ಕೊಡಗು: ಕಳವು ಪ್ರಕರಣ ಪತ್ತೆ, ಆರೋಪಿ ಬಂಧನ

Prasthutha|

ಮಡಿಕೇರಿ: ಪೊನ್ನಂಪೇಟೆ ಮತ್ತು ಗೋಣಿಕೊಪ್ಪ ಠಾಣಾ ಸರಹದ್ದಿನಲ್ಲಿ ವ್ಯಾಪಾರ ಮಳಿಗೆಗಳ ಕ್ಯಾಶ್ ಕೌಂಟರಿನಿಂದ ಹಣ ಕಳ್ಳತನ ಮಾಡಿದ್ದ 3 ಪ್ರತ್ಯೇಕ ಪ್ರಕರಣಗಳನ್ನು ಪೊನ್ನಂಪೇಟೆ ಠಾಣೆ ಪೊಲೀಸರ ಪತ್ತೆ ಮಾಡಿ ಓರ್ವ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.

- Advertisement -

ದಿನಾಂಕ: 20-04-2022 ರಂದು ರಾತ್ರಿ ಪೊನ್ನಂಪೇ‌ಟೆ ನಿವಾಸಿ ಸೀತಾರಾಮ್‌ ಎಂಬುವವರು ಕಾಫಿ ಅಂಗಡಿಯ  ಬೀಗವನ್ನು ಯಾರೋ ಕಳ್ಳರು ತೆಗೆದು ಒಳನುಗ್ಗಿ  ಕ್ಯಾಶ್‌ ಬಾಕ್ಸ್‌ ನಲ್ಲಿ ಇಟ್ಟಿದ್ದ ರೂ. 1,12,500 ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ದಿನಾಂಕ: 22-07-2022 ರಂದು ಪೊನ್ನಂಪೇಟೆ ನಗರದ ಕೌಶಲ್ಯ ಟ್ರೇಡರ್ಸ್‌ ಸಿಮೆಂಟ್‌ ಅಂಗಡಿಯ ಕ್ಯಾಶ್‌ ಬಾಕ್ಸನ್ನು  ಯಾರೋ ಕಳ್ಳರು ಒಡೆದು  ರೂ. 10,000 ನಗದು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

- Advertisement -

ದಿನಾಂಕ: 26-05-2022 ರಂದು ಪೊನ್ನಂಪೇಟೆ ತಾಲ್ಲೂಕು ಗೋಣಿಕೊಪ್ಪ ಬೈಪಾಸ್‌ ರಸ್ತೆಯಲ್ಲಿರುವ ಪೂವಣ್ಣ ಎಂಬುವವರಿಗೆ ಸೇರಿದ ಡಿ.ಜಿ ಫಾರ್ಮ್ಸ್‌ ಮಳಿಗೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಫೀಡ್ಸ್‌ ಖರೀದಿ ನೆಪದಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು ಡ್ರಾಯರ್‌ನಲ್ಲಿ ಇಟ್ಟಿದ್ದ ರೂ. 51,800 ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು  ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ವಿರಾಜಪೇಟೆ ಉಪವಿಭಾಗ ಡಿವೈ.ಎಸ್‌.ಪಿ  ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರ ನೇತೃತ್ವದ ತನಿಖಾ ತಂಡ ಪ್ರಕರಣದ ಆರೋಪಿ ಹಾಸನ ನಗರದ ವಿಜಯನಗರ 2 ನೇಹಂತ, 4ನೇ ಕ್ರಾಸ್‌ ನಿವಾಸಿ ಮಹಮ್ಮದ್‌ ಇಕ್ಬಾಲ್‌ ತಂದೆ ಪೌತಿ ಜಬ್ಬಾರ್‌ ಎಂಬಾತನನ್ನು ದಸ್ತಗಿರಿ ಮಾಡಿ ಬಂಧಿತನಿಂದ ರೂ. 33,700 ನಗದು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಪತ್ತೆ ಕಾರ್ಯದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಗೋವಿಂದರಾಜು, ಪೊನ್ನಂಪೇಟೆ ಠಾಣೆ ಪಿಎಸ್‌ಐ ಡಿ.ಕುಮಾರ್‌, ಪಿಎಸ್‌ಐ ಹೆಚ್.ಸಿ ಸುಬ್ರಹ್ಮಣ್ಯ, ಸಿಬ್ಬಂದಿಯಾದ ಎಂ.ಡಿ ಮನು, ಮಹದೇಶ್ವರಸ್ವಾಮಿ ಪಾಲ್ಗೊಂಡಿದ್ದರು.

Join Whatsapp