ದ.ಕ.ಜಿಲ್ಲೆಯಲ್ಲಿ ಕೋವಿಡ್-19 ಮಾರ್ಗಸೂಚಿ ಪ್ರಕಟ: ಕಡ್ಡಾಯ ಪಾಲನೆಗೆ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಸೂಚನೆ

Prasthutha|

►ವಿದೇಶದಿಂದ ಬಂದವರಲ್ಲಿ ರೋಗ ಲಕ್ಷಣಗಳಿದ್ದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್

- Advertisement -

ಮಂಗಳೂರು: ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19ರ ಸನ್ನಿವೇಶವನ್ನು ಪರಿಗಣಿಸಿ ಮತ್ತು ಕೆಲವು ದೇಶಗಳಲ್ಲಿ ಜಾಗತಿಕವಾಗಿ ಹೆಚ್ಚುತ್ತಿರುವ ಪ್ರಕರಣಗಳಿಂದ ಆಗುವ ಅಪಾಯದ ಮೌಲ್ಯಮಾನವನ್ನು ಅನುಸರಿಸಿ, ಸರ್ಕಾರದಿಂದ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

     ಈ ಬಗ್ಗೆ ರಾಜ್ಯ ಕೋವಿಡ್-19 ಟಿಎಸಿ ಮತ್ತು ಕಂದಾಯ ಹಾಗೂ ಆರೋಗ್ಯ ಸಚಿವರು ವಿವರವಾದ ಚರ್ಚೆಗಳನ್ನು, ನಡೆಸಿದ್ದು, ಅದರನ್ವಯ ಕೋವಿಡ್-19ರ ನಿಯಂತ್ರಣಕ್ಕಾಗಿ ಬೆಂಗಳೂರಿನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಕೆಳಗಿನ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

- Advertisement -

ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಂದರ್ಭ:

       ರೋಗ ಲಕ್ಷಣಗಳು ಹೊಂದಿರುವವರು ಮಂಗಳೂರು ವಿಮಾನ ನಿಲ್ದಾಣದಿಂದ ವೈದ್ಯಕೀಯ ಸೌಲಭ್ಯ ಗುರುತಿಸಿಕೊಂಡಿರುವ ವೆನ್ ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್’ನಲ್ಲಿರಿಸಬೇಕು ಮತ್ತು ಅಸ್ತಿತ್ವದಲ್ಲಿರುವ ಕೋವಿಡ್ ಶಿಷ್ಟಾಚಾರದ ಪ್ರಕಾರ ಕಾರ್ಯ ನಿರ್ವಹಿಸುವುದು. ಅಲ್ಲದೇ, ರೋಗಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರು ಕ್ವಾರಂಟೈನ್’ಗಾಗಿ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ ಹತ್ತಿರದ ಅರ್ಹ ಖಾಸಗಿ ಆಸ್ಪತ್ರೆಯನ್ನು ಆಯ್ಕೆ ಮಾಡಬಹುದು ಮತ್ತು ಇದರ ವೆಚ್ಚವನ್ನು ಸಂಬಂಧಿಸಿದ ವ್ಯಕ್ತಿಯೇ ಸ್ವತಃ ಭರಿಸಬೇಕು.

ವಿಮಾನ ನಿಲ್ದಾಣದಲ್ಲಿ ಆಗಮನದ ನಂತರ:

ಆರ್’ಟಿ-ಪಿಸಿಆರ್ ಮಾದರಿ ಪರೀಕ್ಷೆ ಮಾಡಿಸಿಕೊಂಡು ವಿಮಾನ ನಿಲ್ದಾಣದಿಂದ ಹೊರಡುವವರು, ಆರ್’ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಬೇಕು, ಈ ಅವಧಿಯಲ್ಲಿ, ಅವರು ಹೋಮ್ ಕ್ಯಾರಂಟೈನ್’ನಲ್ಲಿದ್ದು, ಕೋವಿಡ್ ರೋಗಲಕ್ಷಣಗಳ ಬಗ್ಗೆ ತಮ್ಮ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡುವುದು ಮತ್ತು ಮುಂದಿನ 7 ದಿನಗಳವರೆಗೆ ಕೋವಿಡ್ ಸಮುಚಿತ ವರ್ತನೆಗಳಾದ (ಸಿಎಬಿ) ಫೇಸ್ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಉಸಿರಾಟದ ವ್ಯಾಯಾಮ ಮತ್ತು ಕೈ, ನೈರ್ಮಲ್ಯ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು, ಈ ಮಧ್ಯೆ, ಜ್ವರ, ಕೆಮ್ಮು, ನೆಗಡಿ, ದೇಹ ನೋವು, ತಲೆ ನೋವು, ರುಚಿ ಮತ್ತು ವಾಸನೆಯ ನಷ್ಟ, ಭೇದಿ, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣಗಳು ಕಂಡುಬಂದಲ್ಲಿ, ಅಂತಹವರು ತಕ್ಷಣ ಸ್ಥಳೀಯ ಕಣ್ಣಾವಲು / ಆರೋಗ್ಯ ತಂಡಕ್ಕೆ ವರದಿ ಮಾಡಬೇಕು ಮತ್ತು ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯ, ಗುರುತಿಸಿಕೊಂಡಿರುವ (ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾಗುವುದು.

ಆರ್’ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಆಗಿದ್ದಲ್ಲಿ ಮಾದರಿಯನ್ನು ಡಬ್ಲ್ಯೂಜಿಎಸ್ ಕಳುಹಿಸಲಾಗುವುದು (ಸಿಟಿ ಮೌಲ್ಯ 25 ಆಗಿದ್ದರೆ).

     ವ್ಯಕ್ತಿಯು ರೋಗಲಕ್ಷಣರಹಿತ ಅಥವಾ ಸ್ವಲ್ಪ ರೋಗಲಕ್ಷಣಗಳನ್ನು ಹೊಂದಿದ್ದರೆ, ಶಿಷ್ಟಾಚಾರವನುಸಾರ, ಸಾಮಾನ್ಯವಾಗಿ 7 ದಿನಗಳವರೆಗೆ ಅಥವಾ ಡಬ್ಲ್ಯೂಜಿಎಸ್ ವರದಿ ಬರುವವರೆಗೆ (ಯಾವುದು ಮೊದಲು) ಕಟ್ಟುನಿಟ್ಟಾದ ಹೋಮ್ ಐಸೋಲೇಶನ್’ನಲ್ಲಿ ಇರುವುದು. (ಸೋಂಕಿತ ವ್ಯಕ್ತಿಯ ಹೋಮ್ ಐಸೋಲೇಶನ್’ನಲ್ಲಿ ಸೌಲಭ್ಯಗಳ ಅನುಸರಣೆಗಾಗಿ ಸೌಲಭ್ಯಗಳ ಸೂಕ್ತತೆಯ ಬಗ್ಗೆ ಕಣ್ಣಾವಲು ತಂಡದ ಮೌಲ್ಯಮಾಪನಕ್ಕೆ ಒಳಪಟ್ಟು). ವ್ಯಕ್ತಿಯು ರೋಗಲಕ್ಷಣವನ್ನು ಹೊಂದಿದ್ದರೆ (ಮಧ್ಯಮದಿಂದ ತೀವ್ರವಾಗಿ), ಅಂತಹವರನ್ನು ತಕ್ಷಣವೇ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯ ಗುರುತಿಸಿಕೊಂಡಿರುವ (ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮುಂದುವರೆದು, ಡಬ್ಲ್ಯೂಜಿಎಸ್ ವರದಿಯು (ಸಾಮಾನ್ಯವಾಗಿ ಏಳು ದಿನಗಳ ನಂತರ ಸ್ವೀಕೃತವಾಗುವ) ಬಿಎಫ್ 7 ಅಥವಾ ಹೊಸ ಉಪ ರೂಪಾಂತರ ವೇರಿಯಂಟ್ ಬಹಿರಂಗವಾದರೆ, ಮತ್ತೊಂದು ಆರ್’ಟಿ-ಪಿಸಿಆರ್ ಮಾದರಿ ಪರೀಕ್ಷೆಯನ್ನು ಮಾಡುವುದು ಮತ್ತು ಅದರ ಫಲಿತಾಂಶಗಳು ತಿಳಿಯುವವರೆಗೂ ಅಂತಹ ವ್ಯಕ್ತಿಯು ಕೋವಿಡ್ ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು. ಪರೀಕ್ಷೆಯ ಫಲಿತಾಂತವು ನಕಾರಾತ್ಮಕವಾಗಿದ್ದಲ್ಲಿ, ಅವರು ಕೋವಿಡ್ ರೋಗಲಕ್ಷಣಗಳ ಬಗ್ಗೆ ತಮ್ಮ ಆರೋಗ್ಯದ ಸ್ವಯಂ-ಮೇಲ್ವಿಚಾರಣೆಯನ್ನು ಮುಂದುವರೆಸುವುದು ಮತ್ತು ಮುಂದಿನ ಏಳು ದಿನಗಳವರೆಗೆ ಕೋವಿಡ್ ಸಮುಚಿತ ವರ್ತನೆಗಳಾದ ಫೇಸ್ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಉಸಿರಾಟದ ವ್ಯಾಯಾಮ ಮತ್ತು ಕೈ ನೈರ್ಮಲ್ಯ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು..

ವಿಮಾನ ನಿಲ್ದಾಣಕ್ಕೆ 12 ವರ್ಷದೊಳಗಿನ ಮಕ್ಕಳು ಅಗಮಿಸಿದ್ದಲ್ಲಿ ಅವರು ವಯಸ್ಕರಿಗೆ ಇರುವ ಕೋವಿಡ್-19 ಶಿಷ್ಟಾಚಾರವನ್ನು ಪಾಲಿಸುವುದು. ಸೂಕ್ಷ್ಮ ಆರೋಗ್ಯವಂತ ಹೆತ್ತವರು ಪೋಷಕರನ್ನು ಹೊರತು ಪಡಿಸಿ ಕೇವಲ ಆರೋಗ್ಯವಂತ ಹೆತ್ತವರು ಪೋಷಕರು ಮಗುವಿನೊಂದಿಗೆ ವೈದ್ಯಕೀಯ ಸೌಲಭ್ಯ ಗುರುತಿಸಿಕೊಂಡಿರುವ ಆಸ್ಪತ್ರೆಗೆ ಹೋಗಬೇಕು ಅಥವಾ ಮಗುವನ್ನು ಲಕ್ಷಣ ರಹಿತ ಸ್ವಲ್ಪ ರೋಗಲಕ್ಷಣದ ಕಾರಣಕ್ಕಾಗಿ ಹೋಮ್ ಐಸೋಲೇಷನ್ ಇರಿಸಿದಲ್ಲಿ ಆರೈಕೆ ನೀಡುವವರಾಗಿರಬೇಕು. ಅಲ್ಲದೇ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಶೇ.2 ರಾಂಡಮ್ ಪರೀಕ್ಷೆಯನ್ನು ಮುಂದುವರೆಸುವುದು ಮತ್ತು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಸಾಮಾನ್ಯ ಸಾರ್ವಜನಿಕರಿಗೆ ಮತ್ತು ಕಾರ್ಯಕ್ರಮ ಆಯೋಜಕರಿಗೆ – ಹೊಸ ವರ್ಷದ ಹಿಂದಿನ ದಿನ, ಹೊಸ ವರ್ಷ ಆಚರಣೆಗಳು ಮತ್ತು ಇತರ ಕಾರ್ಯಕ್ರಮಗಳು / ಸಂದರ್ಭಗಳು:

     ಹೊಸ ವರ್ಷದ ಹಿಂದಿನ ದಿನ (2022ನೇ ಡಿಸೆಂಬರ್ 31) ಮತ್ತು ಹೊಸ ವರ್ಷಕ್ಕೆ (2023ನೇ ಜನವರಿ 1) ಸಂಬಂಧಿಸಿದ ಎಲ್ಲಾ ಆಚರಣೆಗಳನ್ನು ಕ್ರಮವಾಗಿ 2023ನೇ ಜನವರಿ1 ಹಾಗೂ 2ರಂದು ಮಧ್ಯರಾತ್ರಿ 1 ಗಂಟೆಯೊಳಗೆ ಪೂರ್ಣಗೊಳಿಸಬೇಕು.

      ಎಲ್ಲಾ ದೊಡ್ಡ ಮಟ್ಟದ ಸಭೆ ಸಮಾರಂಭಗಳನ್ನು ಕಡ್ಡಾಯವಾಗಿ ಹೊರಾಂಗಣದಲ್ಲಿ ಮಾಡುವುದು ಮತ್ತು ಸಾಧ್ಯವಾದಷ್ಟು ಹಗಲಿನಲ್ಲಿ ಆಯೋಜಿಸಿ, ತಡರಾತ್ರಿ ಮತ್ತು ಮುಂಜಾನೆಯ ಶೀತಗಾಳಿಯನ್ನು ತಪ್ಪಿಸಬೇಕು, ಹೋಟೆಲ್’ಗಳಂತಹ ಒಳಾಂಗಣ ಪ್ರದೇಶಗಳು (ಆಸನಗಳು), ಪಬ್’ಗಳು, ರೆಸ್ಟೋರೆಂಟ್’ಗಳು, ಕ್ಲಬ್’ಗಳು, ರೆಸಾರ್ಟ್ಗಣಳು, ಇತ್ಯಾದಿಗಳಲ್ಲಿ ನಿಗದಿಪಡಿಸಿದ ಸಾಮರ್ಥ್ಯವನ್ನು ಮೀರಬಾರದು.

ವಯಸ್ಸಾದವರು (60 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು ಸಹ-ಅಸ್ವಸ್ಥತೆ ಹೊಂದಿರುವವರು, ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರು ಅಂತ ಸಭೆಗಳನ್ನು ತಪ್ಪಿಸುವುದು ಸೂಕ್ತವಾಗಿರುತ್ತದೆ.

     ಆಯೋಜಕರು, ವ್ಯವಸ್ಥಾಪಕರು ಮತ್ತು ಸೇವಾ ಸಿಬ್ಬಂದಿಗಳು ಆದ್ಯತೆ ಮೇಲೆ ಬೂಸ್ಟರ್ ಡೋಸ್ ವ್ಯಾಕ್ಸಿನೇಶನ್ ಪಡೆಯುವುದು. ಆದಾಗ್ಯೂ, ಎರಡು ಡೋಸ್ ಲಸಿಕೆಯನ್ನು ನಿರೀಕ್ಷಿಸಲಾಗಿದೆ.

ಪ್ರವೇಶ ದ್ವಾರದಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರವೇಶದ್ವಾರರ ಸಂಖ್ಯೆಯನ್ನು ಹೆಚ್ಚಿಸಬೇಕು. ಒಳಾಂಗಣ ಪ್ರದೇಶಗಳಲ್ಲಿ ಕಾರ್ಯಕ್ರಮದಾದ್ಯಂತ ಕಡ್ಡಾಯವಾಗಿ ಮುಖವನ್ನು ಮತ್ತು ಸಾಮಾಜಿಕ ಅಂತರವನ್ನು ಹೊಂದಿರುವುದನ್ನು ಖಾತ್ರಿ ಪಡಿಸಬೇಕು.

ನೋ ಮಾಸ್ಕ್ ನೋ ಎಂಟ್ರಿ ಎಂಬ ಫಲಕವನ್ನು ಪ್ರಮುಖವಾಗಿ ಪ್ರದರ್ಶಿಸುವುದು.

ಎಲ್ಲರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸುವುದು (ಜ್ವರ 100.5 ಡಿಗ್ರಿ ಫ್ಯಾರನ್ ಹೀಟ್, 38 ಡಿಗ್ರಿ ಸೆಲ್ಸಿಯಸ್)

ಜ್ವರ ಅಥವಾ ಕೆಮ್ಮು, ಸ್ರವಿಸುವ ಮೂಗು ಇತ್ಯಾದಿ ಉಸಿರಾಟದ ಲಕ್ಷಣಗಳನ್ನು ಹೊಂದಿರುವವರು ವೈದ್ಯಕೀಯ ಸಮಾಲೋಚನೆಯನ್ನು ಪಡೆಯಲು ಸಲಹೆ ನೀಡುವುದು.

ಒಳಾಂಗಣದಲ್ಲಿ ಎಲ್ಲರೂ ಹ್ಯಾಂಡ್ ಸ್ಯಾಟಿಸರ್ ಅನ್ನು ಉಪಯೋಗಿಸುವಂತೆ ಸೂಚಿಸುವುದು.

ದೊಡ್ಡ ಪ್ರಮಾಣದ ಕಾರ್ಯಕ್ರಮಗಳ ಸಂದರ್ಭದಲ್ಲಿ, ಆಯೋಜಕರು ಅಸ್ವಸ್ಥ ವ್ಯಕ್ತಿಗಳನ್ನು ಸ್ಥಳದಿಂದ ಪಡೆ ಸ್ಥಳಾಂತರಿಸಲು ಅಂಬ್ಯುಲೆನ್ಸ್ ಸೇವೆಗಳಿಗಾಗಿ ಹತ್ತಿರದ ವಿಶೇಷ ಆಸ್ಪತ್ರೆಯೊಂದಿಗೆ ಸಂಪರ್ಕ ವ್ಯವಸ್ಥೆಯನ್ನು ಖಚಿತ ಪಡಿಸಿಕೊಳ್ಳುವುದು.

ಚಿತ್ರಮಂದಿರಗಳಲ್ಲಿ ಮಾಸ್ಕಿಂಗ್ ಕಡ್ಡಾಯ

ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಎನ್-95 ಫೇಸ್ ಮಾಸ್ಕ್ ಅನ್ನು ಧರಿಸತಕ್ಕದ್ದು, ಪ್ರವೇಶ ಸಿಬ್ಬಂದಿಗಳು ಕಡ್ಡಾಯವಾಗಿ ಖಚಿತ ಪಡಿಸಿಕೊಳ್ಳುವುದು.

ಕೋವಿಡ್ 19 ಪರೀಕ್ಷೆ ಮತ್ತು ವ್ಯಾಕ್ಸಿನೇಷನ್:

ಈಗಾಗಲೇ ನಿಗದಿಪಡಿಸಿದಂತೆ ಕೋವಿಡ್- 19 ಪರೀಕ್ಷೆಯ ದೈನಂದಿನ ಗುರಿಯನ್ನು ಸಾಧಿಸುವುದು ಮತ್ತು ಅದೇ ರೀತಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿದಿನ ಆದರ ನಿಗಾವಹಿಸುವುದು. ಪೂರೈಕೆಗಳಿಗೆ ಅನುಗುಣವಾಗಿ ಬೂಸ್ಟರ್ ಡೋನ್ ವ್ಯಾಕ್ಸಿನೇಷನ್ ಅನ್ನು ವೇಗಗೊಳಿಸುವುದು, ಎಲ್ಲಾ ಹಂತಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸುವ ಮೂಲಕ 2022 ಸಾಲಿನ ಡಿಸೆಂಬರ್ ನಿಂದ ಜನವರಿ 2023ರ ಸಮಯದಲ್ಲಿ ಅಸ್ತಿತ್ವದಲ್ಲಿರುವ ಶೇ.21 ರಿಂದ 51ಕ್ಕೆ ಸುಧಾರಿಸುವುದು.

ಜಿಲ್ಲಾ ಮಟ್ಟದಲ್ಲಿ ಕೋವಿಡ್-19 ಸಮಿತಿಗಳು:

ಕೋವಿಡ್-19ಗೆ ಸಂಬಂಧಿಸಿ ಈ ಹಿಂದೆ ರಚಿಸಲಾದ ಸಮಿತಿಗಳು ಕೋವಿಡ್ ಮೂಲಸೌಕರ್ಯ, ಮಾನವ ಸಂಪನ್ಮೂಲ ಲಭ್ಯತೆ, ಡ್ರಗ್ಸ್ ಮತ್ತು ಲಾಜಿಸ್ಟಿಕ್ಸ್ ಅನ್ನು ಸಮಯೋಚಿತವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಆರೋಗ್ಯ ಇಲಾಖೆಯು ಈ ಬಗ್ಗೆ ಪರಿಶೀಲಿಸುವುದು ಹಾಗೂ ಕೋವಿಡ್ 19 ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ಇಲ್ಲಿಯವರೆಗೆ ಸಾಧಿಸಿದ ಪ್ರಗತಿಗಳನ್ನು ಉಳಿಸಿಕೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp