ಮೂರೂ ಪಕ್ಷಗಳ ನಾಯಕರು ಬಾವಿಕಟ್ಟೆ ಬಳಿ ಮಾತನಾಡುವಂತೆ ಮಾತನಾಡುತ್ತಿದ್ದಾರೆ: ಎಚ್.ವಿಶ್ವನಾಥ್ ಕಿಡಿ

Prasthutha|

ನಳಿನ್, ಬಿಎಸ್ ವೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಎಂಎಲ್ ಸಿ

- Advertisement -

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಮಾಡುವ ನಮ್ಮ ಪಕ್ಷ ಅಥವಾ ವಿಪಕ್ಷ ಗಳು ಇರಬಹುದು, ತಮ್ಮತನವನ್ನೇ ಮರೆತು ಪರಸ್ಪರ ಬೈದಾಟದಲ್ಲಿ ತೊಡಗಿಕೊಂಡಿದ್ದು ಸರಿಯಲ್ಲ ಎಂದು ಹಿರಿಯ ರಾಜಕಾರಣಿ, ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎಂಥೆಂತ ಪುಣ್ಯಾತ್ಮರು ರಾಜ್ಯ ಆಳಿಹೋದರು. ರಾಜ್ಯದಲ್ಲಿ ಆಡಳಿತ ಮಾಡುವ ನಮ್ಮ ಪಕ್ಷ, ಜೆಡಿಎಸ್, ಕಾಂಗ್ರೆಸ್ ತಮ್ಮ ತನವನ್ನು ಮರೆತಿವೆ. ರಾಜ್ಯಕ್ಕೆ ತನ್ನದೇ ಆದ ಸ್ಥಾನಮಾನವಿತ್ತು. ಅದನ್ನು ಬಾವಿಕಟ್ಟೆ ಬಳಿ ಮಾತನಾಡುವಂತೆ ಮಾತನಾಡುತ್ತಿದ್ದಾರೆ. ರಾಜ್ಯದ ಜನ ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

- Advertisement -

ಸಾಕಷ್ಟು ವಿಚಾರಗಳು ಇವತ್ತು ರಾಜ್ಯದಲ್ಲಿವೆ. ಇವುಗಳನ್ನು ಬದಿಗೊತ್ತಿ ನೀನ್ಯಾರು, ನಿನಗೆಷ್ಟು ಹೆಂಡ್ತಿಯರು, ಅವನು ಹೆಬ್ಬೆಟ್ಟು ಎಂಬ ಹೇಳಿಕೆ ನೀಡ್ತಿದ್ದಾರೆ. ಇದು ನಿಜಕ್ಕೂ ಸರಿಯಲ್ಲ. ತಮಿಳುನಾಡು ಆಳಿದ ಕಾಮರಾಜ್ ನಾಡರ್ ಹೆಬ್ಬೆಟ್ಟೇ ಅಲ್ಲವೇ, ಒಂದು ಜಿಲ್ಲೆಯಲ್ಲಿ ಪ್ರಿಂಟಿಂಗ್ ಟೆಕ್ನಾಲಜಿ ಮತ್ತೊಂದು ಜಿಲ್ಲೆಯಲ್ಲಿ ಟೆಕ್ಸ್ ಟೈಲ್ ಮಾಡಿ ಹೆಸರು ಮಾಡಿದ್ದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಬ್ಬೆಟ್ಟು ಅಂದಿದ್ದು ಸರಿಯಲ್ಲ. ಹಿಂದುಳಿದ ವರ್ಗದ ಪ್ರಥಮ ಪ್ರಧಾನಿ ಮೋದಿ. ಇಂತಹ ಪ್ರಧಾನಿ ಅವರ ಬಗ್ಗೆ ಬಹಳ ಲಘುವಾಗಿ ಮಾತನಾಡಬಾರದು.

ಸಿದ್ದರಾಮಯ್ಯನವರೇ, ಅಹಿಂದ ಅಹಿಂದ ಅಂತೀರಲ್ಲ, ಹಿಂದುಳಿದ ವರ್ಗದವರಿಗೆ ಇನ್ಯಾವ ಗೌರವ ಕೊಡ್ತೀರಿ?

ಒಂದು ಬಾರಿ ಸಿಎಂ ಆಗಿದ್ದವರು 36 ಸಾವಿರದಲ್ಲಿ ಬಿದ್ದವರು ಗೆದ್ದವರ ಬಗ್ಗೆ ಮಾತನಾಡುತ್ತಿರಲ್ಲ ಸಿದ್ದರಾಮಯ್ಯನವರೇ ಎಂದು ವಾಗ್ದಾಳಿ ನಡೆಸಿದರು.

ಮೂರು ಪಕ್ಷದವರು ಹೀಗೆಲ್ಲ ಮಾತಾಡೋದು, ಯುವಕರಿಗೆ ಕಲಿಸೋದು ಇದೇನಾ?. ದಯಮಾಡಿ ನಿಮ್ಮ ನಿಮ್ಮ ಕಿಚ್ಚನ್ನು ಮಾತಲ್ಲಿ ಹರಿಬಿಡಬೇಡಿ ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ಯಾವಾಗಲು ಬಿಚ್ಚಿಡುತ್ತೇನೆ ಅಂತಾರೆ, ಬಿಚ್ಚಪ್ಪ ಬಿಚ್ಚು. ಸಮಯ ಯಾಕೆ ಬರಬೇಕು, ಬಿಚ್ಚಪ್ಪ ಈಗಲೇ. ರಾಜ್ಯದ ಜನರಿಗೂ ಗೊತ್ತಾಗಲಿ ಎಂದರು.

ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಯಡಿಯೂರಪ್ಪ ಹಾಗೆ ಮಾತನಾಡಬಾರದೆಂದಿದ್ದರು. ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ನಿಮ್ಮ ಕಿಚ್ಚನ್ನು ಮಾತಿನ ಮೂಲಕ ಹರಿಬಿಡಬೇಡಿ. ರಾಜ್ಯದ ಮಲೀನ ಮಾಡುವುದು ಬೇಡ. ನೆಹರು, ದೇವೇಗೌಡರ ಕುಟುಂಬ ಯಾವುದೇ ಆಗಲಿ. ಅವರ ಕುಟುಂಬದ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ದೇಶಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ ಎಂದರು.

ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿದ್ದು ಕೂಡ ಒಳ್ಳೆಯದಲ್ಲ. ಅವರ ವೈಯಕ್ತಿಕ ಚರಿಷ್ಮಾಗೂ ಒಳ್ಳೆಯದಲ್ಲ. ಆ ರೀತಿಯ ಮಾತುಗಳು ಯಾರಿಂದಲೂ ಬರಬಾರದು ಎಂದು ಹೇಳಿದರು.

ಭಾರತ ಪ್ರಮಾಣಿಕತೆಯಿಂದ ಬಳಲುತ್ತಿದೆ. ನೀವು ಪ್ರಮಾಣಿಕತೆಯಿಂದ ಬಳಲುತ್ತಿದ್ದೀರಾ. ನಿಮಗರ ಒಳ್ಳೆಯ ಮಾತುಗಳೇ ಬರುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಬೈಗಮಿ ಪದ ಬಳಕೆ ಮಾಡಿದ್ದೂ ಸರಿಯಲ್ಲ. ವೈಯಕ್ತಿಕ ಟೀಕೆ ಸರಿಯಲ್ಲ. ಅಭಿವೃದ್ಧಿ ದೃಷ್ಟಿಯಿಂದ ಚರ್ಚೆ ಮಾಡಲು ಬೇಕಾದಷ್ಟು ಇದೆ. ರೈತರ ದುಃಖ ದುಮ್ಮಾನಗಳಿವೆ ಎಂದರು.

ಬಿಎಸ್ ವೈ ವಿರುದ್ಧ ಕುಟುಕಿದ ವಿಶ್ವನಾಥ್ : ಬಿ.ಎಸ್. ಯಡಿಯೂರಪ್ಪ ಅವರು ಎಂ.ಜಿ.ರಸ್ತೆಯಲ್ಲಿ 5 ಕೋಟಿ ರೂ.ಗೆ ರಸ್ತೆ ಉದ್ಘಾಟನೆ ಮಾಡಿ ಬಂದರು. ಅವರು ಬರುತ್ತಿದ್ದಂತೆ ಮಳೆಯಲ್ಲಿ ರಸ್ತೆ ಕೊಚ್ಚಿಹೋಯಿತು ಎಂದು ಬಿಎಸ್ ವೈಗೆ ಪರೋಕ್ಷವಾಗಿ ಕುಟುಕಿದರು.



Join Whatsapp