ಮಂಗಳೂರು: ಫಾಝಿಲ್, ಮಸೂದ್ ಪ್ರಕರಣದಲ್ಲಿ ಸರ್ಕಾರದ ತಾರತಮ್ಯ ನೀತಿ ವಿರೋಧಿಸಿ ನಾಳೆ ಬೃಹತ್ ಪ್ರತಿಭಟನೆ

Prasthutha|

ಮಂಗಳೂರು: ಸುರತ್ಕಲ್ ಫಾಝಿಲ್ ಮತ್ತು ಸುಳ್ಯದ ಮಸೂದ್ ಹತ್ಯೆಯನ್ನು ಖಂಡಿಸಿ ಹಾಗೂ ಸರ್ಕಾರ ನಡೆದುಕೊಂಡ ತಾರತಮ್ಯ ನೀತಿಯನ್ನು ವಿರೋಧಿಸಿ ಸುರತ್ಕಲ್ ನ ಮುಸ್ಲಿಂ ಐಕ್ಯತಾ ವೇದಿಕೆ ವತಿಯಿಂದ ಸೆ.16ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.

- Advertisement -

ಸೆ.16ರ ಪ್ರತಿಭಟನೆಗೆ ಮುಸ್ಲಿಮ್ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಬೆಂಬಲ ಸೂಚಿಸಿದ್ದಾರೆ.

ಶುಕ್ರವಾರ ಸಂಜೆ 4 ಗಂಟೆಗೆ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜಮಾಅತ್ ಸದಸ್ಯರು ಭಾಗವಹಿಸಲಿದ್ದಾರೆ.

- Advertisement -

ಬೆಳ್ಳಾರೆಯ ಮಸೂದ್ ಹಾಗೂ ಸುರತ್ಕಲ್ ನ ಫಾಝಿಲ್ ಕೊಲೆ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಸಬೇಕು. ಮೃತ ಮಸೂದ್ ಹಾಗೂ ಫಾಝಿಲ್ ಮನೆಗೆ ಸರಕಾರದ ಪ್ರತಿನಿಧಿ ಭೇಟಿ ನೀಡಿ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಪ್ರವೀಣ್ ನೆಟ್ಟಾರು ಪ್ರಕರಣವನ್ನು ಎನ್ ಐಎಗೆ ವಹಿಸಿದಂತೆ ಈ ಪ್ರಕರಣವನ್ನೂ ವಹಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಈ ಹೋರಾಟ ಹಮ್ಮಿಕೊಳ್ಳಲಾಗಿದೆ.

ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸುಳ್ಯದ ಮಸೂದ್, ಸುರತ್ಕಲ್ ಫಾಝಿಲ್ ಹತ್ಯೆ ನಂತರದ ಬೆಳವಣಿಗೆಯಲ್ಲಿ ಸರಕಾರ ಪರಿಹಾರ ಮೊತ್ತ ವಿತರಣೆ, ಹತ್ಯೆಯ ಆರೋಪಿಗಳ ತನಿಖೆಯನ್ನು ಎನ್.ಐ. ಎ ಕೇಂದ್ರ ತನಿಖಾ ತಂಡಕ್ಕೆ ವಹಿಸಿ ಕೊಡಲು ನಿರಾಕರಣೆ ಇತ್ಯಾದಿ ವಿಷಯದಲ್ಲಿ ಮತೀಯ ತಾರತಮ್ಯ ನೀತಿ ವಿರೋಧಿಸಿ ಸೆ.16ರ ಶುಕ್ರವಾರ ಮಂಗಳೂರಿನ ಕ್ಲಾಕ್ ಟವರ್ ಹತ್ತಿರ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ಮುಸ್ಲಿಮ್ ಒಕ್ಕೂಟ ಬೆಂಬಲ ನೀಡಲಿದ್ದು, ಶಾಂತಿಯುತ, ಪ್ರಜಾಸತ್ತಾತ್ಮಕ ಈ ಪ್ರತಿಭಟನೆಗೆ ಸರ್ವರೂ ಹಾಜರಾಗಬೇಕು ಎಂದು ಮನವಿ ಮಾಡಿದ್ದಾರೆ.



Join Whatsapp