ಕಸ್ಟಮ್ಸ್ ಅಧಿಕಾರಿಗಳ ಹೆಸರಲ್ಲಿ ಲಕ್ಷಾಂತರ ವಂಚನೆ: ದಂಪತಿ ಬಂಧನ, 34 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮಂಗಳೂರಿನಲ್ಲಿ ವಶ

Prasthutha|

ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳೆಂದು ನಂಬಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಎಐಎಲ್)ದಲ್ಲಿ ಕೆಲಸ ಕೊಡಿಸುವುದಲ್ಲದೇ ಅಲ್ಲಿ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದ   ಅಸ್ಸಾಂ ಮೂಲದ ದಂಪತಿಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

- Advertisement -

ದರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ಹಾಗೂ ಧನುಷ್ಯ ಅಲಿಯಾಸ್ ರಾಚೆಲ್ ಬಂಧಿತ ದಂಪತಿ. ಬಂಧಿತರಿಂದ 34 ಲಕ್ಷದ 50 ಸಾವಿರ ನಗದು, 106.965 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ಸ್ನೇಹ ಕೆ ಭಗವತ್ ಎಂಬವರು ಇಂದಿರಾನಗರದಲ್ಲಿ ನೈಲ್’ಬಾಕ್ಸ್ ಅಕಾಡೆಮಿ ನಡೆಸುತ್ತಿದ್ದು, ಅಲ್ಲಿಗೆ ಟ್ರೈನಿಂಗ್’ಗೆ ಸೇರಿದ್ದ ಆರೋಪಿ ಧನುಷ್ಯ ಅಲಿಯಾಸ್ ರಾಚೆಲ್, ತನ್ನ ಪತಿ ದಾರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್, ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಂಬಿಸಿದ್ದಾಳೆ. ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿರುವ ಚಿನ್ನಾಭರಣಗಳು ಅವರಿಗೆ ಕಡಿಮೆ ಬೆಲೆಗೆ ಸಿಗುವುದಾಗಿ ನಿಮಗೂ ಸಹ ಚಿನ್ನದ ವಡವೆಗಳನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ನಂಬಿಸಿದ್ದಾಳೆ. ಮಾತ್ರವಲ್ಲ ಬೇರೆ ಬೇರೆ ದಿನಗಳಂದು ಸ್ನೇಹ ಕೆ ಭಗವತ್ ರವರಿಂದ ಒಟ್ಟಾರೆಯಾಗಿ 68 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಡೆದು ನಂತರ ಯಾವುದೇ ಚಿನ್ನಾಭರಣಗಳನ್ನು ಕೊಡಿಸದೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾಳೆ.

- Advertisement -

ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿತ್ತು.

ಅಲ್ಲದೆ ದೇವನಹಳ್ಳಿಯ ಯೂರೋ ಕಿಡ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಶ್ವೇತಾ ಎಂಬವರಿಗೆ ದಾರ್ಬಿನ್ ದಾಸ್ ಅಲಿಯಾಸ್ ಮೋಹನ್‍ ದಾಸ್, ತಾನು ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುವುದಾಗಿ ವಿಮಾನನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ಅವರಿಂದ 96,750 ರೂ ಗಳನ್ನು ಪಡೆದು ನಂತರ ಕೆಲಸ ಕೊಡಿಸದೆ ತಲೆಮರೆಸಿಕೊಂಡಿದ್ದು, ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

ಅಲ್ಲದೆ ಅಕಾಡೆಮಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಂದಲೂ, ಆರೋಪಿತರ ಮಗಳು ಓದುತ್ತಿರುವ ಶಾಲೆಯ ಶಿಕ್ಷಕರು, ಮಕ್ಕಳ ಪೋಷಕರಿಂದಲೂ, ಆರೋಪಿತರು ವಾಸವಿದ್ದ ಬ್ರಿಗೇಡ್ ಆರ್ಚಡ್ ಅಪಾರ್ಟ್ಮೆಂಖಟ್’ನ ವಾಸಿಗಳಿಂದಲೂ ವಿಮಾನನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ, ಕಡಿಮೆ ಬೆಲೆಗೆ ಐ-ಫೋನ್’ಗಳನ್ನು, ಲ್ಯಾಪ್’ಟಾಪ್, ಗ್ಯಾಜೆಟ್ಸ್’ಗಳನ್ನು ಕೊಡಿಸುತ್ತೇನೆಂದು ಬೇರೆ ಬೇರೆ ದಿನಾಂಕಗಳಂದು ನಗದು ರೂಪದಲ್ಲಿ, ಆನ್’ಲೈನ್ ಮೂಲಕ ಲಕ್ಷಾಂತರ ರೂ ಹಣವನ್ನು ಪಡೆದುಕೊಂಡು ನಂತರ ಪತಿ- ಪತ್ನಿ ಇಬ್ಬರೂ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡು ಪರಾರಿಯಾಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳಾದ ದಾರ್ಬಿನ್ ದಾಸ್ ಹಾಗೂ ಆತನ  ಪತ್ನಿ ರಾಚೆಲ್ ರನ್ನು ಉಡುಪಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲ ದಂಪತಿ ಹೊಸದಾಗಿ ಬಾಡಿಗೆಗೆ ಪಡೆದಿದ್ದ ಮಂಗಳೂರಿನ ಮೇರಿಹಿಲ್ಸ್ ಏರ್’ಪೋರ್ಟ್ ರಸ್ತೆಯಲ್ಲಿರುವ ವಾಸದ ಫ್ಲಾಟ್’ನಿಂದ  ಸಾರ್ವಜನಿಕರಿಂದ ವಂಚಿಸಿ ಪಡೆದಿದ್ದ  34 ಲಕ್ಷದ 50 ಸಾವಿರ ನಗದು 106.965 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Join Whatsapp