ಕೆ.ಎಂ. ಶರೀಫ್ ಅಗಲಿಕೆ ಫ್ಯಾಸಿಸ್ಟ್ ವಿರುದ್ಧದ ಹೋರಾಟಕ್ಕೆ ತುಂಬಲಾರದ ನಷ್ಟ : ಯಾಸಿರ್ ಹಸನ್

Prasthutha|

ಬೆಂಗಳೂರು ; ಕೆ.ಎಂ. ಶರೀಫ್ ಅಗಲಿಕೆ ಫ್ಯಾಸಿಸ್ಟ್ ವಿರುದ್ಧದ ಹೋರಾಟಕ್ಕೆ ತುಂಬಲಾರದ ನಷ್ಟ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದರು. ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕೆ.ಎಂ. ಶರೀಫ್ – ಬದುಕು ಮತ್ತು ಹೋರಾಟ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

- Advertisement -

ಮರ್ದಿತ ಸಮುದಾಯದ ಧ್ವನಿಯಾಗಿದ್ದ ಕೆ.ಎಂ.ಶರೀಫ್ , ಮುಸ್ಲಿಂ ಸಮುದಾಯದಲ್ಲಿ, ದಮನಿತರಲ್ಲಿ ಆತ್ಮವಿಶ್ವಾಸವನ್ನು ಬಿತ್ತಿ ಗೌರವ, ಸ್ವಾಭಿಮಾನದಿಂದ ಬದುಕುವ ದಾರಿ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದ್ಭುತ ಸಂಘಟನಾ ಶಕ್ತಿ ಹೊಂದಿದ್ದ ಅವರು, ಹಳ್ಳಿ ಹಳ್ಳಿಗಳಿಗೆ ತೆರಳಿ ತಮ್ಮ ಭಾಷಣದ ಮೂಲಕ ಹತಾಶರಾಗಿದ್ದ ಮುಸ್ಲಿಂ ಯುವಕರಲ್ಲಿ ಆತ್ಮವಿಶ್ವಾಸ ತುಂಬಿದರು. ಮೇರು ವ್ಯಕ್ತಿತ್ವದ ಹೋರಾಟಗಾರರಾಗಿದ್ದ ಕೆ.ಎಂ.ಶರೀಫ್ ಅವರ ತ್ಯಾಗದ ಫಲವಾಗಿ ಇಂದು ಸಾವಿರಾರು ಕಾರ್ಯಕರ್ತರು, ನಾಯಕರು ಸೃಷ್ಟಿಯಾಗಿದ್ದಾರೆ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ಅಪಾರ ಅಭಿರುಚಿ ಹೊಂದಿದ್ದ ಕೆ.ಎಂ.ಶರೀಫ್,  ಬಹುಮುಖ ಪ್ರತಿಭೆಯುಳ್ಳ ಸೌಮ್ಯ ಸ್ವಭಾವದ, ಅತ್ಯಂತ ಧೈರ್ಯಶಾಲಿ ನಾಯಕರಾಗಿದ್ದರು. ಫ್ಯಾಸಿಸ್ಟ್ ವಿರುದ್ಧದ ಹೋರಾಟದ ಮುಂಚೂಣಿ ನಾಯಕರಾಗಿದ್ದ ಅವರ ಅಗಲಿಕೆಯಿಂದಾಗಿ ಈ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯ ಪಟ್ಟರು.

- Advertisement -

ಪ್ರತಿರೋಧ ಪ್ರಕೃತಿ ನಿಯಮವಾಗಿದ್ದು, ಸ್ವರಕ್ಷಣೆಗಾಗಿ ಪ್ರತಿಯೊಂದು ಜೀವಿಯೂ ಪ್ರತಿರೋಧ ತೋರುತ್ತದೆ. ಅನ್ಯಾಯ, ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರುವುದು ತಪ್ಪಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಡಾ.ಸಿ.ಎಸ್. ದ್ವಾರಕನಾಥ್ ಹೇಳಿದರು.

ಸಂವಿಧಾನದ ಮೂಲ ಆಶಯವಾದ ಜಾತ್ಯತೀತತೆ ನಾಶವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೆ.ಎಂ. ಶರೀಫ್ ಅವರು ಸಂಘಟನೆಯ ಸಿದ್ಧಾಂತವನ್ನು ದೇಶದ ಮೂಲೆ ಮೂಲೆಗೂ ತಲುಪಿಸಿದರು. ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಸರ್ಕಾರವಾಗಲೀ, ರಾಜಕಾರಣಿಗಳಾಗಲೀ, ಪೊಲೀಸ್ ಇಲಾಖೆಯಾಗಲೀ ರಕ್ಷಣೆ ಕೊಡದಿದ್ದಾಗ ಸ್ವಭಾವಿಕವಾಗಿ ಪ್ರತಿರೋಧ ಆರಂಭವಾಯಿತು. ಇದಕ್ಕಾಗಿ ಹೋರಾಟಗಾರ ಕೆ.ಎಂ.ಶರೀಫ್ ಅವರ ನೇತೃತ್ವದಲ್ಲಿ ಕೆಎಫ್ ಡಿ ಎಂಬ ಸಂಘಟನೆ ಸ್ಥಾಪಿಸಲಾಯಿತು. ಪ್ರತಿರೋಧ ಹುಟ್ಟಿದ ತಕ್ಷಣ ಕೆಲವರಿಗೆ ಇದು ಕೋಮುವಾದಿಯಾಗಿ ಕಂಡಿತು. ಹಾಗಾದರೆ ಪ್ರತಿರೋಧ ತೋರುವುದು ತಪ್ಪೇ ? ಎಂದು ಅವರು ಪ್ರಶ್ನಿಸಿದರು.

ಪ್ರಗತಿಪರರು ಎನಿಸಿಕೊಂಡವರು ಕೂಡ ಪಿಎಫ್ಐ ವಿರುದ್ಧದ ಸುಳ್ಳು ಆಪಾದನೆಯನ್ನು ಕಣ್ಣು ಮುಚ್ಚಿ ನಂಬುತ್ತಿರುವುದು ವಿಷಾದನೀಯ. ಇನ್ನಾದರೂ ಪ್ರಗತಿಪರರು ಸತ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದ ದ್ವಾರಕನಾಥ್, ಸಂವಿಧಾನದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಕೆ.ಎಂ.ಶರೀಫ್ ಅವರ ಹೋರಾಟ, ಆಶಯಗಳನ್ನು ಮುಂದುವರಿಸಿಕೊಂಡು ಹೋಗುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದರು.

ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಜಿ.ಎಂ.ವೀರಸಂಗಯ್ಯ, 19ನೇ ಶತಮಾನದ ಶಿಶುನಾಳ ಶರೀಫರು ಮತ್ತು 20ರ ಶತಮಾನದ ಕೆ.ಎಂ.ಶರೀಫರು ದೇಶದ ಸೌಹಾರ್ದತೆ, ಶಾಂತಿಗಾಗಿ ಶ್ರಮಿಸಿದವರು. ಅವರ ಆದರ್ಶಗಳನ್ನು ಸಮಾಜದಲ್ಲಿ ಇನ್ನಷ್ಟು ಪಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ಪಿಎಫ್ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಮಾತನಾಡಿ, ಓರ್ವ ಹೋರಾಟಗಾರದಲ್ಲಿ ಇರಬೇಕಾದ ಎಲ್ಲಾ ಗುಣಗಳು  ಕೆ.ಎಂ.ಶರೀಫ್ ಅವರಲ್ಲಿತ್ತು. ಅವರ ಜೀವನವೇ ಒಂದು ಹೋರಾಟವಾಗಿತ್ತು. ಅವರು ಸ್ಫೂರ್ತಿಯ ಸೆಳೆಯಾಗಿದ್ದರು ಎಂದು ಬಣ್ಣಿಸಿದರು.

“ನಾವೇ ಕರ್ನಾಟಕ” ಸಂಘಟನೆಯ ಮುಖ್ಯಸ್ಥ ಪಾರ್ವತೀಶ ಬಿಳಿದಾಳೆ ಮಾತನಾಡಿ, ದೂರದೃಷ್ಟಿಯ ನಾಯಕರಾಗಿದ್ದ ಕೆ.ಎಂ.ಶರೀಫ್ ಕೇವಲ ಮುಸ್ಲಿಮರು ಮಾತ್ರವಲ್ಲ ನಮ್ಮಂತಹವರಲ್ಲಿಯೂ ಭರವಸೆ ಮೂಡಿಸಿದ್ದರು.  ದಾಸರ, ಶರಣರ, ಶಿಶುನಾಳ ಶರೀಫರ ಕೆಲವು ಗುಣಗಳು, ಟಿಪ್ಪು ಸುಲ್ತಾನ್ ನ ಛಲ, ನಜೀರ್ ಸಾಬ್ ರ ಅಂತಃಕರಣವನ್ನು ಕೆ.ಎಂ.ಶರೀಫ್ ಹೊಂದಿದ್ದರು ಎಂದು ಬಣ್ಣಿಸಿದರು.

ಪತ್ರಕರ್ತ ರಾ.ಚಿಂತನ್ ಮಾತನಾಡಿ, ಮುಸ್ಲಿಮರು ರಾಜಕೀಯದಲ್ಲಿ ಸಬಲೀಕರಣಗೊಂಡರೆ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು ಎಂದರು.

ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕೆ.ಎಂ.ಶರೀಫ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

Join Whatsapp