ಶಬ್ದ ಮಾಲಿನ್ಯ ಉಂಟುಮಾಡುವ ಆರಾಧನಾಲಯಗಳ ವಿರುದ್ಧ ಕ್ರಮಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

Prasthutha|

ಚೆನ್ನೈ: ಶಬ್ಧ ಮಾಲಿನ್ಯ ಉಂಟು ಮಾಡುವ ಮತ್ತು ಕಟ್ಟಡ ಸಂಹಿತೆ ಉಲ್ಲಂಘಿಸುವ ಆರಾಧನಾಲಯಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

- Advertisement -

ತಮಿಳುನಾಡಿನ ಈರೋಡ್‌ನ ತೋಪಂಪಾಳ್ಯಂನಲ್ಲಿರುವ ಪೆಂತೆಕೋಸ್ಟ್ ಚರ್ಚ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಕಟ್ಟಡ ಪರವಾನಿಗೆ ಇಲ್ಲದೆ ಚರ್ಚ್ ನಿರ್ಮಿಸಲು ಹೊರಟಿದ್ದಕ್ಕೆ ಸತ್ಯಮಂಗಲಂ ತಹಸೀಲ್ದಾರ್ ತಡೆ ಒಡ್ಡಿದ್ದರು. ಚರ್ಚ್ ನ ಸುತ್ತಮುತ್ತಲಿನ ನಿವಾಸಿಗಳ ದೂರಿನ ಮೇರೆಗೆ ಧ್ವನಿವರ್ಧಕಗಳ ಬಳಕೆಯನ್ನೂ ಕೂಡ ತಹಸೀಲ್ದಾರ್ ನಿಷೇಧಿಸಿದ್ದರು. ತಹಸೀಲ್ದಾರ್ ಕೈಗೊಂಡ ಕ್ರಮದ ವಿರುದ್ಧ ತಡೆಯಾಜ್ಞೆ ಕೋರಿ ಚರ್ಚ್ ನ್ಯಾಯಾಲಯದ ಮೆಟ್ಟಿಲೇರಿದೆ.

ಆದರೆ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಇದೇ ರೀತಿಯ ಸಮಸ್ಯೆಗಳ ಬಗ್ಗೆ ಮುಂದಿನ ಕ್ರಮಕ್ಕೆ ಆದೇಶಿಸಿದೆ. ಧಾರ್ಮಿಕ ಸಂಸ್ಥೆಗಳು ಶಬ್ದ ಮಾಲಿನ್ಯ ಉಂಟು ಮಾಡುವ ಅಥವಾ ಕಟ್ಟಡ ಸಂಹಿತೆ ಉಲ್ಲಂಘಿಸುವ ದೂರುಗಳಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಮೂರ್ತಿ ಸುಬ್ರಮಣಿಯನ್ ಸೂಚಿಸಿದ್ದಾರೆ.

Join Whatsapp