ಮಂಗಳೂರು: ನಿಷೇಧಾಜ್ಞೆ ಲೆಕ್ಕಿಸದೆ ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿಯಿಂದ ಧರಣಿ ಆರಂಭ

Prasthutha|

ಸುರತ್ಕಲ್: ಇಲ್ಲಿನ ಅಕ್ರಮ ಟೋಲ್ ಗೇಟ್ ವಿರುದ್ಧ ಟೋಲ್ ವಿರೋಧಿ ಹೋರಾಟ ಸಮಿತಿ ಇಂದಿನಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದು, ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ಪ್ರತಿಭಟನಕಾರರು ಟೋಲ್ ಕೇಂದ್ರದ ಪಕ್ಕ ಪ್ರತಿಭಟನೆ ಆರಂಭಿಸಿದ್ದಾರೆ.

- Advertisement -


ಬೆಳಗ್ಗೆ 10 ಗಂಟೆಗೆ ಜಮಾಯಿಸಿದ ಹೋರಾಟ ಸಮಿತಿ ಮುಖಂಡರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತಾಡಿದ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಸುರತ್ಕಲ್ ಟೋಲ್ ಕೇಂದ್ರ ತೆರವುಗೊಳಿಸಬೇಕು ಎಂಬುದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದೆ. ಇದೊಂದು ಅನಧಿಕೃತ ಟೋಲ್ ಎಂಬುದನ್ನು ಸರ್ಕಾರ ಕೂಡ ಒಪ್ಪಿಕೊಂಡಿದೆ. ಆದರೆ ತೆರವುಗೊಳಿಸಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.


ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಜಿಲ್ಲೆಯ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಏಳು ವರ್ಷಗಳಿಂದ ಟೋಲ್ ತೆರವಿಗೆ ದಿನಾಂಕ ಮುಂದೂಡುತ್ತಲೇ ಇದ್ದಾರೆ. ಈಗ ನವೆಂಬರ್ 9 ಗಡುವು ನೀಡಿದ್ದಾರೆ. ಆದರೆ ಅವರನ್ನು ನಂಬುವ ಹಾಗಿಲ್ಲ. ಪ್ರತಿಭಟನೆ ಎದುರಿಸಲು ಜಿಲ್ಲಾಡಳಿತ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದರೆ ಇದರಿಂದ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಲ್ಲಿಂದ ಟೋಲ್ ಗೇಟ್ ತೆರವುಗೊಳ್ಳುವ ತನಕ ಹಗಲು ರಾತ್ರಿ ಹೋರಾಟ ಮುಂದುವರಿಯಲಿದೆ” ಎಂದರು.

- Advertisement -


ಡಿವೈ ಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ, ಬಿ. ಕೆ. ಇಮ್ತಿಯಾಝ್, ಮಂಜುಳಾ ನಾಯಕ್ ರಾಘ ವೇಂದ್ರ ರಾವ್, ಎಂ. ಜಿ ಹೆಗಡೆ, ದಿನೇಶ್ ಹೆಗ್ಡೆ ಪುರುಷೋತ್ತಮ್ ಚಿತ್ರಾಪುರ, ಮೊಯಿದೀನ್ ಬಾವ, ದಿನೇಶ್ ಕುಂಪಲ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಯಾದವ್ ಶೆಟ್ಟಿ, ವಸಂತ ಆಚಾರಿ, ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತಿತರ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

Join Whatsapp