ಗೋ ರಕ್ಷಣೆಯ ಹೆಸರಲ್ಲಿ ಅಮಾಯಕರ ಕೊಲೆ ಅತ್ಯಂತ ಖಂಡನೀಯ : ವೆಲ್ಫೇರ್ ಪಾರ್ಟಿ

Prasthutha|

ಬೆಂಗಳೂರು : ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರೆಂದು ಹೇಳಿಕೊಂಡು ಅಮಾಯಕನ ಕೊಲೆಗೆ ಕಾರಣರಾದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಸಮಾಜದ ಶಾಂತಿಗೆ ಮಾರಕ ಆಗುವಂತಹ ಇಂಥ ದುಷ್ಟರನ್ನು ಹೆಡೆಮುರಿ ಕಟ್ಟಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆಗ್ರಹಿಸಿದರು.

- Advertisement -

ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಕನಕಪುರದ ಬಳಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ಪುನೀತ್ ಕೆರೆಹಳ್ಳಿ ಆತನ ಸಹಚರರು ಗೂಂಡಾ ವರ್ತನೆ ತೋರಿ ಅಮಾಯಕ ಇದ್ರಿಶ್ ಪಾಷಾ ಸಾವಿಗೆ ಕಾರಣರಾಗಿದ್ದಾರೆ. ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆಗಳು, ಕೊಲೆಗಳು ಮಾಡುವ ಹುಚ್ಚುತನಕ್ಕೆ ಕಡಿವಾಣ ಹಾಕಲು ಸರಕಾರ ಮುಂದಾಗಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಪ್ರತಿನಿತ್ಯ ನಡೆಯುವಂತಹ ಇಂಥ ಘಟನೆಗಳೇ ಸಾಕ್ಷಿ ಎಂದು ದೂರಿದರು.

ಕೂಡಲೇ ಇದ್ರಿಸ್ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಬೇಕು. ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು. ರಾಜ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಹುಸೇನ್ ಆಗ್ರಹಿಸಿದರು.

- Advertisement -

ಈಗ ಕಾನೂನು ವ್ಯವಸ್ಥೆ ಚುನಾವಣಾ ಅಧಿಕಾರಿ ಅವರ ಕೈಯಲ್ಲಿದೆ, ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಸಾಮಾನ್ಯ ಜನರಲ್ಲಿ ಆತಂಕ ಮೂಡಿಸಿದೆ, ಹಾಗಾಗಿ ಚುನಾವಣಾ ಆಯೋಗ ಇದರಲ್ಲಿ ಹಸ್ತಕ್ಷೇಪ ಮಾಡಿ ಕೂಡಲೇ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಮತ್ತು ಇಂತಹ ಘಟನೆಗಳು ಮುಂದೆ ನಡೆದಂತೆ ಜನರಲ್ಲಿ ಭರವಸೆ ಮೂಡಿಸಬೇಕೆಂದು ಅವರು ಒತ್ತಾಯಿಸಿದರು.

Join Whatsapp