ಮಂಗಳೂರು ವಿವಿ ಪ್ರಶ್ನೆಪತ್ರಿಕೆಯಲ್ಲಿ ಎಡವಟ್ಟು: ಕುಲಪತಿಗಳ ದುರಾಡಳಿತವನ್ನು ಬಹಿರಂಗಪಡಿಸಿದೆ; ಕ್ಯಾಂಪಸ್ ಫ್ರಂಟ್ ಆರೋಪ

Prasthutha|

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬಿಬಿಎ ಪದವಿ ಪರೀಕ್ಷೆಗಳು ನಡೆಯುತ್ತಿದ್ದು, ಇಂದು ನಡೆಯಬೇಕಾಗಿದ್ದ ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ಗೊಂದಲದಿಂದಾಗಿ ಪರೀಕ್ಷೆಯನ್ನೇ ಮುಂದೂಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಂಕಷ್ಟಗೊಳಗಾಗಿದ್ದು, ಅವರ ಭವಿಷ್ಯದ ಜೊತೆ ವಿವಿ ಚೆಲ್ಲಾಟವಾಡುತ್ತಿದೆ. ಇದು ಕುಲಪತಿಗಳ ದುರಾಡಳಿತವನ್ನು ಮತ್ತೆ ಸಾಬೀತುಪಡಿಸಿದೆ ಎಂದು ಕ್ಯಾಂಪಸ್ ಫ್ರಂಟ್ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪ್ರಶ್ನೆ ಪತ್ರಿಕೆಯ ಬದಲಿಗೆ ಕಾಲೇಜುಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರಥಮ ಸೆಮಿಸ್ಟರ್‌ನ ಕನ್ನಡ ಪ್ರಶ್ನೆ ಪತ್ರಿಕೆಗಳು ಪೂರೈಸಿ ಎಡವಟ್ಟು ಮಾಡಿದ್ದಾರೆ. ವಿವಿಯು ಒಂದಲ್ಲಾ ಒಂದು ವಿಷಯಗಳಿಗೆ ಸುದ್ದಿಯಾಗುತ್ತಲೇ ಇದೆ. ಲ್ಯಾಪ್ ಟಾಪ್ ಹಗರಣದಿಂದ ಹಿಡಿದು ಶೈಕ್ಷಣಿಕ ವಿವಿಧ ಸಮಸ್ಯೆಗಳನ್ನು ವಿವಿಯ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಎಲ್ಲದಕ್ಕೂ ವಿವಿಯ ಕುಲಪತಿಗಳ ದುರಾಡಳಿತವೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ತಕ್ಷಣ ಪ್ರಶ್ನೆಪತ್ರಿಕೆ ಎಡವಟ್ಟು ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕು. ದುರಾಡಳಿತ ನಡೆಸಿ ವಿವಿಯ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ವಿವಿ ಕುಲಪತಿಗಳನ್ನು ಅಮಾನತುಗೊಳಿಸಬೇಕೆಂದು ಕ್ಯಾಂಪಸ್ ಫ್ರಂಟ್ ಮಂಗಳೂರು ನಗರಾಧ್ಯಕ್ಷ ಸರಫುದ್ದೀನ್ ಅವರು ಆಗ್ರಹಿಸಿದ್ದಾರೆ.




Join Whatsapp