ಮಂಗಳೂರು: ಕಲ್ಬುರ್ಗಿ ಪಾಲಿಕೆ ‘ಮೇಯರ್’ ವಿಚಾರ; “ಬಕ್ರೀದ್ ಮೇ ಬಚೇಂಗೆ ತೋ, ಮೊಹರಂ ಮೇ ನಾಚೇಂಗೆ” ಎಂದ ಖರ್ಗೆ!

Prasthutha|

ಮಂಗಳೂರು: ಕಲ್ಬುರ್ಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಹೊರತಾಗಿಯೂ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಈ ಕುರಿತು ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, “ಬಕ್ರೀದ್ ಮೇ ಬಚೇಂಗೆ ತೋ, ಮೊಹರಂ ಮೇ ನಾಚೇಂಗೆ” ಎಂದು ಜೆಡಿಎಸ್ ಗೆ ಮೇಯರ್ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿದರು.

- Advertisement -


ಕಲ್ಬುರ್ಗಿ ಜನತೆಯ ಬೆಂಬಲ ಕಾಂಗ್ರೆಸ್ ಪರವಾಗಿದ್ದು, ಈ ಕುರಿತು ಈಗಾಗಲೇ ಕರೆ ಮಾಡಿ ದೇವೇಗೌಡರಿಗೆ ತಿಳಿಸಿದ್ದೇನೆ. ಜನ ಬೆಂಬಲ ಕಾಂಗ್ರೆಸ್ ಪರವಿರುವುದರಿಂದ ಬೆಂಬಲಿಸುವಂತೆ ಕೋರಿದ್ದೇನೆ. ಆದರೆ ಅದೇನು ನಿರ್ಧಾರ ಮಾಡುತ್ತಾರೋ ಅದು ಅವರಿಗೆ ಬಿಟ್ಟ ವಿಚಾರ. ಇಲ್ಲಿ ಎಲ್ಲವೂ ವಿಶ್ವಾಸದ ಮೇಲೆ ನಡೆಯುತ್ತದೆ ಎಂದರು.


ಪಾಲಿಕೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಹಾಗೂ ಪಕ್ಷೇತರ 1 ಸ್ಥಾನವಿದೆ. ಬಿಜೆಪಿಯೇತರ ಸದಸ್ಯರ ಸಂಖ್ಯೆ 32 ಇರೋದರಿಂದ ಸಹಜವಾಗಿಯೇ ಜಾತ್ಯತೀತ ಮತದಾರರು ಹೆಚ್ಚಿದ್ದಾರೆ. ಈ ಬಗ್ಗೆ ಜೆಡಿಎಸ್ ವರಿಷ್ಠರಾದ ದೇವೇಗೌಡರಿಗೆ ಮನವರಿಕೆ ಮಾಡಲಾಗಿದೆ. ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಬದಲಿಗೆ ಮೇಯರ್ ಸ್ಥಾನದ ಕುರಿತಾಗಿ ಸ್ಥಳೀಯ ನಾಯಕರಷ್ಟೇ ನಿರ್ಧರಿಸುತ್ತಾರೆ. ಅಲ್ಲದೇ, ಅಧಿಕಾರ ಸಿಕ್ಕ ಮೇಲೆ ಮೇಯರ್ ಸ್ಥಾನದ ಬಗ್ಗೆ ಚರ್ಚಿಸಿದರಾಯಿತು ಎಂದು ಹೇಳಿದರು.

- Advertisement -

Join Whatsapp