ಮಂಗಳೂರು ಮಹಾನಗರ ಪಾಲಿಕೆ ಆಸ್ತಿ ಜಪ್ತಿಗೆ ಆದೇಶ

Prasthutha|

ಮಂಗಳೂರು: ಪಂಪ್ ವೆಲ್ ನಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರದ ಹಣ ಪಾವತಿ ಮಾಡದ ಕಾರಣ ಮಂಗಳೂರು ಮಹಾನಗರ ಪಾಲಿಕೆಯ ಚರಾಸ್ತಿ ಜಪ್ತಿಗೆ ಜಿಲ್ಲಾ ನ್ಯಾಯಾಲಯವು ಆದೇಶ ನೀಡಿದೆ.

- Advertisement -

ಜಪ್ತಿ ಆದೇಶ ಜಾರಿಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ನ್ಯಾಯಾಲಯದ ಅಮೀನ್ ಅವರು ಬುಧವಾರ ತೆರಳಿದ್ದರು. ಪಾಲಿಕೆಯ ಕೋರಿಕೆ ಮೇರೆಗೆ ಪರಿಹಾರ ಪಾವತಿಗೆ ಅ.25ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ..

ಪಂಪ್ ವೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಪಾಲಿಕೆಯು 7 ಎಕರೆ 23.5 ಸೆಂಟ್ಸ್ ಜಾಗವನ್ನು 2008ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಒಟ್ಟು 33 ಕುಟುಂಬಗಳು ಇದಕ್ಕೆ ಜಮೀನು ಬಿಟ್ಟುಕೊಟ್ಟಿದ್ದವು. ಅದರಲ್ಲಿ 16 ಕುಟುಂಬಗಳು ನಿಗದಿಪಡಿಸಿದ ಭೂ ಪರಿಹಾರದ ಮೊತ್ತಕ್ಕೆ ತಕರಾರು ತೆಗೆದಿದ್ದು, ಹೆಚ್ಚಿನ ಪರಿಹಾರ ಕೋರಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದವು.

- Advertisement -

ಹೆಚ್ಚಿನ ಭೂಪರಿಹಾರಕ್ಕೆ ಸಂಬಂಧಿಸಿ 16 ವ್ಯಾಜ್ಯಗಳ ವಿಚಾರಣೆ ನಡೆಯುತ್ತಿದ್ದು, ಈ ಪ್ರಕರಣಗಳಿಗೆ ಪಾಲಿಕೆಯು ತಡೆಯಾಜ್ಞೆ ತಂದಿತ್ತು. ಆದರೆ, ತಡೆಯಾಜ್ಞೆಯ ಅವಧಿ ಮುಗಿದ ಒಂದು ಪ್ರಕರಣದಲ್ಲಿ ಪಾಲಿಕೆ ಸ್ವತ್ತುಗಳ ಜಪ್ತಿಗೆ ಸಂಬಂಧಿಸಿ ನ್ಯಾಯಾಲಯವು ಆದೇಶ ಮಾಡಿತ್ತು. ಜಪ್ತಿಗೆ ಆದೇಶವಾಗಿರುವ ಪ್ರಕರಣದಲ್ಲಿ ಪಾಲಿಕೆಯು ಭೂಮಾಲೀಕರಿಗೆ ₹ 3.48 ಕೋಟಿ ಪರಿಹಾರ ಪಾವತಿಸಬೇಕಿದೆ.

ಈ ಆದೇಶ ಜಾರಿಗೊಳಿಸದಂತೆ ನ್ಯಾಯಾಲಯವನ್ನು ಕೋರಿದ್ದೇವೆ. ಭೂ ಪರಿಹಾರ ಪಾವತಿಗೆ ಅ.25ರವರೆಗೆ ನಮಗೆ ಕಾಲಾವಕಾಶ ಸಿಕ್ಕಿದೆ  ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್  ಹೇಳಿದ್ದಾರೆ.

ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಬಸ್ನಿಲ್ದಾಣವನ್ನು ಸ್ಥಾಪಿಸಲು ಪಾಲಿಕೆಗೆ ಇನ್ನೂ ಸಾಧ್ಯವಾಗಿಲ್ಲ. ಇನ್ನೊಂದೆಡೆ ಜಾಗ ಬಿಟ್ಟುಕೊಟ್ಟವರಿಗೆ ಭೂಪರಿಹಾರವೂ ಇನ್ನೂ ಸಿಕ್ಕಿಲ್ಲ .

Join Whatsapp