ಮಗಳೇದುರೇ ಪತ್ನಿಯ ಬರ್ಬರ ಕೊಲೆ: ಪತಿ ಬಂಧನ

Prasthutha|

ಮಂಡ್ಯ: ಇಪ್ಪತ್ತು ಮೂರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಪತ್ನಿಯನ್ನು ಮಗಳೇದುರೇ ಬರ್ಬರವಾಗಿ ಕೊಲೆ ಮಾಡಿದ್ದ ಪತಿಯನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪಾಂಡವಪುರ ತಾಲೂಕಿನ ಅರಳಕುಪ್ಪೆಯ ಪತ್ನಿ ಶೋಭಾ (43) ಅವರನ್ನು ಕೊಲೆಗೈದು ಪರಾರಿಯಾಗಿದ್ದ ಮನೋಹರ್ (48) ಬಂಧಿತ ಆರೋಪಿಯಾಗಿದ್ದಾನೆ.

- Advertisement -


23 ವರ್ಷಗಳ ಹಿಂದೆ ಒಂದೇ ಗ್ರಾಮದ ಶೋಭಾ ಹಾಗೂ ಮನೋಹರ್ ಪ್ರೀತಿಸಿ ಪೋಷಕರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಇತ್ತೀಚೆಗೆ ಮನೋಹರ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದನು. ಇಬ್ಬರು ಮಕ್ಕಳಿದ್ದರೂ ಬೇಜವಾಬ್ದಾರಿಯಿಂದ ಕಂಠಪೂರ್ತಿ ಕುಡಿದು ಪ್ರತಿನಿತ್ಯ ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದನು. ಹೀಗೆ ಎರಡು ದಿನಗಳ ಹಿಂದೆ ಬೈಕ್ ಸಾಲದ ವಿಚಾರಕ್ಕೆ ಮನೆಯಲ್ಲಿ ಕಿರಿಕ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಮಗನಿಗೆ ಸಾಲದ ಕಂತಿನಲ್ಲಿ ತಾಯಿ ಶೋಭಾ ಬೈಕ್ ಕೊಡಿಸಿದ್ದರು. ಕಳೆದ 3 ತಿಂಗಳಿನಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಮನೋಹರ್’ಗೆ ಕರೆ ಮಾಡಿ ಕಂತು ಕಟ್ಟುವಂತೆ ಫೈನಾನ್ಸ್ ಕಂಪನಿಯವರು ಕೇಳುತ್ತಿದ್ದರು. ಅಷ್ಟೇ ಅಲ್ಲ, ಮನೆ ಬಳಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ ಹಣ ಕಟ್ಟುವಂತೆ ಒತ್ತಡ ಹಾಕುತ್ತಿದ್ದರು. ಈ ವಿಚಾರಕ್ಕೆ ಕುಪಿತಗೊಂಡ ಮನೋಹರ್ ಪತ್ನಿಯೊಂದಿಗೆ ಜಗಳವಾಡಿದ್ದನು.
ಕುಡಿದ ಮತ್ತಿನಲ್ಲಿದ್ದ ಮನೋಹರ ಪತ್ನಿಗೆ ಮನಬಂದಂತೆ ಬೈದು ಗಲಾಟೆ ಮಾಡಿದ್ದಾನೆ. ಪರಸ್ಪರ ಬೈದಾಟದಿಂದ ಜಗಳ ತಾರಕಕ್ಕೇರಿತ್ತು. ಈ ವೇಳೆ ಕುಡುಗೋಲಿನಿಂದ ಮಗಳ ಕಣ್ಣೆದುರೇ ಶೋಭಾಳ ಮೇಲೆ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿದ್ದ ಶೋಭಾ ಸಹಾಯಕ್ಕೆ ಸ್ಥಳೀಯರು ಯಾರೂ ಮುಂದೆ ಬಂದಿಲ್ಲ. “ನಾನು ಎಷ್ಟೇ ಕೇಳಿಕೊಂಡರೂ ಸಹ ಗಂಭೀರವಾಗಿ ಗಾಯಗೊಂಡಿದ್ದ ನನ್ನ ತಾಯಿ ಶೋಭಾ ಸಹಾಯಕ್ಕೆ ಯಾರೂ ಬರಲಿಲ್ಲ, ಸಕಾಲಕ್ಕೆ ಆಂಬ್ಯುಲೆನ್ಸ್ ಕೂಡ ಬಾರದೇ ಶೋಭಾ ಸಾವನ್ನಪ್ಪಿದ್ದಾರೆ ಎಂಬ ಆರೋಪವಿದೆ.

- Advertisement -


ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಸ್ಥಳದಿಂದ ಪರಾರಿಯಾಗಿದ್ದ ಮನೋಹರ್’ನನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

Join Whatsapp