ಕೃಷ್ಣಾಪುರ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ನಿಂದ ರಕ್ತದಾನ ಶಿಬಿರ

Prasthutha|

ಮಂಗಳೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ಕೃಷ್ಣಾಪುರ ವತಿಯಿಂದ ಯೆನಪೋಯ ಆಸ್ಪತ್ರೆ ರಕ್ತನಿಧಿ ದೇರಳಕಟ್ಟೆ ಸಹಭಾಗಿತ್ವದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಭಾನುವಾರ ನಡೆಯಿತು.

- Advertisement -

ಬದ್ರುಲ್ ಹುದಾ ಖತೀಬ್ ಅಶ್ರಫ್ ಸಖಾಫಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು.

ರಕ್ತ ಸಿಗದೆ ಪರದಾಡುವ ಸಂದರ್ಭದಲ್ಲಿ ಆ ರಕ್ತವನ್ನು ಒದಗಿಸಿದಾಗ ಅದನ್ನು ಪಡೆದುಕೊಂಡ ರೋಗಿಗಳ ಕುಟುಂಬದವರ ಪ್ರಾರ್ಥನೆ ನಮ್ಮ ಎಲ್ಲಾ ತೊಡಕುಗಳನ್ನು ನಿವಾರಿಸುತ್ತದೆ ಎಂದು ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ಅಧ್ಯಕ್ಷ ಮುಸ್ತಫಾ ರಯ್ಯಾನ್, ಇಂತಹ ಸೇವೆ ಮಾಡಲು ಸಿಗುವುದು ನಮ್ಮ ಭಾಗ್ಯ. ಇಂತಹ ಜೀವದಾನ ಕಾರ್ಯಕ್ರಮವನ್ನು ಇನ್ನಷ್ಟು ಹುಮ್ಮಸ್ಸಿನಿಂದ ಮುಂದಿನ ದಿನಗಳಲ್ಲಿ ಅತೀ ಹೆಚ್ಚು ಮಾಡುತ್ತಾ ಬರೋಣ ಅದಕ್ಕೇ ತಮ್ಮೆಲ್ಲರ ಸಹಕಾರ ಬೇಕು ಎಂದರು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಮುಮ್ತಾಝ್ ಅಲಿ, ಮಸ್ಜಿದುತ್ವಯಿಬಾ ಅಧ್ಯಕ್ಷ ಅಬ್ದುಲ್ ಹಮೀದ್, ಸ್ಥಳೀಯ ಕಾರ್ಪೊರೇಟರ್ ಶಂಶಾದ್ ಅಬೂಬಕ್ಕರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಮೆಡಿಕಲ್ ಇಂಚಾರ್ಜ್ ಇಲಿಯಾಸ್ ಬಜ್ಪೆ, ಡಿಕೆಎಸ್ ಸಿ ಕೃಷ್ಣಾಪುರ ಘಟಕದ ಅಧ್ಯಕ್ಷ ಇಬ್ರಾಹಿಂ ಬೈಕಂಪಾಡಿ, ಬ್ಲಡ್ ಫೋರಮ್ ಕೃಷ್ಣಾಪುರ ಇದರ ಉಪಾಧ್ಯಕ್ಷ ಕಬೀರ್ ಗುಡ್ಲಕ್, ಕೋಶಾಧಿಕಾರಿ ಮನ್ಸೂರ್ ರಯ್ಯಾನ್ ಹಾಗೂ ಸದಸ್ಯರು ಭಾಗವಹಿಸಿದ್ದರು.

ಮಾಜಿ ಶಾಸಕ ಬಿ.ಎ. ಮೊಯಿದಿನ್ ಬಾವಾ ಆಗಮಿಸಿದ್ದು ರಕ್ತದಾನಿಗಳನ್ನು ಹುರಿದುಂಬಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಿ.ಎಫ್.ಐ. ಸುರತ್ಕಲ್ ಡಿವಿಷನ್ ಸದಸ್ಯ ಇಸ್ಮಾಯಿಲ್ ಮಂಗಳಪೇಟೆ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಬಿರದಲ್ಲಿ 83 ದಾನಿಗಳು ರಕ್ತದಾನ ಮಾಡಿದರು. ಶಂಸುದ್ದೀನ್ ಬಳ್ಕುಂಜೆ ಸ್ವಾಗತಿಸಿ ವಂದಿಸಿದರು.

Join Whatsapp