ಮುತ್ತಿನ ನಗರಿಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ

Prasthutha|

►ಅನ್ಯ ಜಾತಿಯ ಯುವತಿಯನ್ನು ಮದುವೆಯಾಗಿದ್ದ ದಲಿತ ಯುವಕನ ಬರ್ಬರ ಕೊಲೆ

- Advertisement -

ಹೈದರಾಬಾದ್:  ಕುಟುಂಬದವರ ವಿರೋಧದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಕ್ಕಾಗಿ ಪತ್ನಿಯ ಎದುರೇ ದಲಿತ ಸಮುದಾಯದ ಯುವಕ ನಾಗರಾಜ್ ಎಂಬವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ಮುತ್ತಿನ ನಗರಿಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿರುವ ಬಗ್ಗೆ ವರದಿಯಾಗಿದೆ.

ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

- Advertisement -

ನಗರದ  ಬೇಗುಂ ಬಜಾರ್ನಲ್ಲಿ ಐವರ ಗ್ಯಾಂಗ್ ಯುವಕನನ್ನು ನಡುರಸ್ತೆಯಲ್ಲೇ ನಿನ್ನೆ ರಾತ್ರಿ 7.30ರ ವೇಳೆ ಕುಟುಂಬದ ಎದುರಲ್ಲೇ ಮಾರಕಾಸ್ತ್ರಗಳಿಂದ ಇರಿದು ಹತ್ಯೆ ಮಾಡಿದ್ದಾರೆ.

ಮೃತ ಯುವಕನನ್ನು ನೀರಜ್ ಪನ್ವಾರ್ (21) ಎಂದು ಗುರುತಿಸಲಾಗಿದೆ. ಈತ ಬೇರೊಂದು ಜಾತಿಯ ಯುವತಿಯನ್ನು ಮದುವೆ ಆಗಿದ್ದ. ಈ ಮದುವೆಗೆ ಯುವತಿ ಮನೆಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಜೋಡಿ ಮದುವೆಯಾಗಿತ್ತು. ದಂಪತಿಗೆ ಎರಡೂವರೆ ತಿಂಗಳ ಹಸಿಗೂಸಿದೆ. ನೀರಜ್ ಪನ್ವಾರ್ ಬೇಗುಂ ಬಜಾರ್ ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು.

ಯುವತಿಯ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ನೀರಜ್ ಗೆ ತಲೆ, ಎದೆ ಹಾಗೂ ಇನ್ನಿತರ ಭಾಗಗಳಿಗೆ ಇರಿದು ಕೊಂದಿದ್ದಾರೆ. ನೀರಜ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ನೀರಜ್ ಸಾವಿನ ಬಗ್ಗೆ ಆತನ ತಂದೆ ಮಾತನಾಡಿದ್ದು, ಪ್ರೇಮ ವಿವಾಹವಾಗಿದ್ದಕ್ಕೆ ನನ್ನ ಮಗನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹಿಂದಿನಿಂದ ಆತನಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿರುವ ಶಾಹಿನಾಯತ್ ಗುಂಜ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

https://twitter.com/ANI/status/1527903272002256896
Join Whatsapp