ಮೋಹನ್ ಭಾಗವತ್- ಮುಸ್ಲಿಂ ಚಿಂತಕರ ಭೇಟಿ; ದೇಶದ ಸಾಮರಸ್ಯ ಬಲಪಡಿಸುವ ಬಗ್ಗೆ ಚರ್ಚೆ

Prasthutha|

ನವದೆಹಲಿ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಶಿ ಮತ್ತು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸೇರಿದಂತೆ ಮುಸ್ಲಿಂ ಚಿಂತಕರ ನಿಯೋಗ ಭೇಟಿ ಮಾಡಿ ಮಾತುಕತೆ ನಡಸಿದೆ.

- Advertisement -

ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಬಲಪಡಿಸುವ ಯೋಜನೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ  ಎಂದು ಮಾಧ್ಯಮಗಳು ವರದಿ ಮಾಡಿವೆ.

ಆರ್ ಎಸ್ ಎಸ್  ಕಚೇರಿ ಉದಾಸಿನ್ ಆಶ್ರಮದಲ್ಲಿ ಇತ್ತೀಚೆಗೆ ನಡೆದ ಗೌಪ್ಯ ಸಭೆಯಲ್ಲಿ ಕೋಮು ಸೌಹಾರ್ದತೆಯನ್ನು ಬಲಪಡಿಸುವುದು ಮತ್ತು ಸಮುದಾಯದೊಳಗಿನ ಸಂಬಂಧಗಳನ್ನು ಸುಧಾರಿಸುವ ಕುರಿತು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ವ್ಯಾಪಕ ಚರ್ಚೆಗಳು ನಡೆದವು. ಸಭೆಯಲ್ಲಿ ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಮಾಜಿ ಉಪಕುಲಪತಿ ಲೆಫ್ಟಿನೆಂಟ್ ಜನರಲ್  ಜಮೀರುದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಸೇರಿ ಹಲವರು ಹಾಜರಿದ್ದರು ಎಂದು ತಿಳಿದುಬಂದಿದೆ.

- Advertisement -

ಎರಡೂ ಕಡೆಯವರು ಕೋಮು ಸೌಹಾರ್ದತೆಯ ಅಗತ್ಯವನ್ನು ಪ್ರತಿಪಾದಿಸಿದ್ದು, ಕೋಮು ಸೌಹಾರ್ದತೆ ಮತ್ತು ಸಮುದಾಯಗಳ ನಡುವೆ ಸಾಮರಸ್ಯವನ್ನು ಬಲಪಡಿಸದೇ ದೇಶದ ಪ್ರಗತಿ ಅಸಾಧ್ಯ  ಎಂದು ಭಾಗವತ್ ಮತ್ತು ಚಿಂತಕರ ಗುಂಪು ಒಪ್ಪಿಕೊಂಡಿದೆ. ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ತಪ್ಪುಗ್ರಹಿಕೆಯನ್ನು ಹೋಗಲಾಡಿಸಲು ಈ ಉಪಕ್ರಮವನ್ನು ಮುಂದುವರಿಸಲು ಯೋಜನೆಯನ್ನು ರೂಪಿಸಲಾಗಿದೆ. ಒಟ್ಟಿನಲ್ಲಿ ದೇಶದ ಹಿತಕ್ಕಾಗಿ ಗಾಂಧಿವಾದಿ ವಿಧಾನವನ್ನು ಅನುಸರಿಸುವುದರ ಬಗ್ಗೆ ಚರ್ಚೆಗಳು ನಡೆದವು ಎಂಬ ಮಾಹಿತಿ ಲಭ್ಯವಾಗಿದೆ.

2019ರ ಸೆಪ್ಟೆಂಬರ್ನಲ್ಲಿ ಭಾಗವತ್ ಅವರು ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಸೈಯದ್ ಅರ್ಷದ್ ಮದನಿ ಅವರನ್ನು ಭೇಟಿ ಮಾಡಿದ್ದರು. ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಏಕತೆಯನ್ನು ಬಲಪಡಿಸುವುದು ಮತ್ತು ಗುಂಪು ಹತ್ಯೆಯ ಘಟನೆಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ  ಅಂದು ಚರ್ಚೆಗಳು ನಡೆದಿತ್ತು.

Join Whatsapp