ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು ದಸರಾ | ಬಿಜೆಪಿ ಸರಕಾರದ ಕೋಮುವಾದಿ ನಡೆ ಇತಿಹಾಸಕ್ಕೆ ಬಗೆದ ದ್ರೋಹ | ಪಾಪ್ಯುಲರ್ ಫ್ರಂಟ್

Prasthutha|

ಬೆಂಗಳೂರು : ಮೈಸೂರು ದಸರಾ ವಸ್ತು ಪ್ರದರ್ಶನದಿಂದ ಟಿಪ್ಪು ಸುಲ್ತಾನ್ ಇತಿಹಾಸವನ್ನು ಹೊರಗಿಟ್ಟಿರುವ ಬಿಜೆಪಿ ಸರಕಾರದ ಕೋಮುವಾದಿ ನಡೆಯು ಇತಿಹಾಸಕ್ಕೆ ಬಗೆದ ದ್ರೋಹವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಹೇಳಿದ್ದಾರೆ.
ದಸರಾ ಸಂದರ್ಭದಲ್ಲಿ ಪ್ರತಿಬಾರಿಯೂ ಟಿಪ್ಪು ಸುಲ್ತಾನ್ ಇತಿಹಾಸವನ್ನು ಪ್ರದರ್ಶಿಸಲಾಗುತ್ತಿತ್ತು. ಶೌರ್ಯದ ಫೋಟೋಗಳನ್ನು ಅಳವಡಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಗಮನಿಸುವುದಾದರೆ, ಟಿಪ್ಪು ಇತಿಹಾಸವನ್ನು ಕ್ರಮೇಣ ತೆರೆಮರೆಗೆ ಸರಿಸಲಾಗಿದೆ.

- Advertisement -

ಈ ಬಾರಿಯ ದಸರಾದಲ್ಲಂತೂ ಟಿಪ್ಪು ಇತಿಹಾಸವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಿಜೆಪಿ-ಸಂಘಪರಿವಾರವು ಟಿಪ್ಪು ವಿರುದ್ಧ ಎಷ್ಟೇ ಅಪಪ್ರಚಾರ ನಡೆಸಿದರೂ ವಾಸ್ತವ ಇತಿಹಾಸವು ಅದಕ್ಕೆ ಅವಕಾಶ ನೀಡಲಾರದು. ಕರುನಾಡು ಮತ್ತು ದೇಶದ ಅಭಿವೃದ್ಧಿಗಾಗಿ ಟಿಪ್ಪು ಕೊಡುಗೆ ಅಪಾರ. ಅವರ ದೂರದೃಷ್ಟಿಯ ಯೋಜನೆಗಳು ದೇಶದ ಇಂದಿನ ಆರ್ಥಿಕತೆಗೆ ಬಹಳಷ್ಟು ಸಹಕಾರಿಯಾಗಿವೆ. ಟಿಪ್ಪು ಬ್ರಿಟಿಷರ ಸಿಂಹಸ್ವಪ್ನವಾಗಿದ್ದರ ಜೊತೆಗೆ ಇಲ್ಲಿನ ಮೇಲ್ವರ್ಗದ ಯಜಮಾನಿಕೆಯ ಶತ್ರುವಾಗಿದ್ದರು. ತಳ ಸಮುದಾಯಗಳು ಮೇಲ್ವರ್ಗದ ಪ್ರಾಬಲ್ಯದಲ್ಲಿ ಶೋಷಣೆ ಎದುರಿಸುತ್ತಿದ್ದಾಗ ಎಲ್ಲಾ ವರ್ಗದ ಜನರಿಗೆ ಘನತೆ ಹಾಗೂ ಸಮಾನತೆಯ ಜೀವನ ಕಲ್ಪಿಸಿದ್ದರು.

ಈ ಕಾರಣಕ್ಕಾಗಿ ಇಂದು ಟಿಪ್ಪುವನ್ನು ಸಂಘಪರಿವಾರದ ಶಕ್ತಿಗಳು ವಿರೋಧಿಸುತ್ತಿರುವುದು. ಜೊತೆಗೆ ಹಿಂದು-ಮುಸ್ಲಿಮ್ ಕೋಮು ಧ್ರುವೀಕರಣಕ್ಕಾಗಿಯೂ ಟಿಪ್ಪುವನ್ನು ಹಿಂದೂ ವಿರೋಧಿಯಾಗಿ ಚಿತ್ರೀಕರಿಸುತ್ತಿರುವುದು. ತನ್ನ ಅಪ್ರತಿಮ ದೇಶಭಕ್ತಿಗಾಗಿ ಘನವೆತ್ತ ಸಂವಿಧಾನದ ಪುಸ್ತಕದಲ್ಲಿಯೇ ಟಿಪ್ಪು ಸುಲ್ತಾನ್ ಸ್ಥಾನ ಪಡೆದಿರುವಾಗ, ಟಿಪ್ಪು ಇತಿಹಾಸವನ್ನು ಜನಮಾನಸದಿಂದ ಅಳಿಸಿ ಹಾಕುವ ಯೋಜನೆಯು ಹಿಂದುತ್ವ ಫ್ಯಾಶಿಸ್ಟ್ ರಾಜಕೀಯದ ಪಿತೂರಿಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -


ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು, ಮಾತ್ರವಲ್ಲದೇ ದೇಶದ ಇತಿಹಾಸವೇ ಅಪೂರ್ಣ. ಈ ನಿಟ್ಟಿನಲ್ಲಿ ಸರಕಾರವು ಟಿಪ್ಪುಗೆ ಅರ್ಹ ಗೌರವವನ್ನು ಸಲ್ಲಿಸಬೇಕು. ಟಿಪ್ಪು ಹೆಸರನ್ನು ಅಳಿಸಿ ಹಾಕುವ ಎಲ್ಲಾ ವಿಧಧ ಪ್ರಯತ್ನಗಳನ್ನು ಕೈಬಿಡಬೇಕು. ತನ್ನ ಮಹಾನ್ ಕೊಡುಗೆ ಮತ್ತು ಸಾಧನೆಗಳಿಂದಾಗಿ ಜಗತ್ತಿನಾದ್ಯಂತ ಮಿಂಚುತ್ತಿರುವ ಟಿಪ್ಪು ಐತಿಹಾಸಿಕ ವ್ಯಕ್ತಿತ್ವವಾಗಿದ್ದಾರೆ. ಆ ಕಾರಣದಿಂದ ಸರಕಾರವು ತನ್ನ ಪೂರ್ವಗ್ರಹಪೀಡಿತ ಮನೋಸ್ಥಿತಿ ಮತ್ತು ದ್ವೇಷ ರಾಜಕೀಯವನ್ನು ಬದಿಗಿಟ್ಟು ಜನರಿಗೆ ನೈಜ ಇತಿಹಾಸವನ್ನು ಪರಿಚಯಿಸಬೇಕೆಂದು ನಾಸಿರ್ ಪಾಶ ಒತ್ತಾಯಿಸಿದ್ದಾರೆ.

Join Whatsapp