮಾಣಿಕ ಆಟೋ ಚಾಲಕನಾಗಿರುವ ಮುಹಮ್ಮದ್ ಹನೀಫ್ ಅವರು ನೇರವಾಗಿ ಪೊಲೀಸ್ ಆಯುಕ್ತರ ಕಚೇರಿಗೆ ತಂದು ತಲುಪಿಸಿದ್ದಾರೆ. ಇವರ ಪ್ರಾಮಾಣಿಕ ಕೆಲಸಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.


ಆಟೋ ಚಾಲಕರ ಮೇಲೆ ಸಾರ್ವ ಜನಿಕರಿಗೆ ದೊಡ್ಡ ಗೌರವವಿದೆ. ಇಂತಹ ಘಟನೆಗಳಿಂದ ಈ ಗೌರವ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿ ಶುಭ ಹಾರೈಸಿದರು. ಪರ್ಸ್ ಕಳೆದುಕೊಂಡಿದ್ದ ದುಷ್ಯಂತ್ ಮಾತನಾಡಿ, ಕೆಲಸದ ನಿಮಿತ್ತ ಶುಕ್ರವಾರ ಬೆಳಗ್ಗೆ ನಾನು ಬಿಗ್ ಬಜಾರ್ ಬಳಿ ತೆರಳಿದ್ದೆ. ಈ ವೇಳೆ ಮೊಬೈಲ್ ಗೆ ಕರೆ ಬಂತು. ಮಾತನಾಡಿ ನೇರವಾಗಿ ಬಿಗ್ ಬಜಾರ್ ಗೆ ಹೋದೆ. ಆದರೆ ಅಲ್ಲಿ ನೋಡಿದಾಗ ಪರ್ಸ್ ಇರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಪೊಲೀಸ್ ಆಯುಕ್ತರ ಕಚೇರಿಯಿಂದ ಕರೆ ಬಂತು. ನಿಮ್ಮ ಪರ್ಸ್ ಸಿಕ್ಕಿದೆ. ಬಂದು ತೆಗೆದುಕೊಂಡು ಹೋಗಿ ಎಂದು ತಿಳಿಸಿದರು. ಇಲ್ಲಿಗೆ ಬಂದು ನೋಡಿದಾಗ ಪರ್ಸ್ ನಲ್ಲಿದ್ದ ಎಲ್ಲಾ ಹಣ ಹಾಗೆಯೇ ಇತ್ತು. ಅದೇ ರೀತಿ ದಾಖಲೆ ಪತ್ರಗಳು ಇದ್ದವು. ಇದರಿಂದ ನನಗೆ ತುಂಬಾ ಸಂತೋಷವಾಯಿತು. ಪ್ರಸ್ತುತ ಸಂದರ್ಭದಲ್ಲಿಯೂ ಹನೀಫ್ ರಂತಹ ಪ್ರಾಮಾಣಿಕರು ಇದ್ದಾರೆ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

Join Whatsapp