RSSಗೆ ಕ್ಲೀನ್ ಚಿಟ್ ನೀಡಿದ್ದ ಮೌಲಾನಾ ಅರ್ಶದ್ ಮದನಿ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಉಪಾಧ್ಯಕ್ಷರಾಗಿ ನೇಮಕ

Prasthutha|

ನವದೆಹಲಿ: ದಾರುಲ್ ಉಲೂಮ್ ದಿಯೋಬಂದ್ ನ ಪ್ರಾಂಶುಪಾಲ ಮೌಲಾನಾ ಅರ್ಶದ್ ಮದನಿ ಅವರು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಎಲ್ ಬಿ) ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ನಡೆದ ಎಐಎಂಪಿಎಲ್ ಬಿಯ 27 ನೇ ಸಮ್ಮೇಳನದಲ್ಲಿ ಅವರನ್ನು ಈ ಹುದ್ದೆಗೆ ನೇಮಿಸಲಾಯಿತು.

- Advertisement -


ಹಿಂದೂ ರಾಷ್ಟ್ರೀಯವಾದಿ ಗುಂಪಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಪರವಾಗಿ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಮದನಿ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇತ್ತೀಚೆಗೆ, ಆರ್ ಎಸ್ ಎಸ್ “ಸರಿಯಾದ ಹಾದಿಯಲ್ಲಿದೆ” ಮತ್ತು ಅದು ತನ್ನ ಹಳೆಯ ಸಿದ್ಧಾಂತವನ್ನು ಬದಲಾಯಿಸುತ್ತಿದೆ ಎಂದು ಮದನಿ ಹೇಳಿಕೆ ನೀಡಿದ್ದರು.


ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ವಂಶಾವಳಿ ಒಂದೇ ಎಂದು ಹೇಳಿಕೆ ನೀಡಿದ್ದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಾಗ ಮದನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.
2019ರಲ್ಲಿ, ಬಾಬರಿ ಮಸೀದಿಯ ತೀರ್ಪಿಗೆ ಕೇವಲ ಎರಡು ತಿಂಗಳ ಮೊದಲು, ಮದನಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನವದೆಹಲಿಯ ಸಂಘಟನೆಯ ಪ್ರಧಾನ ಕಚೇರಿಯಲ್ಲಿ ಭೇಟಿಮಾಡಿದ್ದರು. ಅವರು ಈ ಸಭೆಯನ್ನು “ಉತ್ತಮ ಸಭೆ” ಎಂದು ಬಣ್ಣಿಸಿದ್ದರು ಮತ್ತು ಭವಿಷ್ಯದಲ್ಲಿಯೂ ಇದೇ ರೀತಿಯ ಸಂವಾದಗಳು ನಡೆಯಬೇಕು ಎಂದು ಹೇಳಿದ್ದರು.
ಅವರು ಇತ್ತೀಚೆಗೆ ಇಸ್ಲಾಮೋಫೋಬಿಕ್ ಟೆಲಿವಿಷನ್ ಚಾನೆಲ್ ಸುದರ್ಶನ ನ್ಯೂಸ್ ಗೆ ಸಂದರ್ಶನ ನೀಡಿದರು. ಈ ಸಂದರ್ಶನದ ಸಮಯದಲ್ಲಿ, ನಿರೂಪಕ ಸುರೇಶ್ ಚವ್ಹಾಂಕೆ “ಅಲ್ಲಾಹ್” ಮತ್ತು ಇತರ ಇಸ್ಲಾಮಿಕ್ ನಂಬಿಕೆಗಳನ್ನು ಅಣಕಿಸುತ್ತಿದ್ದರು. ಅಂತಹ ಪ್ರಚೋದನಕಾರಿ ಚಾನೆಲ್ ಗೆ ಸಂದರ್ಶನ ನೀಡುವ ಮದನಿ ನಿರ್ಧಾರಕ್ಕೆ ಮುಸ್ಲಿಮ್ ಸಮುದಾಯದಲ್ಲಿ ಆಕ್ರೋಶ ಮತ್ತು ತೀವ್ರ ಟೀಕೆ ವ್ಯಕ್ತವಾಗಿದ್ದವು.
ಮದನಿ ಪ್ರಸ್ತುತ ದಿಯೋಬಂದ್ ನ ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಮತ್ತು ಜಮಿಯತ್-ಉಲಾಮಾ-ಇ-ಹಿಂದ್ ನ ಮುಖ್ಯಸ್ಥರಾಗಿದ್ದಾರೆ.

Join Whatsapp