ಹಿಂಬಾಗಿಲಿಂದ ಅಧಿಕಾರಕ್ಕೆ ಬಂದವರನ್ನು ಮುಂಬಾಗಿಲಿಂದಲೇ ಓಡಿಸೋಣ: ಸಿದ್ದರಾಮಯ್ಯ

Prasthutha|

ಅಧಿಕಾರದಲ್ಲಿದ್ದಾಗ ಯಾರಿಂದಲೂ ಛೀ ಥೂ ಅನಿಸಿಕೊಂಡು ಅಧಿಕಾರ ಮಾಡಲಿಲ್ಲ, ನುಡಿದಂತೆ ನಡೆದಿದ್ದೇವೆ

- Advertisement -

ಮಂಡ್ಯ: ಜನತೆ ಆಶೀರ್ವಾದ ಮಾಡಿದ್ದರಿಂದ 5 ವರ್ಷ ಸಿಎಂ ಆಗಿದ್ದೆ. ಯಾರಿಂದಲೂ ಛೀ ಥೂ ಅನಿಸಿಕೊಂಡು ಅಧಿಕಾರ ಮಾಡಲಿಲ್ಲ. ನುಡಿದಂತೆ ನಡೆದಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಅದನ್ನು ಮೀರಿ 30ಕ್ಕೂ ಅಧಿಕ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯ ತಾಲೂಕಿನ ತಿರುಮಲಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಹುಲಿಯೂರಮ್ಮ ದೇವಾಲಯದ ಉದ್ಘಾಟಿಸಿ ಅವರು ಮಾತನಾಡಿದರು.

- Advertisement -

ಎಲ್ಲಾ ಜಾತಿ ಬಡವರಿಗೆ ಕಾರ್ಯಕ್ರಮ ಕೊಟ್ಟಿದ್ದೇವೆ. ಕೆಲವೇ ಜಾತಿಗಳಿಗೆ ಸೀಮಿತವಾದ ಅಧಿಕಾರ ಮಾಡಲಿಲ್ಲ. ಅಕ್ಕಿ, ಹಾಲು, ಶೂ, ಸಮವಸ್ತ್ರ ಎಲ್ಲಾ ಧರ್ಮ, ಜಾತಿಯವರಿಗೂ ಉಪಯೋಗ ಆಗಿತ್ತು. ಇಂದು ಅವೆಲ್ಲವನ್ನೂ ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ 2 ವರ್ಷಗಳಿಂದ ಸ್ಕಾಲರ್ ಶಿಪ್ ಕೊಟ್ಟಿಲ್ಲ. SC, ST ಮಕ್ಕಳು ನನ್ನ ಮುಂದೆ ಈ ಬಗ್ಗೆ ದೂರುತ್ತಿದ್ದಾರೆ. ವಿದ್ಯಾಸಿರಿ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಹೀಗಿದ್ದರೂ SC, STಗಳ ಬಗ್ಗೆ ಮಾತನಾಡಲಿಕ್ಕೆ ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ಇವರು ಅಧಿಕಾರಕ್ಕೆ ಬಂದಿರುವುದೇ ಹಿಂಬಾಗಿಲಿನಿಂದ. ಹಿಂಬಾಗಿಲಿಂದ ಬಂದವರನ್ನು ಮುಂಬಾಗಿಲಿಂದಲೇ ಓಡಿಸೋಣ. ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕೇ ಎಂದು ಅವರು ಪ್ರಶ್ನಿಸಿದರು.

ಮೈಶುಗರ್ ಕಾರ್ಖಾನೆಗೆ ಘೋಷಿಸಿದ ಅನುದಾನವನ್ನು ರಾಜ್ಯ ಸರ್ಕಾರ ಕೊಡಲಿಲ್ಲ. ನಮ್ಮ ಸರ್ಕಾರ ಬಂದರೆ ಫ್ಯಾಕ್ಟರಿ ತೆರೆಯಲಾಗುವುದು. ದೇವರು ಎಲ್ಲಾ ಕಡೆ ಇದ್ದಾನೆ ಎನ್ನುವುದನ್ನು ತಿಳ್ಕೊಂಡಿದ್ದೇವೆ. ಬರೀ ಗುಡಿಯಲ್ಲಿ ಅಷ್ಟೇ ಅಲ್ಲ. ದೇವರು ನಮ್ಮಲ್ಲೂ ಇದ್ದಾನೆ. ನಾವು ನಿತ್ಯ ಮಾಡುವ ಕೆಲಸವನ್ನು ದೇವರು ನೋಡುತ್ತಿರುತ್ತಾನೆ ಎಂದು ಹೇಳಿದರು.

ದೇಗುಲ ಕಟ್ಟೆದರೆ, ಪ್ರತಿಮೆ ಸ್ಥಾಪಿಸಿದರೆ ಸಾಲದು. ಸತ್ಯವಂತರಾಗಿ ನಡೆದುಕೊಳ್ಳಬೇಕು. ಅದಕ್ಕೆ ಸತ್ಯವೇ ಸ್ವರ್ಗ, ನಿತ್ಯವೇ ನರಕ ಅನ್ನೋದು. ಸ್ವರ್ಗ, ನರಕ ಎರಡೂ ಇಲ್ಲೇ ಇವೆ. ಹೀಗಾಗಿ ಸತ್ಯದಿಂದ ನಡೆಯಬೇಕು. ಸತ್ಯದಿಂದ ನಡೆದರೆ ಸ್ವರ್ಗ.ಸುಳ್ಳಿನಿಂದ ನಡೆದರೆ ನರಕ. ಕನಕದಾಸರು, ಬಸವಾದಿ ಶರಣರ ವಚನ ಪ್ರಸ್ತಾಪ. ಹೀಗಾಗಿ ಎಲ್ಲರನ್ನೂ ನಮ್ಮವರೆಂದು ಪ್ರೀತಿಯಿಂದ ಪ್ರೀತಿಸಿ. ನಿಜ ಗುಣ ಅಳವಡಿಸಿಕೊಳ್ಳುವುದೇ ದೇವರಿಗೆ ಪ್ರೀತಿ. ನಮಗೋಸ್ಕರ ಅಲ್ಲ, ಎಲ್ಲರಿಗೋಸ್ಕರ ಒಳ್ಳೆಯದನ್ನೇ ಬಯಸಬೇಕು. ಆಗ ಮಾತ್ರ ದೇವರು ಮೆಚ್ಚಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಚೆಲುವರಾಯಸ್ವಾಮಿ, ಶಾಸಕರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮುಖಂಡರಾದ ಗಣಿಗ ರವಿ, ಶಿವಣ್ಣ ಹಾಜರಿದ್ದರು.

Join Whatsapp