ಸಚಿವ ಸುನೀಲ್ ಕುಮಾರ್ ರ ಹಿಂದುತ್ವ ಹೇಳಿಕೆ: ಬಿ.ಕೆ.ಹರಿಪ್ರಸಾದ್ ತಿರುಗೇಟು

Prasthutha|

ಬೆಂಗಳೂರು: ಸರ್ಕಾರ ಅಥವಾ ಹಿಂದುತ್ವವನ್ನು ಆಯ್ಕೆಗೊಳಿಸುವ ಪ್ರಶ್ನೆ ಉದ್ಭವಿಸಿದಾಗ ಸರ್ಕಾರವನ್ನು ತೊರೆದು ಹಿಂದುತ್ವವನ್ನೇ ಆಯ್ಕೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹರಿಪ್ರಸಾದ್ ಅವರು, ಸುನೀಲ್ ಕುಮಾರ್ ಅವರೇ ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ಮಾಡಿದ್ದು ಸಂವಿಧಾನದ ಮೇಲೆ ಹೊರತು, ಮನುಸ್ಮೃತಿಯ ಮೇಲಲ್ಲ. ಭಾರತದ ಸಂವಿಧಾನದ ಪೀಠಿಕೆಯು “ನಮ್ಮ ದೇಶವು ಜಾತ್ಯತೀತ ರಾಷ್ಟ್ರ” ಎಂದು ಪ್ರತಿಪಾದಿಸಿದೆ. ಸಚಿವರು ರಾಜೀನಾಮೆ ನೀಡಿ ಹಿಂದೂ ರಾಷ್ಟ್ರಕ್ಕಾಗಿ ಹೋರಾಟ ಮಾಡುವುದಾದರೆ ನಾವು ಸಂವಿಧಾನದ ಆಧಾರದಲ್ಲಿ ಅವರನ್ನು ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಸಚಿವ ಸುನೀಲ್ ಕುಮಾರ್ ಅವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.



Join Whatsapp