ಪಿಎಸ್ ಐ ಅಕ್ರಮ: ಕಿಂಗ್ ಪಿನ್ DYSP ಶಾಂತಕುಮಾರ್ ಬಂಧನ

Prasthutha|

ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಡಿವೈ ಎಸ್ ಪಿ ಶಾಂತಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೇಮಕಾತಿ ವಿಭಾಗದ ಡಿವೈಎಸ್ ಪಿಯಾಗಿದ್ದ ಶಾಂತ್ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

- Advertisement -


ಎರಡು ದಿನಗಳ ಹಿಂದಷ್ಟೆ ನೇಮಕಾತಿ ವಿಭಾಗದಲ್ಲಿ ನಾಲ್ವರು ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಅವರು ನೀಡಿದ ಮಾಹಿತಿಯನ್ನು ಆಧರಿಸಿ ನಿನ್ನೆ ರಾತ್ರಿಯಷ್ಟೇ ಒಎಂಆರ್ ಪ್ರತಿ ತಿದ್ದುಪಡಿ ಮಾಡಿದ ಆರ್ ಎಸ್ ಐ ಲೋಕೇಶಪ್ಪರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಲೋಕೇಶಪ್ಪ ವಿಚಾರಣೆ ವೇಳೆ ನೀಡಿದ ಅಕ್ರಮದ ಮಾಹಿತಿಯನ್ನು ಆಧರಿಸಿ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಂತಕುಮಾರ್ ರನ್ನು ವಿಚಾರಣೆಗೆ ಕರೆಸಿಕೊಂಡಿದ್ದ ಸಿಐಡಿ ಅಧಿಕಾರಿಗಳು ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದಾರೆ.


ಶಾಂತಕುಮಾರ್ 1996 ರ ಬ್ಯಾಚ್ನ ಸಿಎ ಆರ್ ಕಾನ್ಸ್ಟೇಬಲ್ ಆಗಿದ್ದರು. ಆಗಲೇ ತಾಂತ್ರಿಕವಾಗಿ ತುಂಬಾ ಚುರುಕಾಗಿದ್ದರು. ಹೀಗಿದ್ದ ಶಾಂತಕುಮಾರ್ 2006 ರಲ್ಲಿ ಆರ್ ಎಸ್ ಐ ಪರೀಕ್ಷೆ ಬರೆದು ಆರ್ ಎಸ್ ಐ ಆಗಿ ನೇಮಕಗೊಂಡು ಗುಲ್ಬರ್ಗದಲ್ಲಿ ಒಂದು ವರ್ಷ ತರಬೇತಿ ಮುಗಿಸಿ ಬಳಿಕ ಪ್ರೊಬೆಷನರಿ ಅವಧಿಯಲ್ಲಿ ತುಮಕೂರಿನಲ್ಲಿ ಇದ್ದರು. ಅಷ್ಟರಲ್ಲಾಗಲೇ ಪಿಎಸ್ ಐ ನೇಮಕಾತಿ ವಿಭಾಗಕ್ಕೆ ಹಿರಿಯ ಅಧಿಕಾರಿಗಳು ಈ ಶಾಂತಕುಮಾರ್ ರನ್ನು ಸೇರಿಸಿಕೊಳ್ಳುತ್ತಾರೆ. 2007-08 ರಿಂದ ನೇಮಕಾತಿ ವಿಭಾಗದಲ್ಲೇ ಶಾಂತಕುಮಾರ್ ಠಿಕಾಣಿ ಹೂಡಿದಿದ್ದರು. ನೇಮಕಾತಿಯಲ್ಲಿ ಏನೇನಾಗುತ್ತೆ ಎನ್ನುವುದನ್ನು ತಿಳಿದುಕೊಂಡಿದ್ದರು. ಕಳೆದ 2 ವರ್ಷದ ಹಿಂದೆ ಇನ್ಸ್ ಪೆಕ್ಟರ್ ನಿಂದ ಡಿವೈಎಸ್ಪಿ ಆಗಿ ಮುಂಬಡ್ತಿ ಪಡೆದಿದ್ದರು. ಇಡೀ ನೇಮಕಾತಿ ವಿಭಾಗ ಶಾಂತಕುಮಾರ್ ಹಿಡಿತದಲ್ಲಿತ್ತು.
ಒಎಂಆರ್ ತಿದ್ದಲು ಶಾಂತಕುಮಾರ್ ನೆರವಾಗಿದ್ದರು. ಶಾಂತಕುಮಾರ್ ಅಕ್ರಮಕ್ಕೆ ಕೈಜೋಡಿಸಿ ಒಎಂಆರ್ ತಿದ್ದಿಸಿದ್ದಾರೆ. ಈ ಬಗ್ಗೆ ಪುರಾವೆ ಸಂಗ್ರಹಿಸಿದ್ದ ಸಿಐಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

Join Whatsapp